ನಂಜನಗೂಡಲ್ಲಿ ಭರ್ಜರಿ ಮತದಾನ, ಶೇಕಡಾ 76.84 ಮತ ಚಲಾವಣೆ
ನಂಜನಗೂಡು ವಿಧಾನಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ಇಂದು ಮತದಾನ ನಡೆಯುತ್ತಿದೆ. ನಂಜನಗೂಡು ಉಪ ಚುನಾವಣೆಯ ಮತದಾನಕ್ಕೆ ಸಂಬಂಧಿಸಿದ ಲೈವ್ ಅಪ್ಡೇಟ್ಸ್ ಇಲ್ಲಿದೆ.
ನಂಜನಗೂಡು, ಏಪ್ರಿಲ್ 9: ನಂಜನಗೂಡು ವಿಧಾನಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ಇಂದು ಮತದಾನ ನಡೆದಿದೆ. ಗುಂಡ್ಲುಪೇಟೆಯ ಜತೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಪಾಲಿಗೆ ನಂಜನಗೂಡು ಕಣವೂ ಪ್ರತಿಷ್ಠೆಯಾಗಿವೆ.
ಇಲ್ಲಿ ಮಾಜಿ ಸಚಿವ ವಿ ಶ್ರೀನಿವಾಸ್ ಪ್ರಸಾದ್ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಕಳಲೆ ಕೇಶವ ಮೂರ್ತಿ ಕಾಂಗ್ರೆಸಿನಿಂದ ಸ್ಪರ್ಧಿಸುತ್ತಿದ್ದು ಒಟ್ಟು 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಶ್ರೀನಿವಾಸ್ ಪ್ರಸಾದ್ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸವಾಲು ಹಾಕಿರುವುದರಿಂದ ಇಲ್ಲಿ ಶ್ರೀನಿವಾಸ್ ಪ್ರಸಾದ್ ಹಾಗೂ ಮುಖ್ಯಮಂತ್ರಿ ಇಬ್ಬರೂ ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟಿದ್ದಾರೆ.
ಒಟ್ಟು 236 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ನಂಜನಗೂಡಿನಲ್ಲಿ ಮತದಾನ ಖಚಿತಪಡಿಸಿಕೊಳ್ಳಲು ವಿವಿಪ್ಯಾಟ್ ಮತಯಂತ್ರಗಳನ್ನು ಬಳಸಲಾಗುತ್ತಿದೆ. ಮತದಾರರು ಮತದಾನ ಮಾಡಿದ ನಂತರ ಮತ ಸರಿಯಾಗಿ ಬಿದ್ದಿದೆಯೇ ಎಂದು ಖಚಿತಪಡಿಸಿಕೊಳ್ಳಬಹುದು. ನಂಜನಗೂಡು ಉಪ ಚುನಾವಣೆಯ ಮತದಾನಕ್ಕೆ ಸಂಬಂಧಿಸಿದ ಲೈವ್ ಅಪ್ಡೇಟ್ಸ್ ಇಲ್ಲಿದೆ.
6.30: ನಂಜನಗೂಡಲ್ಲಿ ಭರ್ಜರಿ ಶೇಕಡಾ 76.84 ಮತದಾನ. ಶೇಕಡಾ 78.05 ಪುರುಷ ಮತದಾರರು ಹಾಗೂ ಶೇಕಡಾ 75.61 ಮಹಿಳಾ ಮತದಾರರಿಂದ ಮತ ಚಲಾವಣೆ. [ನಂಜನಗೂಡಲ್ಲಿ ಗೊಂದಲ ಮೂಡಿಸಿದ ಚುನಾವಣಾ ಆಯೋಗದ ಸುತ್ತೋಲೆ]
4.30: ಮತದಾನದ ಅಂಕಿ ಅಂಶ ಕಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಫುಲ್ ಖುಷ್ ಆಗಿದ್ದಾರೆ. ರಿಲಾಕ್ಸ್ ಮೂಡ್ ನಲ್ಲಿರುವ ಸಿದ್ದರಾಮಯ್ಯ ರಾಜಕುಮಾರ ಸಿನಿಮಾ ನೋಡಲು ಕುಟುಂಬ ಸಮೇತ ತೆರಳಿದ್ದಾರೆ. 4.15ರ ಶೋದ ಸಿನಿಮಾ ನೋಡುತ್ತಿದ್ದಾರೆ.
