ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಚಾಮುಂಡಿ ಬೆಟ್ಟಕ್ಕೆ ತೆರಳುವ ಮುನ್ನ...

By Madhusoodhan
|
Google Oneindia Kannada News

ಮೈಸೂರು,ಜೂ.22: ಮೈಸೂರಿನ ಅಧಿದೇವತೆ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ 2016ನೇ ಸಾಲಿನ ಆಷಾಢ ಶುಕ್ರವಾರ ಮತ್ತು ಜನ್ಮೋತ್ಸನ ಕಾರ್ಯಕ್ರಮಗಳಿಗೆ ಸಕಲ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ಸಿ.ಶಿಖಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜುಲೈ 8 ರಂದು ಮೊದಲನೇ ಆಷಾಢ ಶುಕ್ರವಾರ, ಜುಲೈ 15 ರಂದು ಎರಡನೇ ಆಷಾಢ ಶುಕ್ರವಾರ, ಜುಲೈ 22 ರಂದು ಮೂರನೇ ಆಷಾಢ ಶುಕ್ರವಾರ, ಜುಲೈ 26 ಅಮ್ಮನವರ ವರ್ಧಂತಿ ಮಹೋತ್ಸವ, ಜುಲೈ 29 ನಾಲ್ಕನೇ ಹಾಗೂ ಕೊನೆಯ ಆಷಾಢ ಶುಕ್ರವಾರಗಳಂದು ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೆಚ್ಚಿನ ಭಕ್ತರು ಆಗಮಿಸಲಿದ್ದು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಪೂರ್ವಸಿದ್ಧತಾ ಸಭೆಯಲ್ಲಿ ತಿಳಿಸಿದರು.[ಯದುವೀರ್-ತ್ರಿಷಿಕಾ ವಿವಾಹಕ್ಕೆ ಮೈಸೂರು ಅರಮನೆ ಸಿಂಗಾರ]

mysuru

ಕೆಎಸ್ ಆರ್ ಟಿಸಿ ಬಳಸಿ
ಚಾಮುಂಡಿಬೆಟ್ಟಕ್ಕೆ ಬರುವ ಎಲ್ಲ ಖಾಸಗಿ ವಾಹನಗಳನ್ನು ಹೆಲಿಪ್ಯಾಡ್ ಬಳಿ ನಿಲ್ಲಿಸಿ, ಅಲ್ಲಿಂದ ಬೆಟ್ಟಕ್ಕೆ ಕೆಎಸ್ ಆರ್ ಟಿಸಿ ಬಸ್ ಮೂಲಕ ಬರುವ ವ್ಯವಸ್ಥೆ ಮಾಡುವುದು, ಸೂಕ್ತ ಪೊಲೀಸ್ ವ್ಯವಸ್ಥೆ ಮತ್ತು ಲಲಿತ ಮಹಲ್ ಹೆಲಿಪ್ಯಾಡ್ ಬಳಿಯಲ್ಲಿ ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಶಾಮಿಯಾನ, ಬ್ಯಾರಿಕೇಡ್, ವಿದ್ಯುತ್ ದೀಪದ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.

ಪ್ಲಾಸ್ಟಿಕ್ ಬಳಕೆ ಇಲ್ಲ
ಮೈಸೂರು ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಚಾಮುಂಡಿಬೆಟ್ಟಕ್ಕೆ ಭಕ್ತಾದಿಗಳು ಪ್ಲಾಸ್ಟಿಕ್ ಚೀಲಗಳನ್ನು ತರದಂತೆ ನೋಡಿಕೊಳ್ಳಬೇಕು. ಲಲಿತ್ ಮಹಲ್ ಹೆಲಿಪ್ಯಾಡ್ ಬಳಿಯೇ ಪ್ಲಾಸ್ಟಿಕ್ ಚೀಲಗಳಿಗೆ ನಿರ್ಬಂಧವಹಿಸಬೇಕು. ಪ್ಲಾಸ್ಟಿಕ್ ನಿಷೇಧದ ಬಗ್ಗೆ ಫಲಕ ಅಳವಡಿಕೆ ಮಾಡಬೇಕು ಎಂದು ತಿಳಿಸಿದರು.[ಚಾಮುಂಡಿ ಬೆಟ್ಟದಲ್ಲಿ ಸಂತೆ ಮಾಡಬೇಕಾ? ಭೈರಪ್ಪ ಪ್ರಶ್ನೆ]

