ನಂಜನಗೂಡು ಗೆಲುವಿಗೆ ಬಿಜೆಪಿ-ಕಾಂಗ್ರೆಸ್ ನಿಂದ ಜಾತಿ ಲೆಕ್ಕಾಚಾರ
ನಂಜನಗೂಡು ಉಪಚುನಾವಣೆಯಲ್ಲಿ ಕೈ ಹಾಗೂ ಕಮಲ ಪಾಳಯದ ಹೆಚ್ಚಿನ ನಾಯಕರು ಜಾತಿ ರಾಜಕಾರಣದತ್ತ ಗಮನ ಹರಿಸಿದ್ದು, ತಮ್ಮ ತಮ್ಮ ಮತ ಕ್ಷೇತ್ರದಲ್ಲಿ ಪ್ರಚಾರ ನಡೆಸಲು ಜಾತಿವಾರು ಮುಖಂಡರನ್ನು ನೇಮಿಸಿದ್ದಾರೆ.
ಮೈಸೂರು, ಮಾರ್ಚ್ 24: ನಂಜನಗೂಡಲ್ಲಿ ಕೇವಲ ಒಂದು ವರುಷದ ಅಧಿಕಾರವಧಿಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಮತಬೇಟೆ ನಡೆಯುತ್ತಿದೆ. ಈ ಕಾವೇರಿದ ಹೋಮ ಕುಂಡಕ್ಕೆ ಉಭಯ ಪಕ್ಷಗಳ ರಾಷ್ಟ್ರೀಯ ನಾಯಕರು ಜಾತಿ ರಾಜಕಾರಣದ ಹವಿಸ್ಸು ಅರ್ಪಿಸಲು ತಯಾರಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಏಪ್ರಿಲ್ 9ರಂದು ನಂಜನಗೂಡಲ್ಲಿ ನಡೆಯಲಿರುವ ಉಪಚುನಾವಣೆಗೆ ಕೈ ಹಾಗೂ ಕಮಲ ಪಾಳಯದ ಹೆಚ್ಚಿನ ನಾಯಕರು ಗಮನ ಹರಿಸಿರುವುದು ಜಾತಿ ರಾಜಕಾರಣದತ್ತ.[ನಂಜನಗೂಡಿನಲ್ಲಿ ಲಿಂಗಾಯತ, ದಲಿತ ಮತಗಳ ಹಿಡಿತ ಯಾರಿಗೆ?]
ಈಗಾಗಲೇ ಉಭಯ ಪಕ್ಷಗಳ ನಾಯಕರು ತಮ್ಮ ಮತ ಕ್ಷೇತ್ರದಲ್ಲಿ ಪ್ರಚಾರ ನಡೆಸಲು ಜಾತಿವಾರು ಮುಖಂಡರನ್ನು ಈಗಾಗಲೇ ನೇಮಿಸಿದೆ. ಆ ನಾಯಕರೇ ತಮ್ಮ ಜಾತಿಯ ಜನರು ಹೆಚ್ಚಾಗಿರುವ ಪ್ರದೇಶಗಳಿಗೆ ತೆರಳಿ ಮತ ಬೇಟೆ ಮಾಡಬೇಕೆಂದು ಪಕ್ಷಗಳ ನಾಯಕರು ಹುಕುಂ ಮಾಡಿದ್ದಾರೆ. ಈ ಮುಲಕ ಜಾತಿ ರಾಜಕಾರಣದ ಮಾಸ್ಟರ್ ಪ್ಲಾನ್ ನ್ನು ನಾಯಕರು ಸಿದ್ದಗೊಳಿಸಿದ್ದಾರೆ.
ಜಾತಿವಾರು ಮತಬೇಟೆ ರಣತಂತ್ರ ಹೇಗೆ?
ನಂಜನಗೂಡಿನಲ್ಲಿ ಸರಿಸುಮಾರು 2 ಲಕ್ಷಕ್ಕೂ ಹೆಚ್ಚು ಮತದಾರರಿದ್ದು, ಅದರಲ್ಲಿ ಹೆಚ್ಚು ಪ್ರಾಬಲ್ಯ ದಲಿತರದ್ದೇ. ಕುರುಬ,ಉಪ್ಪಾರ, ನಾಯಕ, ಮುಸ್ಲಿಂ, ಒಕ್ಕಲಿಗರ ಸಂಖ್ಯೆಯ ಮತದಾರರೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದ್ದರಿಂದ ಜಾತಿ ಲೆಕ್ಕಾಚಾರದಲ್ಲಿ ಹೆಣೆದ ರಣತಂತ್ರದಲ್ಲಿ ಮತಬೇಟೆಯ ಕಾಯಕ ಹೇಗೆ ಕೆಲಸ ನಿರ್ವಹಿಸಲಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ.