3.45: ಇತ್ತೀಚಿನ ಮಾಹಿತಿ ಪ್ರಕಾರ ನಂಜನಗೂಡಿನಲ್ಲಿ ಶೇಕಡಾ 60.69 ಮತದಾನವಾಗಿದೆ.
3.10: "ನಂಜನಗೂಡಿನಲ್ಲಿ ಕಾಂಗ್ರೆಸ್ನಲ್ಲಿ ಹಣದ ಹೊರೆ ಹರಿಸಿದ್ದಾರೆ. ಜನ ಹಣಕ್ಕೆ ಬೆಲೆ ಕೊಡುವುದಿಲ್ಲ. ಹಣ ಹಂಚುವಲ್ಲಿ ಕೆಳಮಟ್ಟದ ಪೊಲೀಸರು ಸಹ ಶಾಮೀಲಾಗಿದ್ದಾರೆ. ಕಾಂಗ್ರೆಸ್ ಹಣದ ಹೊಳೆಯಿಂದ ನನ್ನ ಗೆಲುವಿನ ಅಂತರ ಕಡಿಮೆಯಾಗಲಿದೆ ಅಷ್ಟೇ. ಗೆಲುವು ನನ್ನದೇ. ಮುಖ್ಯಮಂತ್ರಿ ಕೀಳುಮಟ್ಟಕ್ಕೆ ಇಳಿದಿದ್ದಾರೆ," ಎಂಮದು ನಂಜನಗೂಡಿನಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಹೇಳಿಕೆ ನೀಡಿದ್ದಾರೆ.
3.00: ನಂಜನಗೂಡಲ್ಲಿ ಸಿಎಂ ಸಿದ್ದರಾಮಯ್ಯ ಪರಮಾಪ್ತ ಮರಿಗೌಡ ಪ್ರತ್ಯಕ್ಷರಾಗಿದ್ದಾರೆ. ನಂಜನಗೂಡು ಕ್ಷೇತ್ರದ ಲಿಂಗಣ್ಣ ಸರ್ಕಲ್ ನಲ್ಲಿ ಮರಿಗೌಡ ಬೀಡು ಬಿಟ್ಟಿದ್ದು ಆಯೋಗದ ಆದೇಶ ಉಲ್ಲಂಘಿಸಿದ್ದಾರೆ. ಕ್ಷೇತ್ರದ ಮತದಾರರಲ್ಲದವರು ಕ್ಷೇತ್ರ ಬಿಡುವಂತೆ ಚುಣಾವಣಾ ಆಯೋಗ ಆದೇಶ ನೀಡಿದರೂ ಮರಿಗೌಡ ಕ್ಯಾರೇ ಅಂದಿಲ್ಲ.
1.45: ಮತದಾನದಲ್ಲಿ ಮತದಾರರು ಭರ್ಜರಿಯಾಗಿ ತೊಡಗಿಸಿಕೊಳ್ಳುತ್ತಿದು ಮಧ್ಯಾಹ್ನ 1 ಗಂಟೆ ವೇಳೆಗೆ ಶೇಕಡಾ 44.98ರಷ್ಟು ಮತದಾನವಾಗಿದೆ.
1.00: ಊರು ಬಿಟ್ಟಿದ್ದ ಮತದಾರರನ್ನು ನಂಜನಗೂಡಿನ ವೆಂಟಾಚಲಪುರ ಗ್ರಾಮದ ಜನರನ್ನು ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನಿಂದ ಕರೆಸಿದ್ದಾರೆ ಎನ್ನಲಾಗಿದೆ.ಕೂಲಿ ಅರಸಿ ಬೆಂಗಳೂರಿಗೆ ತೆರಳಿದ್ದ 500 ಜನರಲ್ಲಿ 300 ಜನರನ್ನು ಐಶಾರಾಮಿ ವಾಹನದಲ್ಲಿ ಊಟ ಕೊಟ್ಟು ಕರೆತಂದಿದ್ದಾರೆ ಎನ್ನಲಾಗಿದೆ.