ಟಿಕೆಟ್ ಕೌಂಟರ್
ಹೆಚ್ಚಿನ ಭಕ್ತಾದಿಗಳು ಬೆಳಿಗ್ಗೆ 3 ಗಂಟೆಯಿಂದಲೇ ದೇವರ ದರ್ಶನಕ್ಕೆ ಆಗಮಿಸುವುದರಿಂದ ಭಕ್ತರಿಗೆ ಅನುಕೂಲವಾಗುವಂತೆ ಬೆಳಿಗ್ಗೆ 3 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಅಂದರೆ ದೇವಸ್ಥಾನ ಮುಚ್ಚುವವರೆಗೆ ಬಸ್ ಬಿಡಬೇಕು. ದೇವಾಲಯದ ವತಿಯಿಂದ ಭಕ್ತರಿಗೆ ಟಿಕೆಟ್ ವಿತರಣೆ ಮಾಡಲು ಹೆಲಿಪ್ಯಾಡ್ ಹಾಗೂ ಮಹಿಷಾಸುರ ಪ್ರತಿಮೆ ಬಳಿ ತಾತ್ಕಾಲಿಕ ಕೌಂಟರ್ ತೆರೆಯಬೇಕು ಎಂದರು.

ಕಸ ನಿರ್ವಹಣೆ
ಸ್ವಚ್ಫತೆ, ಕಸ ಸಂಗ್ರಹಣೆ, ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಮಹಾನಗರ ಪಾಲಿಕೆ ವತಿಯಿಂದ ಮಾಡಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲು ಬರುವಂತಹ ಕಲಾವಿದರಿಗೆ ಸೂಕ್ತ ಧ್ವನಿವರ್ಧಕ, ಖುರ್ಚಿ ಇತ್ಯಾದಿಗಳ ವ್ಯವಸ್ಥೆಯನ್ನು ಮಾಡಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ಉಸ್ತುವಾರಿ ವಹಿಸಿಕೊಳ್ಳಬೇಕು ಎಂದು ತಿಳಿಸಿದರು.

ಬ್ಯಾರಿಕೇಡ್
ಹೆಲಿಪ್ಯಾಡ್ ಬಳಿಯಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ತಾತ್ಕಾಲಿಕವಾಗಿ ವಿಶಾಲವಾದ ಪೆಂಡಾಲ್ ಹಾಗೂ ಭಕ್ತಾದಿಗಳು ಬಸ್ಸುಗಳನ್ನು ಹತ್ತಲು ನಿಲ್ಲುವ ಸರತಿಯ ಸಾಲಿಗೆ ಮತ್ತು ಖಾಸಗಿ ವಾಹನ ನಿಲುಗಡೆಗೆ ಬ್ಯಾರಿಕೇಡ್ ಅಳವಡಿಕೆ ಮಾಡಬೇಕು. ಭಕ್ತಾದಿಗಳು ಬೆಟ್ಟದಲ್ಲಿ ಪ್ರಸಾದ ಹಂಚುವುದಕ್ಕೆ ಅನುಕೂಲವಾಗುವಂತೆ ಬೆಟ್ಟದ ಪಾರ್ಕ್ ನಂ.1 ಮತ್ತು 2 ರಲ್ಲಿರುವ ಖಾಲಿ ಸ್ಥಳದಲ್ಲಿ ತಾತ್ಕಾಲಿಕ ಪೆಂಡಾಲ್ ಮತ್ತು ಕೌಂಟರ್ ತೆರೆಯಬೇಕು ಎಂದು ತಿಳಿಸಿದರು.

