ಆರಡಿ ಎತ್ತರದ ಬ್ಯಾರಿಕೇಡ್ ದಾಟಿದ ಜಂಪಿಂಗ್ ಸ್ಟಾರ್ ಜಂಬೋ!
ಆನೆ ಬುದ್ಧಿವಂತ ಪ್ರಾಣಿ ಎಂಬುದನ್ನು ಯಾವುದೇ ಪ್ರಾಣಿಪ್ರಿಯರು ಖಂಡಿತಾ ಒಪ್ಪುತ್ತಾರೆ. ಆದರೆ ಇಷ್ಟು ಬುದ್ಧಿವಂತಿಕೆ ಇರುತ್ತದಾ ಎಂಬ ಪ್ರಶ್ನೆ ಮೂಡುವಂಥ ವಿಡಿಯೋ ವೈರಲ್ ಆಗಿದೆ. ಆರಡಿ ಬ್ಯಾರಿಕೇಡ್ ಸುಲಭವಾಗಿ ದಾಟಿದ ಜಂಪಿಂಗ್ ಸ್ಟಾರ್ ಇಲ್ಲಿದೆ
ಮೈಸೂರು, ಏಪ್ರಿಲ್ 19: ಆನೆಗಳು ಬರುವುದನ್ನು ತಡೆಯೋದಿಕ್ಕೆ ಏನೇನೋ ಉಪಾಯಗಳನ್ನು ರೈತರು, ಅರಣ್ಯ ಇಲಾಖೆಯವರು ಮಾಡುತ್ತಲೇ ಇರುತ್ತಾರೆ. ಅಂಥದ್ದೇ ಪ್ರಯತ್ನ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲೂ ಮಾಡಲಾಗಿದೆ. ಕಬ್ಬಿಣದ ತಡೆಗೋಡೆಯಂಥದ್ದನ್ನು ನಿರ್ಮಿಸಿದ್ದು, ಮಾನವ ವಸತಿ ಪ್ರದೇಶಗಳ ಕಡೆಗೆ ಬರದಿರಲಿ ಎಂಬ ಉದ್ದೇಶದಿಂದ ಹೀಗೆ ಮಾಡಲಾಗಿದೆ.
ಅದರೆ, ಆನೆಯೊಂದು ಇಂಥ ತಡೆಯನ್ನು ಎಷ್ಟು ಸುಲಭವಾಗಿ ಹಾಗೂ ಚಾಕಚಕ್ಯತೆಯಿಂದ ದಾಟಿದೆ ಅಂದರೆ, ನೋಡಿದವರಿಗೆ ಆಶ್ಚರ್ಯವಾಗಬೇಕು. ಆನೆಯು ತಡೆಯನ್ನು ದಾಟಿರುವ ವಿಡಿಯೋ ಸಕತ್ ವೈರಲ್ ಆಗಿದೆ. ಅದರ ಫೋಟೋಗಳನ್ನು ಇಲ್ಲಿ ಕೊಡಲಾಗಿದೆ. ಇದನ್ನು ನೋಡಿದ ನಂತರ ಆನೆಗಳ ನೆನಪು-ಬುದ್ಧಿವಂತಿಕೆ ಬಗ್ಗೆ ಇರುವ ಮಾತು ಸತ್ಯ ಅಂತ ನೀವೇ ಒಪ್ತೀರಿ.[ಕ್ಯಾಮೆರಾವನ್ನು ಕೋವಿಯೆಂದು ಭ್ರಮಿಸಿ ಓಡಿತೆ ಸಾಕಾನೆ?]
ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಂತೆ ಇರುವ ಹಳ್ಳಿಯೊಂದರಲ್ಲಿ ಆನೆಗಳು ಬರದಿರಲಿ ಎಂಬ ಕಾರಣಕ್ಕೆ ಕಬ್ಬಿಣದ ತಡೆ ಹಾಕಲಾಗಿದೆ. ಆದರೆ ಆನೆ ಅದನ್ನು ತುಂಬ ಸಲೀಸಾಗಿ ದಾಟಿರುವ ದೃಶ್ಯಗಳು ಪರಿಸರ ಪ್ರೇಮಿಯೊಬ್ಬರ ಕ್ಯಾಮೆರಾದಲ್ಲಿ ದಾಖಲಾಗಿದೆ. ಎರಡು ಮೀಟರ್ ಎತ್ತರದ ಬ್ಯಾರಿಕೇಡ್ ಕೂಡ ತುಂಬ ದೊಡ್ಡ ತಡೆಯಲ್ಲ ಎಂದು ಹೇಳುತ್ತಿರುವಂತಿದೆ ಈ ಕಿಲಾಡಿ ಆನೆ.[ಬಂಡೀಪುರದಲ್ಲಿ ಕಾಡಾನೆಗಳ ಪುಂಡಾಟ ತಡೆಗೆ ಬ್ಯಾರಿಕೇಡ್!]
ಬ್ಯಾರಿಕೇಡ್ ಚಾಲೆಂಜ್ ತೆಗೆದುಕೊಂಡ ಆನೆ
ವೀರಹೊಸಹಳ್ಳಿ ಬಳಿ ಕಬ್ಬಿಣದ ಬ್ಯಾರಿಕೇಡ್ ನ ದಾಟುತ್ತಿರುವ ಆನೆಯ ವಿಡಿಯೋ ಮಂಗಳವಾರ ವೈರಲ್ ಆಗಿದೆ. ತಮಾಷೆ ಏನು ಗೊತ್ತಾ? ಸುಮಾರು ಆರು ಅಡಿ ಎತ್ತರದ ತಡೆಯನ್ನು ಆನೆಯನ್ನು ತಡೆಯುವುದಕ್ಕೆ ಅಂತ ಹಾಕಿದ್ದಾರೆ. ಇದೇನು ಮಹಾ ಚಾಲೆಂಜ್ ಎಂಬಂತೆ ಸುಲಭವಾಗಿ ದಾಟಿದೆ.
