ಕಾಲು ಸ್ವಾಧೀನ ಕಳೆದುಕೊಂಡ ಬೀದಿ ನಾಯಿಗೆ ಚಕ್ರದ ಆಸರೆ
ರಸ್ತೆಯಲ್ಲಿ ಅಪಘಾತಕ್ಕೀಡಾದ ಬೀದಿ ನಾಯಿಯನ್ನು ಆರೈಕೆ ಮಾಡಿ, ಕೃತಕ ಕಾಲು ಜೊಡಿಸಿ ಮರುಚೈತನ್ಯ ನೀಡಿದ್ದಾರೆ ಮದನ್. ಈ ಬೀದಿ ನಾಯಿಯನ್ನು ಆರೈಕೆ ಮಾಡಿ ಮಾನವೀಯತೆ ಮೆರೆದ ಬಂಜುಕೇಶ್.
ಮೈಸೂರು, ಡಿಸೆಂಬರ್ 28 : ಮೃತ ಶ್ವಾನದ ಕಣ್ಣು ಮತ್ತೊಂದು ಶ್ವಾನಕ್ಕೆ ಜೋಡಿಸಿದ ಶಸ್ತ್ರ ಚಿಕಿತ್ಸೆ ಬಗ್ಗೆ ಇತ್ತೀಚೆಗೆ ಮೈಸೂರಿನಲ್ಲಿ ವರದಿಯಾಗಿತ್ತು. ಈ ರೀತಿ ಪ್ರಾಣಿ ಪ್ರೀತಿ ತೋರುವುದು ಸಾಮಾನ್ಯ. ಆದ್ರೆ ಅಪಘಾತಕ್ಕೀಡಾದ ನಾಯಿಗೆ ಎರಡು ಚಕ್ರವಿರುವ ಸಾಧನ ಜೋಡಿಸಿದ್ದನ್ನು ಎಲ್ಲಾದ್ರು ನೋಡಿದ್ದೀರಾ?
ಹೌದು. ರಸ್ತೆಯಲ್ಲಿ ಅಪಘಾತಕ್ಕೀಡಾದ ಬೀದಿ ನಾಯಿಯನ್ನು ಆರೈಕೆ ಮಾಡಿ, ಕೃತಕ ಕಾಲು ಜೊಡಿಸಿ ಮರುಚೈತನ್ಯ ನೀಡಿದ್ದಾರೆ ಮದನ್ ಎಂಬುವವರು. ಈ ಬೀದಿ ನಾಯಿಯನ್ನು ಆರೈಕೆ ಮಾಡಿ ಮಾನವೀಯತೆ ಮೆರೆದ ಬಂಜುಕೇಶ್ ಕುಟುಂಬದವರು ಅಭಿನಂದನಾರ್ಹರು.
ಇದು ಮದನ್ ಅವರ ಎರಡನೇ ಪ್ರಯೋಗ
'ವೈದ್ಯೋ ನಾರಾಯಣೋ ಹರಿ' ಎನ್ನುವ ಮಾತಿದೆ. ಈ ಮಾತಿಗೆ ಉದಾಹರಣೆ ಎನ್ನುವಂತೆ ಮದನ್ ಅವರು ತಮ್ಮ ವೃತ್ತಿಧರ್ಮ ಪಾಲಿಸಿದ್ದಾರೆ. ರಸ್ತೆ ಅಪಘಾತಕ್ಕೀಡಾಗಿ ತನ್ನೆರಡೂ ಕಾಲುಗಳ ಸ್ವಾಧೀನವನ್ನು ಕಳೆದುಕೊಂಡ ಬೀದಿನಾಯಿಯ ಆರೈಕೆ ಮಾಡಿ ಮರುಜೀವ ನೀಡಿದ್ದಾರೆ.
ಇದೇ ಮದನ್ ಅವರು ಇತ್ತಿಚೆಗಷ್ಟೇ ಮೃತ ಶ್ವಾನದ ಕಣ್ಣನ್ನು ಇನ್ನೊಂದು ನಾಯಿಗೆ ಅಳವಡಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ಡಾ. ಮದನ್ ಅವರು ಮತ್ತೊಂದು ಪ್ರಯೋಗಕ್ಕೆ ಮುಂದಾಗಿ ಯಶಸ್ವಿಯಾಗಿದ್ದಾರೆ.
