ಹೂಳು ತುಂಬಿದ ನಾಲೆಗಳಲ್ಲಿ ಹೇಗೆ ನೀರು ಹರಿಯಬೇಕು?
ಮೈಸೂರು, ಆಗಸ್ಟ್ 04 : ನಾವು ರೈತನ ಮಕ್ಕಳು, ರೈತರ ಏಳ್ಗೆಯೇ ನಮ್ಮ ಧ್ಯೇಯ ಎಂದೆಲ್ಲ ಹೇಳುತ್ತಾ ಅಧಿಕಾರಕ್ಕೆ ಬರುವ ಸರ್ಕಾರಗಳು ಕೃಷಿಕರನ್ನು ನಿರ್ಲಕ್ಷಿಸುತ್ತಲೇ ಬರುತ್ತಿವೆ. ರೈತರು ತಮಗೆ ಸಿಗಬೇಕಾದ ಸೌಲಭ್ಯದಿಂದ ವಂಚಿತರಾಗಿ ಸಾಲದ ಸುಳಿಗೆ ಸಿಲುಕಿ ತನ್ನ ಆಮೂಲ್ಯ ಪ್ರಾಣವನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿಗೆ ಬಂದು ನಿಂತಿದ್ದಾನೆ.
ಜಲಾಶಯಗಳಿಂದ ಕೃಷಿ ಭೂಮಿಗೆ ನೀರು ಹರಿಸಲು ಸರ್ಕಾರ ನಾಲೆಗಳನ್ನೇನೋ ನಿರ್ಮಿಸಿದೆ. ಆದರೆ ಆ ನಾಲೆಗಳ ನವೀಕರಣ ನಡೆಯದ ಕಾರಣ ದುಸ್ಥಿತಿಗೀಡಾಗಿ ನೀರು ಸರಾಗವಾಗಿ ಹರಿಯದೆ ಪೋಲಾಗುತ್ತಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆಯೇ ನಾಲೆಗಳ ಸ್ಥಿತಿಗತಿ ಅರಿತು ದುರಸ್ತಿ ಮಾಡಬೇಕಾದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕಣ್ಮುಚ್ಚಿ ಕುಳಿತ ಪರಿಣಾಮ ಹಲವು ನಾಲೆಗಳು ದಯನೀಯ ಸ್ಥಿತಿಯಲ್ಲಿವೆ. ಇಂತಹ ನಾಲೆಗಳ ಪೈಕಿ ಪಿರಿಯಾಪಟ್ಟಣ ತಾಲೂಕಿನ ಕರಡಿ ಲಕ್ಕನ ಕೆರೆ ಯೋಜನೆಯ ಸಹನಾಲೆಯೂ ಒಂದು.
ಕಾವೇರಿ ನಿರಾವರಿ ನಿಗಮದ ಅಧಿಕಾರಿಗಳು ನೀರಾವರಿ ನಾಲೆಗಳ ಬಗ್ಗೆ ಗಮನಹರಿಸಬೇಕಿತ್ತು. ಆದರೆ ಅವರ ನಿರ್ಲಕ್ಷ್ಯದಿಂದಾಗಿ ಹಾರಂಗಿ ಜಲಾಶಯ ತುಂಬಿದ್ದು, ನಾಲೆಗಳಿಗೆ ನೀರು ಬಿಡಲಾಗುತ್ತಿದ್ದರೂ ಕಾಲುವೆಗಳನ್ನು ದುರಸ್ತಿಪಡಿಸದ ಕಾರಣದಿಂದ ಗಿಡಗಂಟಿಗಳು ಬೆಳೆದು ನಿಂತಿದ್ದು ನೀರು ಹರಿಯುವುದೇ ಅಸಾಧ್ಯ ಎನ್ನುವ ಮಟ್ಟಿಗೆ ಇದೆ. [ಜುಲೈ 25ರಿಂದ ಕಬಿನಿ ನಾಲೆಗಳಿಗೆ ನೀರು ಬಿಡಲು ನಿರ್ಧಾರ]
ನೀರು ಹರಿಸುವ ಮುನ್ನ ಅಧಿಕಾರಿಗಳು ಕಾಲುವೆಗಳ ಬಗ್ಗೆ ಪರಿಶೀಲನೆ ನಡೆಸಬೇಕು. ಅವು ಸುಸ್ಥಿತಿಯಲ್ಲಿವೆಯೇ? ಬಿಟ್ಟ ನೀರು ಕೊನೆ ಹಂತದ ಜಮೀನುವರೆಗೆ ತಲುಪುತ್ತದೆಯೇ? ಎಂಬುದನ್ನು ಪರಿಶೀಲಿಸಬೇಕು. ನಾಲೆಗಳು ದುಸ್ಥಿತಿಯಲ್ಲಿರುವ ಜಾಗದಲ್ಲಿ ದುರಸ್ತಿ ಮಾಡಬೇಕು. ನಾಲೆಗಳಲ್ಲಿ ತುಂಬಿರುವ ಹೂಳನ್ನು ತೆಗೆದು, ಅನಗತ್ಯವಾಗಿ ಬೆಳೆದ ಗಿಡಗಂಟಿಗಳನ್ನು ತೆಗೆದು ಸ್ವಚ್ಛಗೊಳಿಸಬೇಕು. [ಕಾವೇರಿ ನದಿ ಉಳಿಸಿ, ಕಾವೇರಿ ನದಿ ಸಂರಕ್ಷಿಸಿ!]
