ಮೈಸೂರು: ಸಿಕ್ಕಿಬಿದ್ದ ಹೊಂಡಾ ಆಕ್ಟೀವ ಕಳ್ಳ!
ಮೈಸೂರು, ಆಗಸ್ಟ್ 12: ನಗರದ ವಿವಿಧೆಡೆ ಅಂಗಡಿ ಮಳಿಗೆ, ಮನೆ ಮುಂದೆ ನಿಲ್ಲಿಸುವ ಹೊಂಡಾ ಆಕ್ಟೀವ ವಾಹನಗಳನ್ನು ನಕಲಿ ಕೀ ಹಾಗೂ ದಬ್ಬಳವನ್ನು ಬಳಸಿ ಕಳ್ಳತನ ಮಾಡಿ ಬಳಿಕ ಆಟೋ ಕನ್ಸಲ್ಟೆಂಟ್ ಸೆಂಟರ್ಗಳಿಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಲಕ್ಷ್ಮಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಹೆಬ್ಬಾಳ ಎರಡನೇ ಹಂತದ ನಿವಾಸಿ ದಿವಂಗತ ಎಸ್.ಕುಮಾರ್ ಎಂಬುವರ ಪುತ್ರ ಕೆ. ಸತೀಶ್(38) ಬಂಧಿತ ಆರೋಪಿಯಾಗಿದ್ದಾನೆ. ಇದುವರೆಗೆ ತನ್ನ ಕೈಚಳಕದ ಮೂಲಕ ವಾಹನಗಳನ್ನು ಎಗರಿಸಿ ಕಡಿಮೆ ಬೆಲೆಗೆ ಮಾರಾಟ ಮಾಡುವ ದಂಧೆ ನಡೆಸುತ್ತಿದ್ದ.
ಈ ನಡುವೆ ಲಕ್ಷ್ಮೀಪುರಂ, ದೇವರಾಜ ಮತ್ತು ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದ್ವಿಚಕ್ರ ವಾಹನಗಳು ಕಳ್ಳತನವಾಗಿರುವ ಬಗ್ಗೆ ದೂರುಗಳು ಬಂದಿದ್ದವು. ಹೀಗಾಗಿ ಪೊಲೀಸರು ಜಾಗೃತರಾಗಿ ಬೈಕ್ ಖದೀಮನ ಬಗ್ಗೆ ನಿಗಾ ವಹಿಸಿದ್ದರು. ಈ ವ್ಯಾಪ್ತಿಯಲ್ಲಿ ನಡೆದ ವಾಹನ ಕಳ್ಳತನದಲ್ಲಿ ಈತನದ್ದೇ ಕೈವಾಡವಿದ್ದು, ಅಲ್ಲಿಂದ ಕದ್ದ ಮೂರು ಹೊಂಡಾ ಆಕ್ಟಿವ ಕಂಪನಿಗೆ ಸೇರಿದ ದ್ವಿಚಕ್ರ ವಾಹನವನ್ನು ಬಳಿಕ ಮಾರಾಟ ಮಾಡುವ ಸಲುವಾಗಿ ನಗರದ ವಿವಿಧ ಆಟೋ ಕಲ್ಸಲ್ಟೆಂಟ್ ಸೆಂಟರ್ ಗಳಿಗೆ ಎಡತಾಕುತ್ತಿದ್ದನು.
ವರಮಹಾಲಕ್ಷ್ಮಿ ಹಬ್ಬದ ಮರುದಿನ ಮೈಸೂರಿನಲ್ಲಿ ಸರಣಿ ಕಳ್ಳತನ
ಈತ ನಂಜುಮಳಿಗೆ ಬಳಿಯಿರುವ ಆಟೋ ಕಲ್ಸಲ್ಟೆಂಟ್ ಸೆಂಟರ್ನಲ್ಲಿ ವ್ಯವಹಾರ ಕುದುರಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ನಂಜುಮಳಿಗೆಯ ಮೈಸೂರು ನಗರದ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಡಾ. ವಿಕ್ರಂ ವಿ ಅಮಟೆ, ಕೃಷ್ಣರಾಜ ವಿಭಾಗದ ಎಸಿಪಿ ಧರ್ಮಪ್ಪ ಅವರ ಮಾರ್ಗದರ್ಶನದಲ್ಲಿ ಲಕ್ಷ್ಮೀಪುರಂ ಪೊಲೀಸ್ ಠಾಣೆಯ ನಿರೀಕ್ಷಕರಾದ ಜಿ.ಎಸ್ ರಘು, ಪಿಎಸ್ ಐ ನಾಗಲಿಂಗು, ಎಎಸ್ ಐ ಮರಿಸ್ವಾಮಿ ಸಿಬ್ಬಂದಿ ರಾಜು ಸಿ ಎಸ್, ಸಂಜಯ್, ಶಂಕರ್, ಸುದೀಪ್ ಕುಮಾರ್, ಮೋಹನ್ ಕುಮಾರ್, ಸ್ವಾಮಿ, ಸುರೇಶ್ ಅಂಬಿಗೇರೆ, ಎಂ.ಆರ್. ಕುಮಾರ ಅವರನ್ನೊಳಗೊಂಡ ತನಿಖಾ ತಂಡ ದಾಳಿ ಮಾಡಿ ಆತನನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಈತ ಹಲವೆಡೆ ದ್ವಿಚಕ್ರವಾಹನವನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದ್ದು, ಆತನ ಬಳಿಯಿಂದ 1,40,000 ರೂ ಮೌಲ್ಯದ ಮೂರು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ದ್ವಿಚಕ್ರವಾಹನ ಕಳ್ಳನನ್ನು ಬಂಧಿಸಿರುವುದಕ್ಕೆ ಮೈಸೂರು ನಗರದ ಪೊಲೀಸ್ ಆಯುಕ್ತ ಡಾ. ಎ. ಸುಬ್ರಹ್ಮಣ್ಯೇಶ್ವರರಾವ್ ತನಿಖಾ ತಂಡವನ್ನು ಪ್ರಶಂಶಿಸಿದ್ದಾರೆ. ಈ ಸಂಬಂಧ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.