ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಯದುವೀರ್-ತ್ರಿಷಿಕಾ
ಮೈಸೂರು, ಜೂನ್ 27 : ಮೈಸೂರಿನಲ್ಲಿ ಹಬ್ಬದ ಸಂಭ್ರಮ. ಸೋಮವಾರ ಐತಿಹಾಸಿಕ ಮೈಸೂರು ಅರಮನೆ ಯದುವೀರ್ ಮತ್ತು ತ್ರಿಷಿಕಾ ವಿವಾಹದ ಸಂಭ್ರಮಕ್ಕೆ ಸಾಕ್ಷಿಯಾಗಿದ್ದು ಯದುವೀರ್ ಗೃಹಸ್ಥಾಶ್ರಮಕ್ಕೆ ಕಾಲಿರಿಸಿದ್ದಾರೆ.[ಯದುವೀರ್ - ತ್ರಿಷಿಕಾ ಮದುವೆ ಚಿತ್ರಗಳು]
ಶುಕ್ರವಾರ (ಜೂ.24) ರಿಂದಲೇ ವಿವಾಹಕ್ಕೆ ಸಂಬಂಧಿಸಿದ ಹೋಮ ಹವನ ವಿಧಿವಿಧಾನಗಳು ಆರಂಭವಾಗಿದ್ದವು. ಮಂಗಳವಾರ ಜೂನ್ 28ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.[40 ವರ್ಷ ಬಳಿಕ ಅರಮನೆಯಲ್ಲಿ ವಿವಾಹ ಸಂಭ್ರಮ!]
ಇನ್ನು ಸಂಜೆ 7ಕ್ಕೆ ದರ್ಬಾರ್ ಹಾಲ್ನಲ್ಲಿ ನವ ದಂಪತಿಗೆ ಉಯ್ಯಾಲೆ ಸೇವೆ ನಡೆಯಲಿದೆ. ಇದೀಗ ರಾಜಮಾತೆ ಪ್ರಮೋದಾದೇವಿ ಅವರ ಸಮ್ಮುಖದಲ್ಲಿ ನಡೆಯುತ್ತಿರುವ ವಿವಾಹ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಸುಮಾರು 40 ವರ್ಷಗಳ ಹಿಂದೆ ಅಂದರೆ 1976ರಲ್ಲಿ ನಡೆದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ವಿವಾಹದ ಬಳಿಕ ಅರಮನೆಯಲ್ಲಿ ಯಾವುದೇ ಶುಭ ಕಾರ್ಯಗಳು ನಡೆದಿರಲಿಲ್ಲ. [ಯದುವಂಶದ ಉತ್ತರಾಧಿಕಾರಿ ಯದುವೀರ್, ಒಂದು ಪರಿಚಯ]
ಉಯ್ಯಾಲೆ ಸೇವೆ
ಇನ್ನು ಸಂಜೆ 7ಕ್ಕೆ ದರ್ಬಾರ್ ಹಾಲ್ನಲ್ಲಿ ನವ ದಂಪತಿಗೆ ಉಯ್ಯಾಲೆ ಸೇವೆ ನಡೆಯಲಿದೆ. ಪ್ರಖ್ಯಾತ ಪಿಟೀಲು ವಾದಕರಾದ ಮೈಸೂರು ಮಂಜುನಾಥ್ ಹಾಗೂ ನಾಗರಾಜ್ ಸಹೋದರರಿಂದ ಸಂಗೀತ ಕಛೇರಿ ನಡೆಯಲಿದೆ. ಸೀತಾ-ರಾಮ ಸ್ವಯಂವರದ ರೀತಿಯ ಉಯ್ಯಾಲೆಯಲ್ಲಿ ನವ-ದಂಪತಿಗೆ ಧಾರಾ ಸಮಯದಲ್ಲಿ ಕುಳಿತುಕೊಳ್ಳಲು ವಿಶೇಷ ರೀತಿಯ ಆಸನ ನಿರ್ಮಿಸಿದ್ದು, ಈ ಕಲ್ಯಾಣ ಮಂಟಪದಲ್ಲಿ 600 ಜನ ಗಣ್ಯರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ.
ಹೊರ ರಾಜ್ಯದ ಪ್ರತಿನಿಧಿಗಳು
ಮೇವಾಡ್, ಜೈಪುರ್, ಜೋಧ್ಪುರ್, ರಜಪೂತ್ ಉದಯ್ಪುರ್, ಕಿಶನ್ ನಗರ, ಭರತಪುರ, ಗ್ವಾಲಿಯರ್ ನ ರಾಜಮನೆತನದವರು ಸಾಕ್ಷಿಯಾದರು. ಫ್ರಾನ್ಸ್, ಜರ್ಮನಿ ದೇಶದ ಪ್ರತಿನಿಧಿಗಳು ಭಾಗವಹಿಸಿದ್ದರು.
ಒಡೆಯರ್ ಗೆ ನಮನ
ಯದುವೀರ್ ಮತ್ತು ರಾಣಿ ಪ್ರಮೋದಾದೇವಿ ಶ್ರೀಕಂಠದತ್ತ ಒಡೆಯರ್ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು.
