ಜನ್ಮಜನ್ಮಾಂತರ ಪಾಪ ಕಳೆಯಲೆಂದು ನಾಗಪ್ಪನಿಗೆ ಪೂಜೆ
ಮೈಸೂರು, ಜುಲೈ 28 : ಶ್ರಾವಣ ಮಾಸದ ಮೊದಲ ದೊಡ್ಡ ಹಬ್ಬವಾದ ನಾಗರ ಪಂಚಮಿಯನ್ನು ನಾಗರ ಕಲ್ಲುಗಳಿಗೆ ಹಾಲೆರೆದು ಜನ್ಮಜನ್ಮಾಂತರದ ಪಾಪಗಳು ನಾಶವಾಗಲೆಂದು, ಕುಟುಂಬಕ್ಕೆ ಒಳಿತಾಗಲೆಂದು ಮೈಸೂರಿನಾದ್ಯಂತ ಭಕ್ತಿಭಾವದಿಂದ ಆಚರಿಸಿದರು.
ನಾಗರ ಪಂಚಮಿ ವೈಶಿಷ್ಟ್ಯ: ತಿಳಿಯಬೇಕಾದ 6 ಸಂಗತಿ
ನಾಗರಾಜನನ್ನು ಪೂಜಿಸಿದರೆ ಎಷ್ಟೋ ಜನ್ಮದ ಪಾಪಗಳು ಪರಿಹಾರವಾಗುತ್ತವೆ, ರೋಗರುಜಿನಗಳು ದೂರವಾಗುತ್ತವೆ, ಇಷ್ಟಾರ್ಥ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ಹಿಂದೂಗಳಲ್ಲಿ ಅಚ್ಚುಮೂಡಿದ್ದು ಮೈಸೂರಿನಲ್ಲೂ ಜನತೆ ಎಂದಿನ ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು.
ನಾಗರಪಂಚಮಿಯೊಂದಿಗೆ ವಿವಿಧ ಹಬ್ಬಗಳ ಸರಣಿಯೂ ಆರಂಭ. ಹಬ್ಬದ ನಿಮಿತ್ತ ಮನೆಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮಹಿಳೆಯರು, ಹುತ್ತಕ್ಕೆ, ನಾಗರಕಟ್ಟೆಗೆ ತೆರಳಿ ಹಾಲೆರೆಯುತ್ತಿದ್ದರು. ನಾಗಚೌತಿಯ ನಂತರ ಬರುವ ಪಂಚಮಿಯಂದು ಹಾಲೆರೆದರೆ ಒಳಿತಾಗುತ್ತದೆ ಎಂಬ ಭಾವನೆ ಜನರಲ್ಲಿದೆ.
ವಿಶೇಷ ಲೇಖನ : ನಾಗಪಂಚಮಿ- ನಾಗಾವಲೋಕನ
ಇಂದು ನಾಗರ ಪಂಚಮಿಯ ಜೊತೆ ಋಗ್ವೇದಿ ಬ್ರಾಹ್ಮಣರಿಗೆ ನೂತನ ಉಪಾಕರ್ಮವೂ ಇದ್ದುದರಿಂದ, ಹಲವಾರು ದೇವಸ್ಥಾನಗಳಲ್ಲಿ, ಮಠಗಳಲ್ಲಿ ಹೊಸದಾಗಿ ಜನಿವಾರವನ್ನು ಹಾಕಿಕೊಳ್ಳುವ ಮೂಲಕ ಹಬ್ಬಕ್ಕೆ ಮತ್ತಷ್ಟು ಕಳೆ ತಂದರು.
ಹೆಂಗಸರಿಗೆ ಪೂಜೆ, ಮಕ್ಕಳಿಗೆ ತಂಬಿಟ್ಟು
ಮಹಿಳೆಯರಿಗೆ ನಾಗಪ್ಪನನ್ನು ಪೂಜಿಸುವ ಸಂಭ್ರಮವಾದರೆ, ಮಕ್ಕಳಿಗೆ ಅಮ್ಮ ಮಾಡಿಟ್ಟ ತಂಬಿಟ್ಟು, ಶೇಂಗಾಪುಟಾಣಿಯ ಉಂಡಿ, ಕೋಡುಬಳೆ, ಚಕ್ಕುಲಿಗಳನ್ನು ತಿನ್ನುವ ತವಕ. ಗಂಡಸರಿಗೆ ಲಗುಬಗನೆ ಪೂಜೆ ಮಾಡಿ, ನಾಗಪ್ಪನಿಗೆ ಹಾಲೆರೆದು ಕಚೇರಿಗೆ ಹೋಗುವ ಗಡಿಬಿಡಿ. ಇತ್ತೀಚಿನ ವರ್ಷಗಳಲ್ಲಿ ಜೋಕಾಲಿ ಆಡುವ ಸಂಭ್ರಮವೇ ಮರೆಯಾಗಿದೆ.