ಬುದ್ಧಿವಂತ ಆನೆ
ಯಾವುದೇ ವನ್ಯಜೀವಿ ಪ್ರೇಮಿ ತುಂಬ ಸುಲಭವಾಗಿ ಹೇಳಬಲ್ಲರು ಆನೆ ಬಹಳ ಬುದ್ಧಿವಂತ ಪ್ರಾಣಿ ಎಂಬ ಸಂಗತಿಯನ್ನು. ಈ ಫೋಟೋಗಳು ಅದೇ ವಿಷಯವನ್ನು ಮತ್ತೊಮ್ಮೆ ಖಾತ್ರಿ ಪಡಿಸುತ್ತಿದೆ. ಇಷ್ಟು ಎತ್ತರದ ಕಬ್ಬಿಣದ ಬ್ಯಾರಿಕೇಡ್ ನಿಂದ ಆನೆಯನ್ನು ತಡೆಯಬಹುದು ಎಂದುಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳ ಮುಖದ ಎದುರು ಖಿಸಕ್ಕನೆ ನಕ್ಕಂತಿದೆ ಆನೆಯ ಈ ಕೃತ್ಯ.
ದುರ್ಬಲ ಭಾಗದ ಆಯ್ಕೆ
ಈ ಆನೆಯ ಫೋಟೋಗಳನ್ನು ನೋಡಿದ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ನಿರ್ದೇಶಕ ಎನ್.ಮಣಿಕಂದನ್ ಹೇಳುವಂತೆ, ಬ್ಯಾರಿಕೇಡ್ ನ ತಡೆಯ ದುರ್ಬಲವಾದ ಭಾಗವನ್ನು ಆನೆಯು ಹುಡುಕಿಕೊಂಡಿದೆ. "ಪ್ರಾಣಿಯು ದುರ್ಬಲವಾದ ಭಾಗವನ್ನು ಗುರಿ ಮಾಡಿಕೊಳ್ತವೆ. ಕೆಲವು ಕಡೆ ಬ್ಯಾರಿಕೇಡ್ ಎತ್ತರ ಎಂಟು ಅಡಿ ಇದೆ. ಆದ್ದರಿಂದ ಅಂಥ ಕಡೆ ಒಂದೆರಡು ಅಡಿ ಎತ್ತರ ಹೆಚ್ಚಿಸಬೇಕು".
ಮಾನವ-ಪ್ರಾಣಿ ಸಂಘರ್ಷ
ಈ ಆನೆಯ ಫೋಟೋಗಳನ್ನು ನೋಡಿದವರು ಮಜವಾಗಿದೆ ಅಂದುಕೊಳ್ಳಬಹುದು. ಆದರೆ ಇದರಿಂದ ಮಾನವ-ಪ್ರಾಣಿ ಸಂಘರ್ಷದ ಗಂಭೀರ ಸಾಧ್ಯತೆ ಇದೆ ಎಂಬುದನ್ನು ಪರಿಗಣಿಸಬೇಕು. ಕುಗ್ಗುತ್ತಿರುವ ಕಾಡಿನ ಪ್ರಮಾಣ ಹಾಗೂ ಹಿಗ್ಗುತ್ತಿರುವ ಜನ ವಸತಿ ಪ್ರದೇಶ ಅಪಾಯಕಾರಿಯಾದ ಬೆಳವಣಿಗೆ.
ಆನೆ ತಂತ್ರಗಾರಿಕೆ
ಕಾಡಿನಿಂದ ನಡೆದು ಬಂದಿರುವ ಈ ಆನೆ ದಾಟಲು ಅನುಸರಿಸಿದ ತಂತ್ರವನ್ನು ಗಮನಿಸಿ. ಒಂದು ಹೆಜ್ಜೆ ಒಂದು ಸಲಕ್ಕೆ ಎಂಬಂತೆ ದಾಟಿದೆ. ಆಯ ತಪ್ಪದಂತೆ ಸಮತೋಲನ ಕಾಪಾಡಿಕೊಂಡು ಬ್ಯಾರಿಕೇಡ್ ನ ದಾಟಿದೆ.
ಬ್ಯಾರಿಕೇಡ್ ಎತ್ತರ ಹೆಚ್ಚಳ
ಕಬ್ಬಿಣದ ಬ್ಯಾರಿಕೇಡ್ ನ ದುರ್ಬಲ ಭಾಗಗಳ ಬಗ್ಗೆ ತುಂಬ ಗಂಭೀರವಾಗಿ ಆಲೋಚಿಸಿರುವ ಅರಣ್ಯ ಇಲಾಖೆ ಇದೀಗ ಬ್ಯಾರಿಕೇಡ್ ನ ಬಿಗಿ ಮಾಡಲು ನಿರ್ಧರಿಸಿದೆ. ಮಾನವ ಹಾಗೂ ಪ್ರಾಣಿಗಳ ಸುರಕ್ಷೆ ದೃಷ್ಟಿಯಿಂದ ಅರಣ್ಯ ಇಲಾಖೆಯು ಬ್ಯಾರಿಕೇಡ್ ನ ಎತ್ತರವನ್ನು ಹೆಚ್ಚಿಸುವ ಸಾಧ್ಯತೆ ಇದೆ.