ಅರಿಶಿಣದ ಮೈ ಆರುವ ಮುನ್ನ ಮಹಿಳೆ ಜೀವನವೇ ಬಾಡಿತು
ಮೈಸೂರು, ನವೆಂಬರ್, 25 : ಅತ್ತೆ ಮನೆಯಲ್ಲಿ ನೀಡುತ್ತಿದ್ದ ವರದಕ್ಷಿಣೆ ಕಿರುಕುಳ ಸಹಿಸಲಾರದೆ ನವವಿವಾಹಿತೆ ನೇಣುಬಿಗಿದುಕೊಂಡಿದ್ದು, ಅರಿಶಿಣದ ಮೈ ಬಾಡುವ ಮುನ್ನವೇ ಸಾವನ್ನಪ್ಪಿರುವ ಘಟನೆ ನಂಜನಗೂಡಿನಲ್ಲಿ ಮಂಗಳವಾರ ನಡೆದಿದೆ.
ನಂಜನಗೂಡು ಪಟ್ಟಣದ ಕಾಯಂಗಡಿ ಬೀದಿಯ ನಿವಾಸಿ ಅಮೃತ್ ಚೌಧರಿ ಎಂಬಾತನ ಪತ್ನಿ ಎಸ್.ಸುಶ್ಮಿತಾ (22) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಮೈಸೂರಿನ ನಿವಾಸಿ ಸುರೇಶ್ ಬಾಬು ಮತ್ತು ಪ್ರತಿಭಾ ದಂಪತಿ ಪುತ್ರಿ ಸುಶ್ಮಿತಾಳನ್ನು ಕಳೆದ 6 ತಿಂಗಳ ಹಿಂದೆ ಲಕ್ಷಾಂತರ ರೂ. ಖರ್ಚು ಮಾಡಿ ಮೈಸೂರಿನ ಜೈನ್ ಭವನದಲ್ಲಿ ವಿವಾಹ ಮಾಡಿಕೊಡಲಾಗಿತ್ತು.[ವರದಕ್ಷಿಣೆ : ಕುಟುಂಬ ಸದಸ್ಯರ ಕಿರುಕುಳ ಬೇಡ, ಕೋರ್ಟ್]
ಸುಶ್ಮಿತಾಳ ಪತಿ ಅಮೃತ್ ಚೌಧರಿ ನಂಜನಗೂಡಿನಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದನು. ಮದುವೆಯಾದ ಹೊಸತರಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದನು. ಸ್ವಲ್ಪದಿನದ ನಂತೆ ಸುಶ್ಮಿತಾಳ ಪತಿ ಅಮೃತ್ ಚೌಧರಿ ಮತ್ತು ಆತನ ಮನೆಯವರು ಆಕೆಗೆ ಮಾನಸಿಕ, ದೈಹಿಕವಾಗಿ ಹಿಂಸೆ ನೀಡುತ್ತಾ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.[ಗೌರಿ ಹಬ್ಬಕ್ಕೆ ಬರಬೇಕಾದವಳು ಎಲ್ಲಿ ಹೋದಳು?]
ಪತಿ ಮನೆಕಡೆಯವರು ಕಿರುಕುಳ ನೀಡುತ್ತಿರುವುದರ ಬಗ್ಗೆ ಸುಶ್ಮಿತಾ ಹೆತ್ತವರಿಗೆ ತಿಳಿಸಿದ್ದಾಳೆ. ಆದರೆ ಹೆತ್ತವರು ಸರಿಹೋಗುತ್ತದೆ ಎಂದು ಮಗಳಿಗೆ ಧೈರ್ಯ ಹೇಳಿದ್ದರು. ಆದರೆ ನೀಡುವ ಹಿಂಸೆ ಹೆಚ್ಚಾದಾಗ ಆಕೆ ಅನ್ಯ ಮಾರ್ಗ ಕಾಣದೆ ರಾತ್ರಿಯಲ್ಲಿ ಮನೆಯ ಹಿಂಭಾಗದಲ್ಲಿನ ಸ್ನಾನದ ಮನೆಯಲ್ಲಿ ತನ್ನದೇ ವೇಲನ್ನು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಘಟನೆ ಬಳಿಕ ಪತಿ ಅಮೃತ್ ಚೌಧರಿ ಸೇರಿದಂತೆ ಅತ್ತೆ ಪ್ರತಿಭಾ, ನಾದಿನಿ ಅನ್ನಪೂರ್ಣ ನಾಪತ್ತೆಯಾಗಿದ್ದು, ಅವರ ವಿರುದ್ಧ ನಂಜನಗೂಡು ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.