ಅಕ್ರಮ ನಡೆದಿದ್ದರೆ ಜೈಲಿಗೆ ಹೋಗಲು ಸಿದ್ಧ: ರಂಗಪ್ಪ
ಮೈಸೂರು, ಆಗಸ್ಟ್ 3 : ನಾನು ಅಧಿಕಾರವಿದ್ದಾಗ ಯಾವುದೇ ಅವ್ಯವಹಾರ ನಡೆದಿಲ್ಲ. ಅಕಸ್ಮಾತ್ ನಡೆದಿದೆ ಎಂದು ಸಾಬೀತಾದರೆ ನನ್ನ ತಲೆದಂಡವಾಗಲಿ, ಹಾಗೆಯೇ ನಾನು ಜೈಲಿಗೆ ತೆರಳಲು ಕೂಡ ಸಿದ್ಧ ಎಂದು ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಸ್ಪಷ್ಟಪಡಿಸಿದ್ದಾರೆ.
ಮೈಸೂರು ಮುಕ್ತವಿವಿಯಲ್ಲಿ ಬಹಿರಂಗಯಾಯ್ತು ನಕಲಿ ಅಂಕಪಟ್ಟಿ ಜಾಲ
ಆಗಸ್ಟ್ 2 ರಂದು, ಮೈಸೂರಿನಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಅವರು, ಏಳು ವರ್ಷಕ್ಕೂ ಅಧಿಕ ಕಾಲ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಅಧಿಕಾರ ನಡೆಸಿದ್ದು, ನನ್ನ ಅಧಿಕಾರಾವಧಿಯಲ್ಲಿ ಹಲವು ಮಾರ್ಪಾಡುಗಳನ್ನು ಮಾಡಿದ್ದೇನೆ. ನಕಲಿ ಅಂಕಪಟ್ಟಿ ವ್ಯವಹಾರ ಯಾರ ಅವಧಿಯಲ್ಲಿ ನಡೆದಿದೆ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಕೆಲವರು ನಡೆದು ಬಂದ ರೀತಿಯನ್ನು ನೋಡಿದಾಗ ತಿಳಿಯುತ್ತದೆ. ನಿಯಮಬಾಹಿರವಾಗಿ ಕೆಟ್ಟ ಕೆಲಸಗಳನ್ನು ಮಾಡುತ್ತಿರುತ್ತಾರೆ. ಅವುಗಳನ್ನೆಲ್ಲ ಬದಿಗೊತ್ತಿ ನಾನು ಕೆಲಸಮಾಡಿದ್ದೇನೆ. ನನ್ನ ಅಧಿಕಾರಾವಧಿಯಲ್ಲಿ 30 ಬೇರೆ ಸಂಸ್ಥೆಗಳು ಜೊತೆಗೂಡಿದ್ದವು.
ಅದನ್ನೂ ಸಹ ಕಾಯಿದೆ ಕಾನೂನಿನ ಅನುಸಾರವೇ ನಡೆಸಲಾಗಿತ್ತು. ನಿಯಮ ಮೀರಿಲ್ಲ. ಕಾನೂನಿನ ಚೌಕಟ್ಟನ್ನು ಮೀರಿಲ್ಲ. ನಾನು ಧೈರ್ಯವಾಗಿ ವಿಚಾರಣೆಯನ್ನು ಎದುರಿಸುತ್ತೇನೆ. ಯಾವುದೇ ವಿಚಾರಣೆಗೂ ನಾನು ಸಿದ್ಧ ಎಂದು ಸ್ಪಷ್ಟಪಡಿಸಿದರು.
ಕುಲಪತಿಗಳ ಗಮನಕ್ಕೆ ಬಾರದೆ ಹಲವು ಕೃತ್ಯ ನಡೆಯುತ್ತವೆ. ಹೀಗಾಗಿ ಇಂತಹ ಜಾಲಗಳನ್ನ ಪತ್ತೆ ಹಚ್ಚಬೇಕು. ಅಂತಹವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಮಧ್ಯೆ ನನ್ನ ಅವಧಿಯಲ್ಲಿ ಇಂತಹ ಅಕ್ರಮ ನಡೆದಿಲ್ಲ. ನಾನು ಎಷ್ಟು ಅಂಕಪಟ್ಟಿಗೆ ಸಹಿ ಮಾಡಿರುವೆ ಅಷ್ಟು ಮಾತ್ರ ಅಂಕಪಟ್ಟಿ ನೀಡಿರುವೆ ಎಂದು ಕೆ.ಎಸ್ ರಂಗಪ್ಪ ತಿಳಿಸಿದರು. ನನ್ನ ಅವಧಿಯಲ್ಲಿ ನಾನು ಕಾನೂನಾತ್ಮಕವಾಗಿ ಕೆಲಸ ಮಾಡಿದ್ದೇನೆ. ರಾಜಕೀಯಕ್ಕೆ ಬರುತ್ತಿರುವುದರಿಂದ ಈ ರೀತಿ ಗೂಬೆ ಕೂರಿಸ್ತಾರೆ. ಹೀಗಾಗಿ ಸಿಬಿಐ, ಸಿಐಡಿ, ಸೇರಿ ಯಾವುದೇ ತನಿಖೆಗೂ ನಾನು ಸಿದ್ಧನಿದ್ದೇನೆ ಎಂದು ಪ್ರೊ.ರಂಗಪ್ಪ ಹೇಳಿದರು.
ಹುಡುಗರ ಪ್ರವೇಶಾತಿ ಎಷ್ಟಿದೆ ಅಷ್ಟೇ ಅಂಕಪಟ್ಟಿಗಳನ್ನು ಮಾಡಲಾಗಿದೆ. ನಕಲಿ ಅಂಕಪಟ್ಟಿಯ ವಿಷಯ ಇಲ್ಲಿ ತನಕ ಗೊತ್ತಿಲ್ಲ. ಯಾರು ಕುಲಸಚಿವರಿದ್ದಾಗ ನಡೆದಿದೆ. ಇನ್ಚಾರ್ಜ್ ಯಾರಿದ್ದರು, ಪರೀಕ್ಷಾಂಗ ಸಚಿವರು ಯಾರು ಇದ್ದರು, ಯಾಕಾಗಿ ಮಾಡಿದ್ದಾರೆ, ಎಲ್ಲವನ್ನೂ ಪತ್ತೆ ಹಚ್ಚಬೇಕು. ಗುರುತರವಾದ ಮಾಹಿತಿ ಪಡೆಯಬೇಕು. ಕೆಲವರನ್ನು ಮಾತ್ರ ಪತ್ತೆ ಮಾಡಿದಾರೆ. ಇನ್ನು ಕೆಲವರ ರಕ್ಷಣೆಯಾಗಿದೆ ಅನ್ನಿಸುತ್ತಿದೆ. ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯಾಗಲೇಬೇಕು. ರಂಗಪ್ಪನವರ ವೇಳೆ, ಆವೇಳೆ, ಈ ವೇಳೆ ಅಂತ ಆಗಬಾರದು ಸೂಕ್ತ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಲಿ ಎಂದು ತಿಳಿಸಿದರು