ಖಾಸಗಿ ಭದ್ರತಾ ಸಿಬ್ಬಂದಿಗೂ ಪೊಲೀಸರಿಂದ ತರಬೇತಿ
ಮೈಸೂರು, ಜ. 31: ಬೆಂಗಳೂರಿನ ಚರ್ಚ್ ಸ್ಟ್ರೀಟ್ನಲ್ಲಿ ನಡೆದ ಬಾಂಬ್ ಸ್ಫೋಟದ ನಂತರ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ ಸಾರ್ವಜನಿಕ ಸ್ಥಳಗಳ ರಕ್ಷಣೆಗಾಗಿ ಖಾಸಗಿ ಭದ್ರತಾ ಸಿಬ್ಬಂದಿಗೂ ತರಬೇತಿ ನೀಡಲು ನಿರ್ಧರಿಸಿದೆ.
ಮೈಸೂರಿನಲ್ಲಿನ ಹೋಟೆಲ್, ಮಾಲ್ ಮತ್ತು ಇತರ ಜನನಿಬಿಡ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸುವ ಖಾಸಗಿ ಭದ್ರತಾ ಸಿಬ್ಬಂದಿಗೆ ಫೆಬ್ರವರಿ 5ರಿಂದ 7ರ ವರೆಗೆ ವಿಶೇಷ ತರಬೇತಿ ನೀಡಲು ಮೈಸೂರು ನಗರ ಪೊಲೀಸರು ತೀರ್ಮಾನಿಸಿದ್ದಾರೆ.
ವಿಧ್ವಂಸಕ ಕೃತ್ಯಗಳನ್ನು ತಡೆಗಟ್ಟುವ ಸಂಬಂಧ ತಪಾಸಣೆ ಕೈಗೊಳ್ಳುವ ಬಗೆ, ಉಪಕರಣ ಉಪಯೋಗಿಸುವ ರೀತಿ ಕುರಿತು ಪ್ರಾತ್ಯಕ್ಷಿಕೆ ಮೂಲಕ ಒಂದು ದಿನದ ಉಚಿತ ತರಬೇತಿ ನೀಡಲಾಗುವುದು. ಇದಕ್ಕಾಗಿ ಆಸಕ್ತರು ಎಸಿಪಿ ಮಲ್ಲಿಕಾರ್ಜುನಪ್ಪ ಅವರನ್ನು (0821 - 5418347, 9480802210) ಸಂಪರ್ಕಿಸಿ ಹೆಸರು ನೋಂದಾಯಿಸಬಹುದು. ಜನರು ಈ ತರಬೇತಿ ಪಡೆದು ಭಯೋತ್ಪಾದನೆ ಚಟುವಟಿಕೆ ಹತ್ತಿಕ್ಕಲು ಪೊಲೀಸರೊಂದಿಗೆ ಕೈ ಜೋಡಿಸಬೇಕು ಎಂದು ಆಯುಕ್ತರು ಮನವಿ ಮಾಡಿದ್ದಾರೆ.
ಭಯೋತ್ಪಾದಕರು ಹಾಗೂ ಸಮಾಜ ಘಾತುಕ ಶಕ್ತಿಗಳು ಹೋಟೆಲ್, ಮಾಲ್ ಮತ್ತು ವಾಣಿಜ್ಯ ಸಂಕೀರ್ಣದಂತಹ ಸಾರ್ವಜನಿಕ ಸ್ಥಳಗಳಲ್ಲಿಯೇ ದುಷ್ಕೃತ್ಯ ನಡೆಸುತ್ತಾರೆ. ಆದ್ದರಿಂದ ಮೈಸೂರು ನಗರದಲ್ಲಿನ ಪ್ರಮುಖ ಹೋಟೆಲ್, ಮಾಲ್ ಮತ್ತು ವಾಣಿಜ್ಯ ಸಂಕೀರ್ಣ ಪ್ರವೇಶಿಸುವ ಸಾರ್ವಜನಿಕರನ್ನು ವೈಜ್ಞಾನಿಕ ತಪಾಸಣೆಗೆ ಒಳಪಡಿಸಲಾಗುವುದು ಎಂದು ಪೊಲೀಸ್ ಆಯುಕ್ತ ಡಾ. ಎಂ.ಎ. ಸಲೀಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.