ಕಾಲು ಕಳೆದುಕೊಂಡು ರೋದಿಸುತ್ತಿದ್ದ ನಾಯಿ
ಮೂರು ತಿಂಗಳ ಹಿಂದೆ ಮೈಸೂರು ನಗರದ ಬೆಮೆಲ್ ಬಡವಾಣೆಯ ಬೀದಿ ನಾಯಿಯೊಂದು ರಸ್ತೆ ಅಪಘಾತದಲ್ಲಿ ತನ್ನ ಹಿಂಬದಿ ಕಾಲಿನ ಸ್ವಾಧೀನ ಕಳೆದುಕೊಂಡು ರೋದಿಸುತ್ತಿರುವಾಗ ಕನಿಕರದಿಂದ ಜಂಬುಕೇಶ್ ಕುಟುಂಬ ಆ ನಾಯಿಗೆ ಚಿಕಿತ್ಸೆ ಕೊಡಿಸಿ ಮನೆಯಲ್ಲೇ ಆರೈಕೆ ಮಾಡುತ್ತಿದ್ದರು.
ತದನಂತರ ಅಪಘಾತಕ್ಕೀಡಾದ ನಾಯಿಯನ್ನು ಸ್ಥಳೀಯ ಪಶುವೈದ್ಯರಾದ ಡಾ.ಮದನ್ ಅವರ ಬಳಿ ತೋರಿಸಿದಾಗ ಅವರು ನಾಯಿಗೆ ಎರಡು ಚಕ್ರವಿರುವ ಸಾಧನ ಅಳವಡಿಸಿದ್ದಾರೆ. ಇದೀಗ ಈ ನಾಯಿಗೆ ನಡೆದಾಡುವುದು ಮೊದಲಿನಷ್ಟು ಕಷ್ಟವಲ್ಲ.
ಚಿಕಿತ್ಸೆ ಕೊಡಿಸುತ್ತಿರುವವರ ಮಾತು
ಮನೆಯ ಮಾಲೀಕ ಜಂಬುಕೇಶ್, "ಮನೆಗೆ ಪ್ರತಿದಿನ ಬರುತ್ತಿದ್ದ ನಾಯಿ ಅಂಗಡಿಗೆ ಹೋಗುವಾಗಲೂ ಜೊತೆ ಬರುತ್ತಿತು. ರಾತ್ರಿ ಮನೆಯ ಮಹಡಿಯ ಮೇಲೆ ಬಂದು ಮಲಗುತಿತ್ತು. ತಂದೆ ತಾಯಿ ತರಕಾರಿ ತರಲು ಹೋದ ಸಂದರ್ಭದಲ್ಲಿ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿಯ ಸೊಂಟಕ್ಕೆ ಪೆಟ್ಟು ಬಿದ್ದಿತ್ತು. ಮೇಲೇಳಲಾರದ ಸ್ಥಿತಿಯಲ್ಲಿದ್ದ ನಾಯಿಯನ್ನ ಮನೆಗೆ ತಂದು ಮನೆಯಲ್ಲೆ ಆರೈಕೆ ಮಾಡುತ್ತಿದ್ದೆವು. ನಮ್ಮ ಕಾರಿನಲ್ಲೇ ವೈದ್ಯರ ಬಳಿಗೆ ತೋರಿಸುತ್ತಿದ್ದು, ಒಂದೆರಡು ತಿಂಗಳಲ್ಲಿ ಕಾಲು ಮೊದಲಿನ ಸ್ಥಿತಿಗೆ ಬರಲಿದ್ದು ಅಲ್ಲಿಯವರೆಗೆ ದ್ವಿಚಕ್ರದ ಗಾಡಿಯಲ್ಲಿ ವಾಕಿಂಗ್ ಮಾಡಿಸುತ್ತಿದ್ದೇನೆ" ಎನ್ನುತ್ತಾರೆ.
ಹೆತ್ತ ತಂದೆ-ತಾಯಿಗಳನ್ನೆ ಮನೆಯಿಂದ ಹೊರಹಾಕುವ ಇಂತಹ ಕಾಲದಲ್ಲಿ ಬೀದಿ ನಾಯಿಯೊಂದನ್ನ ಕಳೆದ ಮೂರು ತಿಂಗಳಿನಿಂದ ಮನೆಯ ಸದಸ್ಯ ಎನ್ನುವಂತೆ ನೋಡಿಕೊಳ್ಳುತ್ತಿರುವ ಇಂತಹ ಕುಟುಂಬ ನಿಜಕ್ಕೂ ಸಮಾಜಕ್ಕೆ ಮಾದರಿ.