ಪ್ರಚಾರ ತಂತ್ರದ ರೂಪುರೇಷೇಗಳು
ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಪರ ಅವರ ಸಂಬಂಧಿ ಹಾಗೂ ಸಂಸದ ಧ್ರುವನಾರಾಯಣ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ, ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನಾ ಹಾಗೂ ಉತ್ತರ ಕರ್ನಾಟಕದ ನಾಯಕ ಜನಾಂಗದ ಮುಖಂಡ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಮಾತ್ರವಲ್ಲ ಜಾತಿ ರಾಜಕಾರಣದ ತಂತ್ರಗಾರಿಕೆಯ ಹೆಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ.[ಕೃಷ್ಣ ಸೇರ್ಪಡೆಯಿಂದ ಪಕ್ಷಕ್ಕೆ ಮತ್ತಷ್ಟು ಬಲ: ಯಡಿಯೂರಪ್ಪ]
ಯಾರ್ಯಾರು ಯಾವ ಕಡೆ
ದಲಿತ ಸಮುದಾಯ ಮತಗಳು ಹೆಚ್ಚಿರುವ ಕಡೆ ಡಾ. ಹೆಚ್.ಸಿ. ಮಹದೇವಪ್ಪ, ಧ್ರುವನಾರಾಯಣ, ಧರ್ಮಸೇನಾ ಅವರು ಪ್ರತಿದಿನ ಪ್ರಚಾರ ಸಭೆ ನಡೆಸುತ್ತಿದ್ದಾರೆ. ಉಪ್ಪಾರ ಸಮುದಾಯದವರು ಹೆಚ್ಚಿರುವ ಗ್ರಾಮಗಳಲ್ಲಿ ಉಪ್ಪಾರ ಸಮುದಾಯದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಸಮುದಾಯದ ಪ್ರಮುಖ ಮುಖಂಡರ ಸಭೆಗಳನ್ನು ನಡೆಸಿ ಕಳಲೆ ಕೇಶವಮೂರ್ತಿ ಪರ ಮತಯಾಚನೆ ನಡೆಸುತ್ತಿದ್ದಾರೆ.
ಬಿಜೆಪಿ ಮತ ಬೇಟೆ
ಇನ್ನು ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ವಿ.ಸೋಮಣ್ಣ, ಸಂಸದೆ ಶೋಭಾ ಕರದ್ಲಾಂಜೆ, ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ರಾಮದಾಸ್ ಹಾಗೂ ಸಂಸದ ಶ್ರೀರಾಮಲು ಶತಯಗತಾಯ ಉಪ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಪ್ರಚಾರದಲ್ಲಿ ತೊಡಗಿದ್ದಾರೆ.
ಜಾತಿ ರಾಜಕಾರಣ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರತಿದಿನ ಬೆಳಗ್ಗೆಯಿಂದ ಸಂಜೆಯವರೆಗೆ ಮಾಜಿ ಸಚಿವ ವಿ.ಸೋಮಣ್ಣ ಜತೆ ತೆರಳಿ ಲಿಂಗಾಯಿತರ ಪ್ರಾಬಲ್ಯವಿರುವ ಕಳಲೆ, ಮುದ್ದಳ್ಳಿ, ನವಿಲೂರು, ಹೊಸಪುರ, ಸೋರಳ್ಳಿ, ಸಿದ್ದಯ್ಯನಹುಂಡಿ, ಕೂಗಲೂರು, ಕಸುವಿನಹಳ್ಳಿ, ಮಾಕನಪುರ ಗ್ರಾಮಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಸಂಸದೆ ಶೋಭಾ ಕರದ್ಲಾಂಜೆ ಒಕ್ಕಲಿಗ ಸಮುದಾಯದ ಪ್ರಮುಖ ಮುಖಂಡರನ್ನ ಭೇಟಿಯಾಗಿ ಮತಯಾಚನೆ ಮಾಡುತ್ತಿದ್ದಾರೆ.
ಶ್ರೀ ರಾಮುಲು ಎಂಟ್ರಿ
ನಾಯಕ ಜನಾಂಗದವರು ಹೆಚ್ಚಿರುವ ಬೇಬೂರು, ಬೆಳಲೆ, ಕಣೇನೂರು, ಇಬ್ಬಾಲ, ಹುಲ್ಲಹಳ್ಳಿ, ಕಪ್ಪುಸೋಗೆ, ಮಾದಪುರ, ಹಗಿನವಾಳು, ಹರತಲೆ ಗ್ರಾಮಗಳಿಗೆ ಸಂಸದ ಶ್ರೀರಾಮಲು ಪಾದಯಾತ್ರೆ ಮಾಡುವ ಮೂಲಕ ಮನೆ ಮನೆಗಳಿಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ವಿ.ಶ್ರೀನಿವಾಸ್ ಪ್ರಸಾದ್ ದಲಿತ ಮತ ಹೆಚ್ಚಿರುವ ಕಡೆ ರೋಡ್ ಶೋ ಮೂಲಕ ಮತಯಾಚನೆ ಮಾಡುತ್ತಿದ್ದಾರೆ.
ಮತದಾರ ಪ್ರಭುವಿನ ಮನದೊಳಗೆ ಯಾವ ರೀತಿ ಲೆಕ್ಕಾಚಾರ ನಡೆಯುತ್ತಿದೆ ಎಂಬುದಕ್ಕೆ ಉತ್ತರ ಏಪ್ರಿಲ್ 13ರಂದು ಹೊರಬೀಳಲಿದೆ. ಜಾತಿ ನಡೆಯೋ ಅಥವಾ ಸಾಮಾಜಿಕ ನಿಲುವೋ ಎಂಬುದನ್ನು ಕಾದು ನೋಡಬೇಕಿದೆ.