ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು: ಪತಿಗೆ ಪರಸ್ತ್ರೀ ವ್ಯಾಮೋಹ, ನೊಂದ ಗೃಹಿಣಿ ಆತ್ಮಹತ್ಯೆ

ಮೈಸೂರು: ಗಂಡನ ಪರಸ್ತ್ರೀ ವ್ಯಾಮೋಹವನ್ನು ವಿರೋಧಿಸಿ, ಆತ್ಮಹತ್ಯೆಗೆ ಯತ್ನಿಸಿದ್ದ ಗೃಹಿಣಿಯೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ವಿಜಯನಗರದಲ್ಲಿ ನಡೆದಿದೆ.

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 15: ಗಂಡನ ಪರಸ್ತ್ರೀ ವ್ಯಾಮೋಹವನ್ನು ವಿರೋಧಿಸಿ, ಆತ್ಮಹತ್ಯೆಗೆ ಯತ್ನಿಸಿದ್ದ ಗೃಹಿಣಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತರಾದ ಘಟನೆ ವಿಜಯನಗರದಲ್ಲಿ ನಡೆದಿದೆ.

ವರದಕ್ಷಿಣೆಯ ಕಿರುಕುಳ ನೀಡಿ ಮಾನಸಿಕ ಹಿಂಸೆ ನೀಡಿದ್ದರಿಂದ ನೊಂದ ಪತ್ನಿ, ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ವಿಜಯನಗರದ ನಿವಾಸಿ ಅನಿಲ್ ಎಂಬಾತನ ಪತ್ನಿ ಅಂಜಲಿನಾಯಕ್(23) ಆತ್ಮಹತ್ಯೆಗೆ ಶರಣಾದ ದುರ್ದೈವಿ.

ಈಕೆ ವಿಜಯನಗರ ನಿವಾಸಿ ಎಸ್‍ಬಿಐ ಬ್ಯಾಂಕ್‍ನಲ್ಲಿ ವ್ಯವಸ್ಥಾಪಕರಾಗಿದ್ದ ಡಿ.ಮರಿಸ್ವಾಮಿನಾಯಕ್ ಅವರ ಪುತ್ರಿಯಾಗಿದ್ದು, ಈಕೆಯನ್ನು ಕಳೆದೆ ನಾಲ್ಕು ವರ್ಷಗಳ ಹಿಂದೆ ಮೈಸೂರು ನಗರದವರೇ ಆದ ತಿಲಕ್‍ನಗರದ ನಿವಾಸಿ ಶಶಿಕಲಾ ಮತ್ತು ನಾಗರಾಜ್ ಅವರ ಪುತ್ರ ಅನಿಲ್ ಅವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು.

ಮದುವೆಯಾದ ಬಳಿಕ ಕೆಲವು ಸಮಯಗಳವರೆಗೆ ಎಲ್ಲವೂ ಸರಿಯಾಗಿ ನಡೆದುಕೊಂಡು ಹೋಗುತ್ತಿತ್ತಾದರೂ ಬಳಿಕ ಅನಿಲ್‍ನ ರಂಗೀನಾಟ ಅಂಜಲಿಗೆ ತಿಳಿಯ ತೊಡಗಿತ್ತು. ಇದರ ಬಗ್ಗೆ ಗಂಡ ಅನಿಲ್‍ನನ್ನು ಪ್ರಶ್ನಿಸಿದ್ದಳು ಇದು ಆತನ ಕೋಪಕ್ಕೆ ಕಾರಣವಾಗಿತ್ತು.

