ಮೈಸೂರು: ಜಿಲ್ಲಾಧಿಕಾರಿ ವಸತಿ ಗೃಹದಲ್ಲಿ ಹಕ್ಕಿ ಜ್ವರಕ್ಕೆ ಬಾತುಕೋಳಿಗಳ ಸಾವು?
ಮೈಸೂರಿನ ಜಿಲ್ಲಾಧಿಕಾರಿ ರಣದೀಪ್ ಅಧಿಕೃತ ನಿವಾಸದಲ್ಲಿ ಎರಡು ಬಾತುಕೋಳಿಗಳು ಸಾವನ್ನಪ್ಪಿದ್ದು, ಹಕ್ಕಿ ಜ್ವರದಿಂದ ಸತ್ತಿರುವ ಸಾಧ್ಯತೆಗಳಿವೆ.
ಮೈಸೂರು, ಜನವರಿ 24: ಜಿಲ್ಲಾಧಿಕಾರಿಯವರ ಅಧಿಕೃತ ನಿವಾಸದಲ್ಲಿ ಎರಡು ಬಾತುಕೋಳಿಗಳು ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ. ಸತ್ತಿರುವ ಬಾತುಕೋಳಿಗಳು ಹಕ್ಕಿ ಜ್ವರದಿಂದ ಸತ್ತಿವೆ ಎನ್ನಲಾಗಿದೆ.
ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಜಿಲ್ಲಾಧಿಕಾರಿ ರಣದೀಪ್ ಅವರ ನಿವಾಸದ ಆವರಣದಲ್ಲೊಂದು ಕೆರೆಯಿದೆ. ಈ ಕೆರೆಯಲ್ಲಿ ಕಳೆದ 9 ವರ್ಷಗಳಿಂದ ಎರಡು ಬಾತುಕೋಳಿಗಳು ಓಡಾಡುತ್ತಿದ್ದವು. ಆರೋಗ್ಯದಿಂದ ಇದ್ದ ಬಾತುಕೋಳಿಗಳು ಇಂದು ಏಕಾಏಕಿ ಸಾವನ್ನಪ್ಪಿವೆ. ಹಕ್ಕಿ ಜ್ವರದಿಂದಲೇ ಬಾತುಕೋಳಿಗಳು ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.
"ಬಾತುಕೋಳಿಗಳ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ನಾಗರಿಕರು ಭಯಭೀತರಾಗುವ ಅಗತ್ಯ ಇಲ್ಲ," ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಇದೇ ರೀತಿ ಹಕ್ಕಿ ಜ್ವರದ ಕಾರಣಕ್ಕೆ ಕೆಲವು ದಿನಗಳ ಹಿಂದೆ ಮೈಸೂರಿನ ಪ್ರಖ್ಯಾತ ಶ್ರೀ ಜಯಚಾಮರಾಜೇಂದ್ರ ಮೃಗಾಲಯವನ್ನು 125 ವರ್ಷಗಳ ನಂತರ ಮೊದಲ ಬಾರಿಗೆ ಒಂದು ತಿಂಗಳ ಅವಧಿಗೆ ಮುಚ್ಚಲಾಗಿತ್ತು. ಇದೀಗ ಜಿಲ್ಲಾಧಿಕಾರಿ ನಿವಾಸದಲ್ಲೂ ಬಾತುಕೋಳಿಗಳು ಸಾವನ್ನಪ್ಪಿದ್ದು ಹಕ್ಕಿ ಜ್ವರ ಹರಡಿರುವ ಸಾಧ್ಯತೆ ಇದೆ.