ನೀರಿನಲ್ಲಿ ಆಡುವ ಮೈಸೂರು ಮಕ್ಕಳಿಗೆ ಬುದ್ಧಿ ಹೇಳುವವರು ಯಾರು?
ಮೈಸೂರು,ಮಾರ್ಚ್,01: ಸಾಮಾನ್ಯವಾಗಿ ಬೇಸಿಗೆ ಬಂತೆಂದರೆ ಹಳ್ಳಿಯ ಮಕ್ಕಳು ನದಿ, ತೊರೆ, ನಾಲೆಗಳಲ್ಲಿ ಆಟವಾಡುತ್ತಾ ಸಮಯ ಕಳೆಯುತ್ತಾರೆ. ಬಿಸಿಲಿನ ದಗೆಯನ್ನು ನೀರಿನಲ್ಲಿ ಆಡುವುದರ ಮೂಲಕ ತಣಿಸಿಕೊಳ್ಳುತ್ತಾರೆ. ಇದರಿಂದ ಹಲವು ಮಕ್ಕಳು ಪ್ರಾಣ ಕಳೆದುಕೊಂಡ ನಿದರ್ಶನಗಳು ಸಾಕಷ್ಟಿವೆ.
ನಂಜನಗೂಡು ತಾಲೂಕಿನ ರಾಂಪುರ ನಾಲೆಯ ನೀರಿನಲ್ಲಿ ಮಧ್ಯಾಹ್ನದ ವೇಳೆಯಲ್ಲಿ ಮಕ್ಕಳು ಆಡುತ್ತಿರುವುದನ್ನು ಕಂಡ ಗ್ರಾಮಸ್ಥರೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. ಶಿಕ್ಷಕರು ಮತ್ತು ಪೋಷಕರು ಗಮನಹರಿಸಿ ಮಕ್ಕಳನ್ನು ಶಾಲಾ ಅವಧಿಯಲ್ಲಿ ನಾಲೆಯತ್ತ ತೆರಳದಂತೆ ಸೂಚಿಸಲು ತಿಳಿಸಿದ್ದಾರೆ.['ನನಗೆ ರೇಷ್ಮೆ ಸೀರೆ ಕೊಡ್ಸು ಎಂದ ಮಗಳೇ ಇಲ್ಲ' ಇದು ಅಪ್ಪನ ರೋದನ]
ನಾಲೆಯಲ್ಲಿ ಆಟವಾಡುತ್ತಿದ್ದ ಮಕ್ಕಳು ಯಾವ ಶಾಲೆಯವರು ಎಂದು ವಿಚಾರಿಸಿದಾಗ ಅವರು ಉಪ್ಪಲಿಗರಹುಂಡಿ ಸರ್ಕಾರಿ ಶಾಲಾ ಮಕ್ಕಳು ಎಂದು ತಿಳಿದು ಬಂದಿದೆ. ಈ ಮಕ್ಕಳು ಬಿಸಿಯೂಟ ತಿಂದ ಮೇಲೆ ಈ ನಾಲೆಯತ್ತ ಬರುತ್ತಾರೆ.
ಇಲ್ಲಿ ಕೈತೊಳೆದು ಬಹುರ್ದೆಸೆ ಮುಗಿಸಿ ಒಂದಷ್ಟು ಹೊತ್ತು ಆಟವಾಡಿ ಮರಳಿ ತರಗತಿಗೆ ಹೋಗುತ್ತಾರೆ. ಬೇಸಿಗೆಯ ದಿನಗಳಲ್ಲಿ ನಾಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುವುದಿಲ್ಲ. ಒಂದು ವೇಳೆ ಹರಿದು ಬಂದರೆ ಅಪಾಯ ತಪ್ಪಿದ್ದಲ್ಲ. ಅಲ್ಲದೇ ಕೆಲವು ಶಾಲೆಗಳಲ್ಲಿ ಸಮರ್ಪಕವಾದ ಶೌಚಾಲಯ ಇಲ್ಲದಿರುವುದು ಮಕ್ಕಳು ನಾಲೆ ಕಡೆ ಬರುವುದಕ್ಕೆ ಮುಖ್ಯ ಕಾರಣವಾಗಿದೆ.[ಪೋಷಕರೇ, ಮಕ್ಕಳನ್ನು ಫೆವಿಕಾಲ್, ಪೇಯಿಂಟ್ ನಿಂದ ದೂರವಿರಿಸಿ]
ನಾಲೆಗೆ ಬರುವ ಮಕ್ಕಳು ಓದುತ್ತಿರುವ ಉಪ್ಪಲಿಗರಹುಂಡಿ ಸರ್ಕಾರಿ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಒಟ್ಟು 96 ವಿದ್ಯಾರ್ಥಿಗಳಿದ್ದಾರೆ. ಒಬ್ಬರು ಅತಿಥಿ ಶಿಕ್ಷಕರನ್ನು ಸೇರಿಸಿ ಒಟ್ಟು 5 ಜನ ಶಿಕ್ಷಕರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಧ್ಯಾಹ್ನ ಬಿಸಿಯೂಟ ಸೇವಿಸಿದ ಮಕ್ಕಳು ನೇರವಾಗಿ ಗ್ರಾಮದ ಮುಂಭಾಗದಲ್ಲಿರುವ ರಾಂಪುರ ನಾಲೆಗೆ ತೆರಳಿ ನೀರಿನಲ್ಲಿ ಆಟವಾಡುತ್ತಾರೆ.[ಮೈಸೂರಲ್ಲಿ ಮಂಗಳಮುಖಿಯರ ಶೌಚಾಲಯ, ದೇಶದಲ್ಲೇ ಪ್ರಥಮ?]
ಇನ್ನಾದರೂ ಶಾಲಾ ಅವಧಿಯಲ್ಲಿ ಮಕ್ಕಳು ಹೊರಗೆ ಹೋಗದಂತೆ ಶಿಕ್ಷಕರು ಗಮನಹರಿಸಬೇಕಾಗಿದೆ. ಪೋಷಕರು ಶಾಲೆಗೆ ಮಕ್ಕಳನ್ನು ಶಿಕ್ಷಕರನ್ನು ನಂಬಿ ಕಳುಹಿಸುತ್ತಾರೆ. ಮಕ್ಕಳು ಶಾಲೆಯಿಂದ ಹೊರಹೋಗಿ ಅನಾಹುತ ಸಂಭವಿಸಿದರೆ ಹೊಣೆಗಾರರು ಯಾರು? ಆದ್ದರಿಂದ ಶಿಕ್ಷಕರು ಮಕ್ಕಳನ್ನು ಹೊರಗೆ ಕಳುಹಿಸಬಾರದು ಹಾಗೆಯೇ ಪೋಷಕರು ಮಕ್ಕಳಿಗೆ ಬುದ್ದಿಮಾತು ಹೇಳುವ ಅಗತ್ಯವಿದೆ.