11.55: ಕುರಿಹುಂಡಿ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿ ಪಕ್ಷಪಾತ ಮಾಡುತ್ತಿರುವ ಆರೋಪ. ನೀಲಿ ಬಟನ್ ಒತ್ತಿ ಎಂದು ಅಧಿಕಾರಿ ಹೇಳುತ್ತಿದ್ದಾರೆ ಎಂಬ ಕಾರಣಕ್ಕೆ ಮತಗಟ್ಟೆ ಅಧಿಕಾರಿ ಜೊತೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಸ್ಥಳದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ನಂತರ ಪೊಲೀಸರು ಶರೀಫ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
11.30: ನಂಜನಗೂಡಿನಲ್ಲಿ ಬಿರುಸಿನಿಂದ ಮತದಾನ ನಡೆಯುತ್ತಿದ್ದು ಇಲ್ಲಿವರೆಗೆ ಶೇಕಡಾ 30.8 ರಷ್ಟು ಮತದಾನ ನಡೆದಿದೆ.
11.15: ಗ್ರಾಮದ ಮುಖಂಡರ ನೇತೃತ್ವದಲ್ಲಿ ಸೂಕ್ಷ್ಮ ಮತಗಟ್ಟೆ ಬದನವಾಳು ಗ್ರಾಮದಲ್ಲಿ ಶಾಂತಿಯುತ ಮತದಾನ. 22 ವರ್ಷ ದ ಹಿಂದೆ ಎರಡು ಕೋಮುಗಳ ನಡುವೆ ಇಲ್ಲಿ ಚುನಾವಣೆ ವೇಳೆ ಕಲಹ ನಡೆದಿತ್ತು.
11.00: ಮಹದೇವನಗರದ ಜನರು ಮತದಾನ ಬಹಿಷ್ಕರಿಸಿದ್ದಾರೆ. ಮೂಲ ಸೌಕರ್ಯ ಕೊಟ್ಟಿಲ್ಲ ಎಂಬ ಕಾರಣಕ್ಕೆ ಮತದಾನವನ್ನು ಬಹಿಷ್ಕರಿಸಿದ್ದಾರೆ. 700 ಜನರಲ್ಲಿ ಕೇವಲ 12 ಜನ ಮಾತ್ರ ಮತದಾನ ಮಾಡಿದ್ದಾರೆ.
10.00: 9.30ರ ವೇಳೆಗೆ ನಂಜನಗೂಡಿನಲ್ಲಿ ಶೇಕಡಾ 16 ಮತದಾನ. ಚುನಾವಣಾ ಅಧಿಕಾರಿಗಳಿಂದ ಮಾಹಿತಿ.
9.50: ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ಅಶೋಕಪುರಂನಲ್ಲಿ ಗುಂಪು ಘರ್ಷಣೆ ನಡೆದಿದ್ದು ಪೊಲೀಸರು ಲಘು ಲಾಟಿ ಪ್ರಹಾರ ನಡೆಸಿದ್ದಾರೆ.