ಪ್ರಥಮ ಚಿಕಿತ್ಸೆ
ಮುಂಜಾಗ್ರತೆ ಕ್ರಮಕ್ಕಾಗಿ ಭಕ್ತಾದಿಗಳ ವೈದ್ಯಕೀಯ ಚಿಕಿತ್ಸೆಗಾಗಿ ಬೇಕಾದ ಔಷಧಗಳೊಂದಿಗೆ ಬೆಟ್ಟಕ್ಕೆ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗಳನ್ನು ನಿಯೋಜಿಸುವುದು. ಅಂಬ್ಯುಲೆನ್ಸ್ ವ್ಯವಸ್ಥೆ ಮಾಡುವುದು ಹಾಗೂ ಹೊರಗಿನಿಂದ ಸೇವಾರ್ಥದಾರರು ಬೆಟ್ಟದಲ್ಲಿ ಹಂಚಲು ತರುವ ಪ್ರಸಾದವನ್ನು ಪರಿಶೀಲಿಸಿ ನಂತರ ಹಂಚುವುದಕ್ಕೆ ಅನುಮತಿ ನೀಡಬೇಕು ಎಂದು ಆರೋಗ್ಯ ಇಲಾಖಾ ಅಧಿಕಾರಿಗಳಿಗೆ ಶಿಖಾ ಸೂಚಿಸಿದರು.

ಅಗ್ನಿಶಾಮಕ ದಳ
ಮುಂಜಾಗ್ರತಾ ಕ್ರಮವಾಗಿ ಎರಡು ಅಗ್ನಿಶಾಮಕ ವಾಹನಗಳಿಗೆ ಸೂಕ್ತ ವ್ಯವಸ್ಥೆ ಮಾಡಿ ಸಿಬ್ಬಂದಿಗಳನ್ನು ನಿಯೋಜಿಸಬೇಕು. ದೇವಸ್ಥಾನದ ಮುಂಭಾಗದಲ್ಲಿರುವ ರಾಗರಾಗಿಣಿ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಕಲಾವಿದರಿಂದ ಅರ್ಜಿ ಪಡೆದು ಆಯ್ಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ವಿದ್ಯುತ್ ವ್ಯವಸ್ಥೆ
ಚಾಮುಂಡಿ ಬೆಟ್ಟದ ಸುತ್ತಲೂ ಹಾಗೂ ದೇವಿ ಕೆರೆಯ ಬಳಿರುವ ವಿದ್ಯುತ್ ದೀಪಗಳನ್ನು ದುರಸ್ತಿಗೊಳಿಸಿ ವಿದ್ಯುತ್ ನಿಲುಗಡೆಯಾಗದಂತೆ ಚೆಸ್ಕಾಂ ಎಚ್ಚರ ವಹಿಸಬೇಕು. ಅಂಗವಿಕಲ ಭಕ್ತಾದಿಗಳ ಅನುಕೂಲಕ್ಕಾಗಿ ಬೆಟ್ಟದ ಬಸ್‍ಸ್ಟ್ಯಾಂಡಿನಿಂದ ದೇವಸ್ಥಾನದ ಬಳಿಗೆ ಓಡಾಡಲು ಬ್ಯಾಟರಿ ಚಾಲಿತ ವಾಹನದ ವ್ಯವಸ್ಥೆ ಮಾಡುವಂತೆ ಮೈಸೂರು ಮೃಗಾಲಯದ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎ.ಗೋಪಾಲ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಸಿ.ಜಿ. ಬೆಟಸೂರ್ ಮಠ್, ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಆಯುಕ್ತರಾದ ಮಹೇಶ್, ಮುಜರಾಯಿ ತಹಶೀಲ್ದಾರ್ ಯತಿರಾಜ್, ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪ್ರಸಾದ್ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

English summary
Mysuru deputy commissioner C Shikha conducted a meeting regarding Chamundi Hills religious events. Officials must take precautionary measures said by Shikha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X