ಅಮೃತೇಶ್ವರ ದೇವಾಯಯದಲ್ಲಿ ವಿಶೇಷ ಪೂಜೆ
ದೇವಾಲಯದ ಆವರಣಗಳ ಅಶ್ವತ್ಥ ಕಟ್ಟೆಗಳಲ್ಲಿ ಪ್ರತಿಷ್ಠಾಪಿಸಿರುವ ನಾಗರಕಲ್ಲುಗಳಿಗೆ ಹಾಲನೆರೆದು, ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ದಿವಾನ್ಸ್ ರಸ್ತೆಯಲ್ಲಿರುವ ಅಮೃತೇಶ್ವರ ದೇವಾಯಯದ ಬಳಿಯಿರುವ ನಾಗರ ಕಲ್ಲುಗಳಿಗೆ ಭಕ್ತರು ಧೂಪದೀಪಗಳಿಂದ ಆರತಿ ಬೆಳಗಿ ಇಷ್ಟಾರ್ಥ ಈಡೇರಿಸುವಂತೆ ಪರಿಪರಿಯಾಗಿ ಪ್ರಾರ್ಥಿಸಿದರು. ಕೇಳಿದ್ದೆಲ್ಲವನ್ನು ನಾಗರಾಜ ಕೊಡುತ್ತಾನೆಂಬ ನಂಬಿಕೆ.
ಹುತ್ತಕ್ಕೆ ಹಾಲನೆರೆಯುವುದೇಕೆ?
ಹಲವಾರು ಮಹಿಳೆಯರು ನಾಗರಕಟ್ಟೆಯಲ್ಲಿರುವ ನಾಗಪ್ಪನ ಮೂರ್ತಿಗೆ ಹಾಲು ಎರೆದರೆ, ಕೆಲವರು ನೇರವಾಗಿ ಹುತ್ತಕ್ಕೆ ಹಾಲನ್ನೆರೆದಿದ್ದಾರೆ. ಹುತ್ತಕ್ಕೆ ಹಾಲನ್ನೆರೆದು, ಬೆಲ್ಲ, ತುಪ್ಪದಂತಹ ಅಂಟಿನ ಪದಾರ್ಥಗಳನ್ನು ಹುತ್ತದಲ್ಲಿ ಹಾಕಿದರೆ, ಹುತ್ತದಲ್ಲಿರುವ ಹಾವುಗಳು ಇರುವೆ ಕಚ್ಚಿ ಸಾಯುತ್ತವೆ ಎಂಬ ಸಂದೇಶವನ್ನು ಇವರಿಗೆ ತಿಳಿಸುವವರು ಯಾರು?
ಹೆಣ್ಣುಮಕ್ಕಳ ಸಂಭ್ರಮಕ್ಕೆ ಎಣೆಯುಂಟೆ?
ಹೆಣ್ಣುಮಕ್ಕಳು ಹಾಲು, ಬಗೆಬಗೆಯ ಸುವಾಸನೆಯ ಹೂವು, ಹಣ್ಣು-ಕಾಯಿ ಸಮರ್ಪಿಸಿ, ಊದಿನಬತ್ತಿ ಬೆಳಗಿ ಶ್ರದ್ಧೆ ಮತ್ತು ಭಕ್ತಿಯಿಂದ ಪೂಜೆ ಸಲ್ಲಿಸಿದ ದೃಶ್ಯ ಸಾಮಾನ್ಯವಾಗಿತ್ತು. ಮನೆಗಳಲ್ಲಿ ಹುತ್ತದ ಮಣ್ಣಿನಿಂದ ಮಾಡಿದ ನಾಗರಕ್ಕೆ ಹಾಲು, ಬೆಲ್ಲ, ಉಪ್ಪು, ಕಡಲೆಕಾಳು, ಹುಣಿಸೆಹಣ್ಣು, ಅರಳು, ಎಳ್ಳು, ತಂಬಿಟ್ಟು ಎರೆಯುವ ಪದ್ಧತಿಯೂ ಇದೆ.
ಬೆಲೆ ಏರಿದರೂ ಆಚರಣೆ ನಿಲ್ಲಲ್ಲ
ನಾಗರಪಂಚಮಿ ನಂತರ ವರಮಹಾಲಕ್ಷ್ಮೀ, ರಕ್ಷಾ ಬಂಧನ, ಗೌರಿ -ಗಣೇಶ ಹಬ್ಬಗಳು ಬರಲಿವೆ. ಹೆಂಗಳೆರಿಗಂತೂ ಸಂಭ್ರಮವೋ ಸಂಭ್ರಮ. ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದ ಗಂಡಸರಿಗೆ ಅಲ್ಪ ಭ್ರಮನಿರಸನ. ಬೆಲೆಗಳು ಏರಲಿ ಬಿಡಲಿ ಹಬ್ಬ ಆಚರಣೆ ಮಾತ್ರ ನಿಲ್ಲುವುದಿಲ್ಲ, ಅಲ್ಲವೆ?