ಮೈಸೂರಲ್ಲಿ ಮಕ್ಕಳ ಕಳ್ಳ ಸಾಗಾಟ: 6 ಮಂದಿ ಬಂಧನ
ಮೈಸೂರು, ನವೆಂಬರ್, 4: ಮಕ್ಕಳ ಕಳ್ಳಸಾಗಾಣೆ ಆರೋಪದ ಮೇಲೆ ಮೈಸೂರಿನ ವಿವಿಧ ಆಸ್ಪತ್ರೆಗಳ ಆರು ಮಂದಿ ಸಿಬ್ಬಂದಿಯನ್ನು ಮೈಸೂರು ಜಿಲ್ಲಾ ಪೊಲೀಸರು ನಂಜನಗೂಡಿನಲ್ಲಿ ಬಂಧಿಸಿದ್ದಾರೆ.
ಬಂಧಿತರ ಪೈಕಿ 5 ಮಂದಿ ಖಾಸಗಿ ಆಸ್ಪತ್ರೆಗಳ ಸಿಬ್ಬಂದಿಯಾಗಿದ್ದು, ಒಬ್ಬರು ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಂಧಿತರು ಒಂದೇ ಗುಂಪಿನವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ವೆಂಕಟೇಶ, ಮೋಹನ್, ಮಹೇಶ, ಶ್ರೀಮತಿ, ರೇಣುಕಾ, ಮತ್ತು ಉಷಾ ಎಂದು ಪೊಲೀಸರು ಗುರುತಿಸಿದ್ದಾರೆ. ಆರೋಪಿಗಳ ವಿರುದ್ಧ ವಿವಿಧ ಅಪರಾಧ, ಅಪಹರಣ, ಭಿಕ್ಷಾಟನೆಗೆ ದೂಡುವುದು, ಮತ್ತಿತರ ಪ್ರಕರಣಗಳಡಿ ಕೇಸು ದಾಖಲಿಸಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಚನ್ನಣ್ಣನವರ್ "ಈ ಮಕ್ಕಳ ಕಳ್ಳ ಸಾಗಾಣೆ ಪ್ರಕರಣದಲ್ಲಿ ಮತ್ತಷ್ಟು ದುಷ್ಕರ್ಮಿಗಳ ಭಾಗಿಯಾಗಿರುವ ಸಾಧ್ಯತೆ ಇದ್ದು, ಇದರ ಹಿಂದೆ ದೊಡ್ಡ ಗುಂಪಿನ ಕೈವಾಡವಿದೆ" ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
"ಮನೆಬಿಟ್ಟಿರುವ, ಬೀದಿಯಲ್ಲಿ ಭಿಕ್ಷಾಟನೆ ಮಾಡುವ, ಅನಾಥ ಮತ್ತು ಏಕಪೋಷಕ ಮಕ್ಕಳನ್ನು ಅಪಹರಿಸಿ ಇತರರಿಗೆ ಮಾರುತ್ತಿದ್ದೆವು" ಎಂದು ಬಂಧಿತ ಆರೋಪಿಗಳು ಒಪ್ಪಿಕೊಂಡಿರುವುದಾಗಿ ರವಿ ಚನ್ನಣ್ಣನವರ್ ತಿಳಿಸಿದರು.
ಆರೋಪಿಗಳು ಮೈಸೂರು ಜಿಲ್ಲೆಯಾದ್ಯಂತ ಮಕ್ಕಳ ಕಳ್ಳ ಸಾಗಾಣೆ ಜಾಲ ವಿಸ್ತರಿಸಿದ್ದಾರೆ. ಕೆಲವು ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಅವರು ತಿಳಿಸಿದರು.
ಆರೋಪಿಗಳು ಕಳ್ಳಸಾಗಾಟ ಮಾಡಿರುವ ಮಕ್ಕಳ ಪೈಕಿ ಬಹುತೇಕ ಮಂದಿ ನಾಪತ್ತೆಯಾಗಿರುವ ಮಕ್ಕಳೇ ಆಗಿದ್ದಾರೆ. ಕಳೆದ ಏಪ್ರಿಲ್ ನಲ್ಲಿ ನಂಜನಗೂಡು ಪೊಲೀಸ್ ಠಾಣೆಯಲ್ಲಿ ಶಾಂತಮ್ಮ ಎಂಬುವವರು ತಮ್ಮ 30 ತಿಂಗಳ ಮಗು ಅಪಹರಣವಾಗಿದೆ ಎಂದು ದೂರು ನೀಡಿದ ಪ್ರಕರಣದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದರು.