'ಲೆಹರ್ ಸಿಂಗ್ ಡೈರಿಯಲ್ಲಿ ಬಿಜೆಪಿ ವರಿಷ್ಠರಿಗೆ ಹಣ ನೀಡಿರುವುದು ಬಯಲು'
ಮೈಸೂರು, ಫೆಬ್ರವರಿ 26 : ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಬೇಕು. ಆ ಮೂಲಕ ಮುಖ್ಯಮಂತ್ರಿ ಹಾಗೂ ಇತರ ಕಾಂಗ್ರೆಸ್ ಮುಖಂಡರ ತೇಜೋವಧೆ ಮಾಡಿ ರಾಜ್ಯದಲ್ಲಿ ಸಂವಿಧಾನೇತರ ರಾಜಕೀಯ ಬಿಕ್ಕಟ್ಟು ಸೃಷ್ಟಿಸಲು ಬಿಜೆಪಿ ವ್ಯವಸ್ಥಿತ ಷಡ್ಯಂತ್ರ ರಚಿಸಿದೆ ಎಂದು ಆರೋಪಿಸಿ ನ್ಯಾಶನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ವತಿಯಿಂದ ಮೈಸೂರಿನಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಮಾತನಾಡಿದ ಅವರು, ಬಿಜೆಪಿ ವಿಧಾನ ಪರಿಷತ್ ಸದಸ್ಯ ಲೆಹರ್ ಸಿಂಗ್ ಸಿರೋಯ್ ಅವರ ಮನೆಯಲ್ಲೂ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ಸಮಯದಲ್ಲಿ ಡೈರಿ ಸಿಕ್ಕಿದ್ದು, ಅದರಲ್ಲೂ ಬಿಜೆಪಿ ವರಿಷ್ಠರಿಗೆ ಹಣ ನೀಡಿದ ಕುರಿತು ಹೆಸರುಗಳನ್ನು ಸಂಕೇತಗಳಲ್ಲಿ ಬರೆಯಲಾಗಿದೆ.
ಕಾಂಗ್ರೆಸ್ ಮೇಲೆ ಸವಾರಿ ಮಾಡಲು ಹೊರಟಿದ್ದ ಬಿಜೆಪಿಯ ಬಣ್ಣ ಲೆಹರ್ ಸಿಂಗ್ ಡೈರಿಯಿಂದ ಈಗ ಬಯಲಾಗಿದೆ. ಈ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಅವರಿಂದ ರಾಜೀನಾಮೆ ಕೇಳಿದ ಯಡಿಯೂರಪ್ಪ ಅವರು ಲೆಹರ್ ಸಿಂಗ್ ಅವರಿಂದ ಹಾಗೂ ಪ್ರಧಾನಿ ಮೋದಿಯವರಿಂದ ರಾಜೀನಾಮೆ ಕೊಡಿಸಲಿ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ನಗರಪಾಲಿಕೆ ಸದಸ್ಯ ರಘುರಾಜೇ ಅರಸ್, ಸಲೀಂ, ಫರಾನ್ ಆತಿಬ್, ಮಣಿಕಂಠ, ವಿನಯ್, ಸುಲೇಮಾನ್, ರಾಘವೇಂದ್ರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.