ಮೈಸೂರು ರೈತರಿಗೆ ಯಾವುದೇ ಸೌಲಭ್ಯವಿಲ್ಲ, ಗೋಳು ಕೇಳೋರಿಲ್ಲ!
ಮೈಸೂರು, ಜನವರಿ,07 : ರೈತರ ಬದುಕು ಹಸನಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಒಂದೆಡೆ ವನ್ಯ ಪ್ರಾಣಿಗಳ ಹಾವಳಿಯಾದರೆ, ಮತ್ತೊಂದೆಡೆ ಬೆಲೆಕುಸಿತ. ಇವೆಲ್ಲವುಗಳ ನಡುವೆ ಹತ್ತಿ, ಅವರೆಕಾಯಿ ಬೆಳೆ ಬೆಳೆದು ಬದುಕು ಕಟ್ಟಿಕೊಳ್ಳಬಹುದು ಎಂದು ನಂಬಿದ್ದ ಎಚ್ ಡಿ ಕೋಟೆ ವ್ಯಾಪ್ತಿಯ ಹಂಪಾಪುರ ರೈತರಿಗೆ ಪ್ರಕೃತಿಯೇ ಮೋಸ ಮಾಡಿದೆ.
ಮಳೆ ನಂಬಿ ಈ ವ್ಯಾಪ್ತಿಯ ರೈತರು ಬೆಳೆಯನ್ನು ಬೆಳೆದಿದ್ದರು. ಆದರೆ ಮಳೆ ಕೈಕೊಟ್ಟ ಪರಿಣಾಮ ಸುಮಾರು 784 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಹತ್ತಿ, ಅವರೆಕಾಯಿ ಮಾತ್ರವಲ್ಲದೆ ಇತರೆ ಬೆಳೆಗಳು ನೆಲಕಚ್ಚಿವೆ. ಹತ್ತಿ ಹುಲುಸಾಗಿ ಬೆಳೆದಿದ್ದರೂ ಕಾಯಿ ಕಚ್ಚುತ್ತಿಲ್ಲ. ಪರಿಣಾಮ ಸಾಲ ಮಾಡಿ ಬೆಳೆ ಬೆಳೆದ ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ.[ಅರೆರೆ.. ಅವರೆ ಮೇಳ.. ಕೊಂಚ ದುಬಾರಿ, ಆದ್ರೂ ಬರ್ರಿ!]
ಯಾವ ರೈತರಿಗೂ ಸರಿಯಾಗಿ ನೀರಿನ ವ್ಯವಸ್ಥೆಯಿಲ್ಲ. ಹೀಗಾಗಿ ಹವಾಗುಣಕ್ಕೆ ಅನುಗುಣವಾಗಿ ಬೆಳೆಯನ್ನು ಬೆಳೆಯಬೇಕಾದ ಅನಿವಾರ್ಯತೆ ಇದೆ. ದೇವರ ದಯೆಯಿಂದ ಉತ್ತಮ ಮಳೆಯಾಗಿ ಫಸಲು ಬಂದರೆ ರೈತರು ನೆಮ್ಮದಿಯಿಂದ ಬದುಕಬಹುದು ಆದರೆ ಅದು ಇತ್ತೀಚೆಗಿನ ವರ್ಷಗಳಲ್ಲಿ ಮಾತ್ರ ಸಾಧ್ಯವಾಗುತ್ತಿಲ್ಲ.[ಅವರೇ: ಅಡುಗೆಗೆ ಬೇಕಿಲ್ಲ, ಕೋತಿನಾಷ್ಟಕ್ಕೆ ಇರದಿರೇ ಆಗಲ್ಲ]
ಮೈಸೂರು ವ್ಯಾಪ್ತಿಯ ರೈತರು ಪರಿಹಾರ ಕೋರಿ ಅರ್ಜಿ ಸಲ್ಲಿಸಿದರೂ ರಾಜ್ಯ ಸರ್ಕಾರ ಅನಾವೃಷ್ಠಿಗೊಳಗಾದ ರೈತರಿಗೆ ಬರ ಪರಿಹಾರ ನೀಡಲು ಮೀನಾ ಮೇಷ ಎಣಿಸುತ್ತಿದೆ ಎಂಬುದು ರೈತರ ಆರೋಪವಾಗಿದೆ. ಸರ್ಕಾರ ರೈತರು ನೈಜ ಸಮಸ್ಯೆಯನ್ನು ಅರಿತು ಪರಿಹಾರ ವಿತರಿಸಬೇಕಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರೈತರ ಬದುಕು ಮೂರಾಬಟ್ಟೆಯಾಗುವುದರಲ್ಲಿ ಸಂಶಯವಿಲ್ಲ.