ಕರ್ಕಾಟಕ ಶುಭಲಗ್ನ
ಅರಮನೆಯ ಕಲ್ಯಾಣ ಮಂಟಪದಲ್ಲಿ ಕರ್ಕಾಟಕ ಶುಭಲಗ್ನದ ಸಾವಿತ್ರಿ ಮುಹೂರ್ತದಲ್ಲಿ ಧಾರೆ ನೆರವೇರಿತು. ಇದಕ್ಕೂ ಮೊದಲು ಬೆಳಿಗ್ಗೆ 6.30ಕ್ಕೆ ಎರಡು ಮನೆತನದ ದಿಬ್ಬಣ ಹೊರಟು 7ಕ್ಕೆ ಗೌರಿಪೂಜೆ ನಡೆಯಿತು. ಬಳಿಕ ಕಲ್ಯಾಣಮಂಟಪದಲ್ಲಿ ಜೀರಿಗೆ ಬೆಲ್ಲ ಶಾಸ್ತ್ರ ನಡೆಯಿತು.ವಿವಿಧ ಶಾಸ್ತ್ರ ಸಂಪ್ರದಾಯ ನಡೆದು ಸಂಜೆ 8ಗಂಟೆಗೆ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.
ವಿವಿಧ ಧಾರ್ಮಿಕ ಕಾರ್ಯಕ್ರಮ
ಭಾನುವಾರ ಮುಂಜಾನೆಯಿಂದಲೇ ವಿವಿಧ ಪೂಜಾ ಪೂಜಾ ಕೈಕಂರ್ಯಗಳು ಸಂಜೆಯವರೆಗೂ ನಡೆದಿದ್ದವು. ಸಮಾವರ್ಧನ ಹೋಮ, ಮಧುಮಗನ ಶಾಸ್ತ್ರ, ಶಕುನ ಶಾಸ್ತ್ರಗಳು ಸಂಪ್ರದಾಯಂತೆ ನಡೆದವು. ವರನಿಗೆ ಎಣ್ಣೆ ಮಜ್ಜನದ ನಂತರ ವಾಣಿ ವಿಲಾಸ ದೇವರ ಮನೆಯಲ್ಲಿ ಆತ್ಮವಿಲಾಸ, ಗಣಪನ ದರ್ಶನ ಪಡೆದ ಯದುವೀರ್ ಸ್ಥಂಭ ಪೂಜೆಯಲ್ಲಿ ಪಾಲ್ಗೊಂಡಿದ್ದರು.
ತಾಯಿ ಪಾದ ಪೂಜೆ
ಸರಸ್ವತಿ ಹಾಗೂ ಕುಲದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಯದುವೀರ್ ತಂದೆ ಶ್ರೀಕಂಠದತ್ತ ಚಾಮರಾಜ ಒಡೆಯರ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಅರಮನೆ ಗುರುಗಳ ಸೂಚನೆಯಂತೆ ತಾಯಿ ಪ್ರಮೋದಾದೇವಿ ಒಡೆಯರ್ ಪಾದ ಪೂಜೆ ಮಾಡಿದ ಯದುವೀರ್ ಕಾಶಿಯಾತ್ರೆಯಲ್ಲಿ ಪಾಲ್ಗೊಂಡರು.
ವಿಷೇಶ ಪೋಷಾಕು
ರಾಜಮಾತೆ ಪ್ರಮೋದಾದೇವಿಯವರು ತಮ್ಮ ಪುತ್ರ ಯದುವೀರ್ ಗೆ ವಿವಿಧ ರೀತಿಯ ವಿಶೇಷ ರೀತಿಯ ಅಂಗರಕ ವಸ್ತ್ರಗಳನ್ನು ತಯಾರು ಮಾಡಿಸಿದ್ದಾರೆ. ಜಯಂತಿ ಬಲ್ಲಾಳ್ ಅವರು ಈ ವಸ್ತ್ರಗಳನ್ನು ವಿನ್ಯಾಸ ಮಾಡಿದ್ದು ಯುವರಾಜ ಯದುವೀರ್ ಆರತಕ್ಷತೆಯಲ್ಲಿ ಈ ವಸ್ತ್ರಗಳನ್ನು ಧರಿಸಿ ಕಂಗೊಳಿಸಲಿದ್ದಾರೆ.
ಆಭರಣ ಸುಂದರಿ
ಡುಂಗರಪುರ್ ರಾಜಕುವರಿ ತ್ರಿಷಿಕಾ ಕುಮಾರಿ ಸಿಂಗ್ ಹಾಗೂ ಕುಟುಂಬ ವರ್ಗದವರು ಅರಮನೆಗೆ ಆಗಮಿಸಿದ್ದು, ಬೀಗರಿಗೆ ಅದ್ದೂರಿಯಾಗಿ ಸಂಪ್ರದಾಯದ ಮೂಲಕ ಸ್ವಾಗತ ಕೋರಲಾಯಿತು. ವಿವಿಧ ಬಣ್ಣಗಳ ವಸ್ತ್ರ ಹಾಗೂ ಚಿನ್ನಾಭರಣಗಳಿಂದ ಕಂಗೊಳಿಸುತ್ತಿದ್ದ ವಧು ತ್ರಿಷಿಕಾ ಎಲ್ಲರ ಕಣ್ಮನ ಸೆಳೆದರು.
ವಸ್ತ್ರ, ಆಭರಣ ವಿನಿಮಯ
ನಂತರ ವಿವಿಧ ಪೂಜ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಅರಮನೆ ಸಂಪ್ರದಾಯದಂತೆ ಬೀಗರು ವಸ್ತ್ರ ಹಾಗೂ ಆಭರಣಗಳನ್ನು ವಿನಿಮಯ ಮಾಡಿಕೊಂಡರು. ಬಳಿಕ ಭದ್ರತೆ ಕಾರಣದಿಂದ ಅರಮನೆ ಒಳಗೆ ಕಾರಿನಲ್ಲಿ ಯದುವೀರ್-ತ್ರಿಷಿಕಾ ಮೆರವಣಿಗೆ ನಡೆಯಿತು.