ನಂಜನಗೂಡು ಉಪಚುನಾವಣೆ: ಅವರ ಮನೆಗೆ ಇವರು ಹೋದರು!
ಪಕ್ಷದಿಂದ ದೂರವಾಗಿ ಬಿಜೆಪಿ ಸೇರಿದ್ದ ಕಾಂಗ್ರೆಸ್ ನಾಯಕ ದಿವಂಗತ ಎಂ.ಮಹದೇವು ಅವರ ನಿವಾಸಕ್ಕೆ ಭಾನುವಾರ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಭೇಟಿ ನೀಡಿದರು. ಇದು ಕ್ಷೇತ್ರದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ನಂಜನಗೂಡು, ಮಾರ್ಚ್ 20: ನಂಜನಗೂಡು ವಿಧಾನ ಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲಬೇಕೆಂಬ ಹಠಕ್ಕೆ ಬಿದ್ದಿದ್ದು ಅದಕ್ಕಾಗಿ ಬೇಕಾದ ತಂತ್ರಗಳನ್ನು ರೂಪಿಸಲು ನಾಯಕರು ಮುಂದಾಗಿದ್ದಾರೆ.
ಪಕ್ಷದಿಂದ ದೂರವಾಗಿ ಬಿಜೆಪಿ ಸೇರಿದ್ದ ಕಾಂಗ್ರೆಸ್ ನಾಯಕ ದಿವಂಗತ ಎಂ.ಮಹದೇವು ಅವರ ನಿವಾಸಕ್ಕೆ ಭಾನುವಾರ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಭೇಟಿ ನೀಡಿದರು. ಅವರ ಜತೆ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿಯೂ ಇದ್ದರು. ಉಭಯ ನಾಯಕರು ದಿ. ಎಂ.ಮಹದೇವುರವರ ಪತ್ನಿ ರಾಜಮ್ಮರವರ ಜೊತೆ ಸುಮಾರು ಅರ್ಧ ಘಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ಇದು ಕ್ಷೇತ್ರದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಸಚಿವರು ಅಭ್ಯರ್ಥಿ ಕಳಲೆ ಕೇಶವಮೂರ್ತಿರವರ ಗೆಲುವಿಗೆ ಬೆಂಬಲಿಸುವಂತೆ ಮನವಿ ಮಾಡಿದ್ದರೆ, ಅಭ್ಯರ್ಥಿ ಕಳಲೆ ಕೇಶವಮೂರ್ತಿಯವರು ತಮ್ಮ ಗೆಲುವಿಗೆ ಸಹಕಾರ ನೀಡಬೇಕೆಂದು ರಾಜಮ್ಮರವರ ಕಾಲಿಗೆ ಬಿದ್ದು ಬಂದಿದ್ದಾರೆ.
ಚುನಾವಣೆಗೆ ಕೆಲವೇ ದಿನಗಳಿರುವಾಗ ಕ್ಷೇತ್ರದಲ್ಲಿ ಮಿಂಚಿನ ಬೆಳವಣಿಗೆಗಳು ನಡೆಯುತ್ತಿದ್ದು ಬಿಜೆಪಿ ನಾಯಕರ ಮನೆಗೆ ಕಾಂಗ್ರೆಸ್ ಉಸ್ತುವಾರಿ ಸಚಿವರು ಭೇಟಿ ನೀಡಿರುವುದೇ ಇದಕ್ಕೆ ಸಾಕ್ಷಿ.