ಡಿ.13ರಂದು ಮೈಸೂರು ವಿವಿ 97ನೇ ಘಟಿಕೋತ್ಸವ
ಮೈಸೂರು, ಡಿಸೆಂಬರ್. 8 : ಮೈಸೂರು ವಿಶ್ವವಿದ್ಯಾನಿಲಯದ 97ನೇ ವಾರ್ಷಿಕ ಘಟಿಕೋತ್ಸವವು ಡಿಸೆಂಬರ್.13ರಂದು ಕ್ರಾಫರ್ಡ್ ಹಾಲ್ ನಲ್ಲಿ ನಡೆಯಲಿದೆ ಎಂದು ಪ್ರೊ. ಕೆ.ಎಸ್. ರಂಗಪ್ಪ ಅವರು ತಿಳಿಸಿದರು.
ಬುಧವಾರದಂದು ಕ್ರಾಫರ್ಡ್ ಹಾಲ್ ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದ ರಾಜ್ಯಪಾಲರು ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಕುಲಾಧಿಪತಿ ವಜುಭಾಯ್ ರೂಡಾಭಾಯ್ ವಾಲಾ ಅವರು ಅಧ್ಯಕ್ಷತೆ ವಹಿಸುವರು.
ಟಿಬೆಟ್ ಜನಾಂಗದ 14ನೇ ಧರ್ಮಗುರು ದಲೈ ಲಾಮ ಘಟಿಕೋತ್ಸವದ ಭಾಷಣ ಮಾಡಲಿದ್ದು. ಉನ್ನತ ಶಿಕ್ಷಣ ಸಚಿವ ಹಾಗೂ ಮೈಸೂರು ವಿವಿ ಸಮ ಕುಲಾಧಿಪತಿಗಳಾದ ಬಸವರಾಜ ರಾಯರೆಡ್ಡಿ ಅವರು ಉಪಸ್ಥಿತರಿರುವರು ಎಂದರು. [ದಲೈಲಾಮಾ, ಪ್ರಮೋದಾ ದೇವಿಗೆ ಗೌರವ ಡಾಕ್ಟರೇಟ್]
ಕಾರ್ಯಕ್ರಮದಲ್ಲಿ ದಲೈ ಲಾಮ ಮತ್ತು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು. ಈ ಶೈಕ್ಷಣಿಕ ವರ್ಷದಲ್ಲಿ ಎರಡು ಘಟಿಕೋತ್ಸವಗಳನ್ನು ನಡೆಸಲು ವಿಶೇಷ ಅನುಮತಿಯನ್ನು ಪಡೆಯಲಾಗಿದ್ದು, ಕಾಯಿದೆಯನ್ನು ಉಲ್ಲಂಘಿಸಿಲ್ಲ ಎಂದು ಪ್ರೊ. ಕೆ.ಎಸ್. ರಂಗಪ್ಪ ಅವರು ತಿಳಿಸಿದರು.
ವಿದ್ಯಾರ್ಥಿನಿಯರೇ ಮೇಲುಗೈ: 97ನೇ ಘಟಿಕೋತ್ಸವದಲ್ಲಿ 16,675 ವಿದ್ಯಾರ್ಥಿಗಳು ಪದವಿಯನ್ನು ಪಡೆಯಲಿದ್ದು, ಇವರಲ್ಲಿ 10,798 ವಿದ್ಯಾರ್ಥಿನಿಯರೇ ಇದ್ದಾರೆ.
312 ಪದಕಗಳು ಮತ್ತು 180 ನಗದು ಬಹುಮಾನವನ್ನು 201 ವಿತರಿಸಲಾಗುತ್ತಿದ್ದು. ಒಟ್ಟು 7,388 ವಿದ್ಯಾರ್ಥಿಗಳಲ್ಲಿ 3,889 ಮಹಿಳಾ ವಿದ್ಯಾರ್ಥಿಗಳು (ಶೇ.53) ಸ್ನಾತಕೋತ್ತರ ಪದವಿ ಪಡೆಯಲಿದ್ದಾರೆ.
ಕಲಾ ಪದವಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರು ಕಾವ್ಯ.ಎಸ್ 3 ಪದಕ ಮತ್ತು 3 ನಗದು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ರಶ್ಮಿ ಜಿ. ಪ್ರಭು ಪ್ರಥಮ ಸ್ಥಾನ ಪಡೆದಿದ್ದು, ಮೂರು ಪದಕ ಮತ್ತು ಐದು ನಗದು ಬಹುಮಾನಗಳನ್ನು ಪಡೆಯಲಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಮಸೀರಾ ಖಾನುಮ್ ಪ್ರಥಮ ಸ್ಥಾನದೊಂದಿಗೆ, 2 ಪದಕ ಮತ್ತು 2 ನಗದು ಬಹುಮಾನಗಳನ್ನು ಪಡೆಯಲಿದ್ದಾರೆ. ಗಾಯತ್ರಿ ಜಿ.ಎಸ್. 4 ಪದಕ ಮತ್ತು 6 ನಗದು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಸ್ನಾತಕೋತ್ತರ ವಿಭಾಗದಲ್ಲಿ ವೇದಾವತಿ ಪ್ರಥಮ ಸ್ಥಾನವನ್ನು ಪಡೆದಿದ್ದು, 7 ಪದಕಗಳು ಮತ್ತು 4 ನಗದು ಬಹುಮಾನಗಳನ್ನು ಪಡೆಯಲಿದ್ದಾರೆ. ವಾಣಿಜ್ಯ ವಿಭಾಗದ ವರ್ಷ ಎಂ. ಕೌಶಿಕ್ ಪ್ರಥಮ ಸ್ಥಾನವನ್ನು ಪಡೆದಿದ್ದು, 5 ಚಿನ್ನದ ಪದಕಗಳನ್ನು ಪಡೆಯಲಿದ್ದಾರೆ.