9.30: ಮತಗಟ್ಟೆ ಸಂಖ್ಯೆ 49ರಲ್ಲಿ ಯಲ್ಲಿ ಮತದಾನ ಸಿಬ್ಬಂದಿಯಿಂದ ಎಡವಟ್ಟು. ಬಲಗೈ ಬದಲಿಗೆ ಎಡಗೈಗೆ ಶಾಹಿ ಹಾಕಿದ ಸಿಬ್ಬಂದಿ. ಚುನಾವಣಾ ನಿಯಮ ಉಲ್ಲಂಘನೆ ಮಾಡಿ 30ಜನರಿಗೆ ತಪ್ಪು ಶಾಹಿ ಹಾಕಿ ಅಡ್ಡ ಮತದಾನಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
9.10: ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಶಾಲು, ಕರಪತ್ರ, ಟೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು. ಅಶೋಕಪುರಂ ಮತಗಟ್ಟೆಯಲ್ಲಿ 100 ಮೀಟರ್ ವ್ಯಾಪ್ತಿಯೊಳಗೆ ಪ್ರಚಾರ ನಡೆಸುತ್ತಿದ್ದರಿಂದ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಎರಡೂ ಪಕ್ಷಗಳ ಕಾರ್ಯಕರ್ತರನ್ನು 100 ಮೀಟರ್ ವ್ಯಾಪ್ತಿಯಿಂದ ಹೊರಕ್ಕೆ ಕಳುಹಿಸಲಾಗಿದೆ. [ರಾಜಕುಮಾರ ಚಿತ್ರ ವೀಕ್ಷಿಸಿ ಸಿದ್ದರಾಮಯ್ಯ ಹೇಳಿದ್ದೇನು?]
9.00: ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಅವರು ಮೈಸೂರು ನಿವಾಸಿ ಆಗಿರುವುದರಿಂದ ಅವರಿಗೆ ಕ್ಷೇತ್ರದಲ್ಲಿ ಮತ ಚಲಾಯಿಸಲು ಅವಕಾಶವಿಲ್ಲ.
8.50: ಮತಗಟ್ಟೆಯ 100 ಮೀಟರ್ ಅಂತರದಲ್ಲಿ ಯಾವುದೇ ಶಾಮಿಯಾನ ಹಾಕಿ ಮತ ಯಾಚಿಸುವುದಾಗಲೀ, ಪಕ್ಷದ ಚಿಹ್ನೆಯಿರುವ ಶಾಲು, ಬ್ಯಾಡ್ಜ್ ಬಳಸುವಂತಿಲ್ಲ. ಆದರೆ ಇಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಎನ್ ಕೇಶವ ಮೂರ್ತಿ ಪಕ್ಷದ ಚಿಹ್ನೆಯಿರುವ ಶಾಲು ಹಾಕಿಕೊಂಡಿದ್ದು ನೀತಿ ಸಂಹಿತೆಯ ಉಲ್ಲಂಘನೆ ಎಂದು ಹೇಳಲಾಗುತ್ತಿದ್ದು, ಚುನಾವಣಾಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. [ಕಾಂಗ್ರೆಸ್ ಹಣದ ಹೊಳೆ ಹರಿಸಿದೆ - ಶ್ರೀನಿವಾಸ್ ಪ್ರಸಾದ್]
8.00: ಸ್ವ ಗ್ರಾಮ ಕಳಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿಯಿಂದ ಮತದಾನ. ಮತಗಟ್ಟೆಯೊಳಕ್ಕೆ ತೆರಳುವ ವೇಳೆ ಕಾಂಗ್ರೆಸ್ ಚಿನ್ಹೆ ಹೊಂದಿರುವ ಶಾಲು ಧರಿಸಿದ್ದ ಕೇಶವಮೂರ್ತಿ. ಇದರಿಂದ ಕಳಲೆ ಕೇಶವಮೂರ್ತಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎನ್ನಲಾಗಿದೆ. [ಕೊರಳಲ್ಲಿ ಕಾಂಗ್ರೆಸ್ ಶಾಲು, ನೀತಿ ಸಂಹಿತೆ ಉಲ್ಲಂಘಿಸಿದ ಕಳಲೆ]
7.30: ನಂಜನಗೂಡು ಉಪಚುನಾವಣೆಯ ಮತದಾನ ಬೆಳಗ್ಗೆ 7ಗಂಟೆಯಿಂದ ಆರಂಭವಾಗಿದೆ. ಜನ ಉತ್ಸಾಹದಿಂದಲೇ ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ಮತಗಟ್ಟೆಗಳ ಮುಂದೆ ಜನ ಮತ ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬರುತ್ತಿದೆ.