ಕಾಟಾಚಾರಕ್ಕೆ ನೀರು ಬಿಡುಗಡೆ : ಆದರೆ ಇದ್ಯಾವುದು ನಡೆಯುತ್ತಲೇ ಇಲ್ಲ. ಕಾಟಾಚಾರಕ್ಕೆ ಎಂಬಂತೆ ನಾಲೆಗಳಿಗೆ ನೀರು ಹರಿಸಲಾಗುತ್ತದೆ. ಅದು ಸಮರ್ಪಕವಾಗಿ ಬಳಕೆಯಾಗುತ್ತದೆಯಾ ಎಂಬ ಅರಿವಿಲ್ಲದೆ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಈಗಿರುವ ಪರಿಸ್ಥಿತಿಯಲ್ಲಿ ನೀರು ಹರಿದರೆ ಕಾಲುವೆಗಳು ಒಡೆದು ರೈತರ ಜಮೀನು ನಾಶವಾಗುವುದರಲ್ಲಿ ಸಂಶಯವಿಲ್ಲ. ಆಗಾಗ್ಗೆ ಅಲ್ಲಲ್ಲಿ ನಾಲೆಗಳು ಒಡೆಯುತ್ತಿರುವ ನಿದರ್ಶನಗಳು ಕಣ್ಣಮುಂದೆಯೇ ಇದ್ದರೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತಮಗೆ ಸಂಬಂಧವೇ ಇಲ್ಲ ಎಂಬಂತೆ ತೆಪ್ಪಗಿದ್ದಾರೆ.
ಹಾರಂಗಿಗೆ ಸೇರಿದ ನಾಲ್ಕನೆಯ ವಿಭಾಗವು ಪಿರಿಯಾಪಟ್ಟಣ ತಾಲೂಕಿಗೆ ಸೇರಿದ್ದರೂ ಕುಶಾಲನಗರದಲ್ಲಿ ಕಚೇರಿಯಿರುವುದರಿಂದ ಈ ವ್ಯಾಪ್ತಿಯ ಜನ ಕುಶಾಲನಗರಕ್ಕೆ ಹೋಗಬೇಕಾದ ಸ್ಥಿತಿಯಿದೆ. ಕರಡಿಲಕ್ಕನ ಕೆರೆ ಯೋಜನಾ ವ್ಯಾಪ್ತಿಯಲ್ಲಿ ಕಚೇರಿಯಾಗಲಿ, ಅಧಿಕಾರಿಗಳಾಗಲಿ ಇಲ್ಲದೆ ರೈತರು ಪರದಾಡುವಂತಾಗಿದೆ. ದಿನನಿತ್ಯ ಇದೇ ವ್ಯಾಪ್ತಿಯಲ್ಲಿ ಸುತ್ತಾಡುವ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡಬೇಕಾಗಿದೆ. [ಸೀತೆ ಮಿಂದ ಧನುಷ್ಕೋಟಿಯಲ್ಲಿ ಕಾವೇರಿಯ ರುದ್ರನರ್ತನ]