ಮೈಸೂರು ದಕ್ಷಿಣ ವಲಯ ಐಜಿಪಿಯಾಗಿ ವಿಫುಲ್ ಕುಮಾರ್
ಮೈಸೂರು ಜನವರಿ 2 : ಮೈಸೂರು ದಕ್ಷಿಣ ವಲಯ ಐಜಿಪಿಯಾಗಿ ವಿಫುಲ್ ಕುಮಾರ್ ಸೋಮವಾರ ಅಧಿಕಾರ ಸ್ವೀಕರಿಸಿದರು. ಐಜಿಪಿ ಬಿ.ಕೆ. ಸಿಂಗ್ ಸ್ವಾಗತಿಸಿದರು.
ಮೈಸೂರಿನ ಐಜಿಪಿ ಕಚೇರಿಯಲ್ಲಿ ಸೋಮವಾರ ನಿರ್ಗಮಿಸುವ ಮುನ್ನ ಐಜಿಪಿ ಬಿ.ಕೆ.ಸಿಂಗ್ ಹೂಗುಚ್ಛ ನೀಡುವ ಮೂಲಕ ನೂತನ ಐಜಿಪಿ ವಿಫುಲ್ ಕುಮಾರ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಹೂಗುಚ್ಛ ಸ್ವೀಕರಿಸಿ ಮಾತನಾಡಿದ ಅವರು ಇಲ್ಲಿನ ಐದು ಜಿಲ್ಲೆಗಳ ವ್ಯಾಪ್ತಿಗೆ ಬರುವ ದಕ್ಷಿಣ ವಲಯದ ಐಜಿಪಿಯಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಆಗುಹೋಗುಗಳನ್ನು ಸಂಪೂರ್ಣವಾಗಿ ತಿಳಿದ ಬಳಿಕ ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತೇನೆ. ಯಾವ ರೀತಿ ಕೆಲಸಗಳು ನಡೆಯಬೇಕೆನ್ನುವುದನ್ನು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವಿಫುಲ್ ಕುಮಾರ್ ಹಿಂದೆ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಹಿಂದೆ ದಕ್ಷಿಣ ವಲಯ ಐಜಿಪಿಯಾಗಿ ಬಿ.ಕೆ.ಸಿಂಗ್ ಕಾರ್ಯನಿರ್ವಹಿಸಿದ್ದರು.
ವಿಪುಲ್ ಕುಮಾರ್ ಅವರಿಗೆ ಕಚೇರಿಯ ಎಲ್ಲ ಸಿಬ್ಬಂದಿ ವರ್ಗವನ್ನು ಸಿಂಗ್ ಪರಿಚಯಿಸಿದರು. ಈ ಸಂದರ್ಭ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್ ಉಪಸ್ಥಿತರಿದ್ದರು.