Mysuru : Vijayanagar resident Home maker Anjali commits suicide Husband Harassment

ವರದಕ್ಷಿಣೆ ಕಿರುಕುಳ: ಯಾವಾಗ ತನ್ನ ರಂಗೀನಾಟ ಹೆಂಡತಿಗೆ ತಿಳಿಯಿತೋ ಅನಿಲ್ ಆಕೆಯೊಂದಿಗೆ ಜಗಳ ಆರಂಭಿಸಿದನಲ್ಲದೆ, ವರದಕ್ಷಿಣೆ ಕಿರುಕುಳ ನೀಡಲು ಆರಂಭಿಸಿದನು. ಇದಕ್ಕೆ ಆತನ ತಾಯಿ ತಂದೆ ಸೇರಿದಂತೆ ಮನೆಯವರು ಸಾಥ್ ನೀಡುತ್ತಿದ್ದರು ಎನ್ನಲಾಗಿದೆ. ಈ ನಡುವೆ ತವರು ಮನೆಗೆ ಹೋಗಿ ಹಣ ತೆಗೆದುಕೊಂಡು ಬಾ ಎಂದು ಆಕೆಯನ್ನು ತವರು ಮನೆಗೆ ಕಳುಹಿಸಲಾಗಿತ್ತು. ವಿಜಯನಗರದ ತವರುಮನೆಗೆ ಬಂದಿದ್ದ ಆಕೆ ಮನೆಯಲ್ಲಿ ಹಣ ಕೇಳಲಾಗದೆ ಸಮಯ ಕಳೆದಿದ್ದಳು.

ಮಗಳು ಗಂಡನ ಮನೆಯಲ್ಲಿ ನೆಮ್ಮದಿಯಾಗಿಲ್ಲ ಎಂಬುದು ಹೆತ್ತವರಿಗೆ ತಿಳಿಯಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ಮಗಳನ್ನು ಮುದ್ದಿನಿಂದ ಸಾಕಿ ಮದುವೆ ಮಾಡಿಕೊಡುವ ಮೂಲಕ ನರಕಕ್ಕೆ ತಳ್ಳಿ ಬಿಟ್ಟೆವಲ್ಲ ಎಂಬ ನೋವು ಹೆತ್ತವರನ್ನು ಕಾಡಿತ್ತು. ಆದರೆ ಅದನ್ನು ತೋರಿಸಿಕೊಳ್ಳದೆ ಆಕೆಗೆ ಧೈರ್ಯ ತುಂಬಿದ್ದರು.

ಮಗಳು ಎಲ್ಲವನ್ನು ಎದುರಿಸಿ ಬದುಕಿ ತೋರಿಸುತ್ತಾಳೆ ಎಂದು ಹೆತ್ತವರು ನಂಬಿದ್ದರಾದರೂ ಅಂಜಲಿ ಮಾತ್ರ ಮಾನಸಿಕವಾಗಿ ಕುಗ್ಗಿಹೋಗಿದ್ದಳು. ಅಷ್ಟೇ ಅಲ್ಲ ತನ್ನ ಸಮಸ್ಯೆಗೆ ಆತ್ಮಹತ್ಯೆವೊಂದೇ ಪರಿಹಾರ ಎಂಬ ತೀರ್ಮಾನಕ್ಕೆ ಬಂದು ಬಿಟ್ಟಿದ್ದಳು. ಎಲ್ಲರೂ ಹೊಸವರ್ಷದ ಸಂಭ್ರಮದಲ್ಲಿದ್ದರೆ, ಅಂಜಲಿ ಜ.1ರಂದು ತವರು ಮನೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಳು.

ತಕ್ಷಣ ಮನೆಯವರು ಆಕೆಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರು. ಸುಮಾರು 15 ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಅಂಜಲಿ ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.

ಈ ಸಂಬಂಧ ಅಂಜಲಿ ತಂದೆ ಡಿ. ಮರಿಸ್ವಾಮಿನಾಯಕ್ ಅವರು ನೀಡಿದ ದೂರಿನ ಮೇರೆಗೆ ವಿಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

English summary
Mysuru : A home maker Anjali Nayak resident of Vijayanagar has committed suicide after complaining about her husband having illicit relationship. Police have registered a dowry harassment case against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X