ಎಚ್ಡಿ ಕೋಟೆಯಲ್ಲಿ ಸತ್ತ ಹುಲಿಮರಿಗಳ ಉಗುರು ಮಾಯ?
ಮೈಸೂರು, ಮೈಸೂರು 08 : ಎಚ್.ಡಿ.ಕೋಟೆ ತಾಲೂಕಿನ ನಾಗರಹೊಳೆ ಅಭಯಾರಣ್ಯದ ಡಿ.ಬಿ. ಕುಪ್ಪೆ ವಲಯದ ಬಿಸಲವಾಡಿ ಕೆರೆ ಅರಣ್ಯ ಪ್ರದೇಶದಲ್ಲಿ ಸಾವನ್ನಪ್ಪಿದ ಹುಲಿಮರಿಗಳ ಉಗುರು ಮತ್ತು ದಂತ ಮಾಯವಾಗಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಒಂದೇ ವಾರದಲ್ಲಿ ಎರಡು ಹುಲಿ ಮರಿಗಳು ಸಾವನ್ನಪ್ಪಿರುವುದು ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಸುಮಾರು ಒಂದು ವರ್ಷದ ಈ ಹುಲಿ ಮರಿಗಳು ಒಂದು ವಾರದ ಹಿಂದೆ ನಾಗರಹೊಳೆ ಅಭಯಾರಣ್ಯದ ಡಿ.ಬಿ. ಕುಪ್ಪೆ ವಲಯದ ಬಿಸಲವಾಡಿ ಕೆರೆ ಬಳಿ ಕಂಡು ಬಂದಿದ್ದವು. ಈ ಮರಿಗಳನ್ನು ನೋಡಿದ ಅರಣ್ಯಾಧಿಕಾರಿಗಳು ಸಮರ್ಪಕವಾಗಿ ಪೋಷಣೆ ಮಾಡದ ಹಿನ್ನಲೆಯಲ್ಲಿ ಒಂದು ಮರಿ ಸಾವನ್ನಿಪ್ಪಿತ್ತು.[ಗುಂಡ್ರೆ ಅರಣ್ಯದಲ್ಲಿ ಹಸಿವು ತಾಳಲಾರದೆ ಹುಲಿ ಸಾವು]
ಇದೀಗ ಮತ್ತೊಂದು ಹೆಣ್ಣು ಹುಲಿ ಮರಿ ಕೂಡ ಸಾವನ್ನಪ್ಪಿದೆ. ಉಳಿದಿರುವ ಇನ್ನೊಂದು ಹುಲಿ ಮರಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಇಷ್ಟಕ್ಕೂ ಈ ಮೂರು ಮರಿಗಳ ತಾಯಿ ಏನಾಯಿತು? ಹೇಗೆ ಬೇರ್ಪಟ್ಟವು? ತಾಯಿ ಹುಲಿ ಜೀವಂತವಾಗಿದ್ದರೆ ಖಂಡಿತಾ ಮರಿಗಳನ್ನು ಅರಸಿಕೊಂಡು ಬರುತ್ತಿತ್ತು. ಅದು ಏನಾದರು ಬೇಟೆಗಾರರ ಗುಂಡಿಗೆ ಬಲಿಯಾಯಿತೆ? ಹೀಗೆ ಹಲವು ಅನುಮಾನದ ಪ್ರಶ್ನೆಗಳು ಹುಲಿ ಮರಿಗಳ ಸಾವಿನ ಹಿಂದೆ ಗಿರಕಿ ಹೊಡೆಯುತ್ತಿವೆ.[ವೈರಲ್ ವಿಡಿಯೋ: ಹುಲಿಗೆ ಆಹಾರವಾದ ಕಾರಿನಿಂದ ಇಳಿದ ಮಹಿಳೆ]
ಇದಕ್ಕಿಂತ ಹೆಚ್ಚಾಗಿ ಅನುಮಾನ ಹುಟ್ಟಿಸುತ್ತಿರುವ ವಿಚಾರವೆಂದರೆ, ಸತ್ತ ಹೆಣ್ಣು ಹುಲಿ ಮರಿಯ ಉಗುರು ಮತ್ತು ದಂತಗಳು ಮಾಯವಾಗಿರುವುದು. ಮೇಲಾಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂಬ ಆರೋಪವೂ ಕೇಳಿಬರುತ್ತಿದೆ. ಅಥವಾ ಇತರರ ಕೈವಾಡ ಇರಬಹುದೆ? ಅರಣ್ಯ ಸಚಿವರಾದ ರಮಾನಾಥ ರೈ ಅವರು ಇತ್ತ ಗಮನಹರಿಸುವರೆ?