ಮೈಸೂರಿನಲ್ಲಿ ಗಾಂಜಾ ಮಾರುತ್ತಿದ್ದ ನಾಲ್ವರ ಬಂಧನ
ಗರದ ವಿವಿಧ ಕಾಲೇಜುಗಳ ಗಾಂಜಾ ವ್ಯಸನಿ ವಿದ್ಯಾರ್ಥಿಗಳಿಗೆ ಚಿಕ್ಕ ಪೊಟ್ಟಣಗಳಲ್ಲಿ ಗಾಂಜಾ ಸರಬರಾಜು ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಅಬಕಾರಿ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ಮೈಸೂರು, ಮೇ 29: ನಗರದ ವಿವಿಧ ಕಾಲೇಜುಗಳ ಗಾಂಜಾ ವ್ಯಸನಿ ವಿದ್ಯಾರ್ಥಿಗಳಿಗೆ ಚಿಕ್ಕ ಪೊಟ್ಟಣಗಳಲ್ಲಿ ಗಾಂಜಾ ಸರಬರಾಜು ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಇಂದು ಅಬಕಾರಿ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ಸೈಯದ್ ನಯಾಜ್ ಪಾಷಾ, ಸೈಯದ್ ಇರ್ಫಾನ್, ಅತೀಕ್ ಪಾಷಾ ಮತ್ತು ಹಸ್ರತ್ ಪಾಷಾ ಬಂಧಿತರಾಗಿದ್ದಾರೆ. ಇರ್ಫಾನ್ ಪಾಷಾ ಮತ್ತು ಶಹನಾಜ್ ದಾಳಿ ಸಂದರ್ಭ ತಲೆಮರೆಸಿಕೊಂಡಿದ್ದಾರೆ.[ಗಾಂಜಾ ಸಾಗಿಸಿ, ಸಿಕ್ಕಿಬಿದ್ದ ಮಂಗಳೂರಿನ ಖದೀಮರು]
ಆರೋಪಿಗಳು ಮೊದಲಿನಿಂದಲೂ ಗಾಂಜಾವನ್ನು ಮಾರಾಟ ಮಾಡುವ ದಂಧೆಯಲ್ಲಿ ನಿರತರಾಗಿದ್ದು, ನಗರದ ಕೆಲವು ಕಾಲೇಜು ಸೇರಿದಂತೆ ಜನಸಂದಣಿ ಜಾಗಗಳಲ್ಲಿ ಚಿಕ್ಕ ಚಿಕ್ಕ ಪೊಟ್ಟಣಗಳಲ್ಲಿ ಗಾಂಜಾವನ್ನು ತುಂಬಿಸಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಸಂಶಯ ಬಂದಿತ್ತಾದರೂ ಕಾಲೇಜುಗಳಿಗೆ ಗಾಂಜಾ ಎಲ್ಲಿಂದ ಬರುತ್ತದೆ ಎಂಬುದು ಮಾತ್ರ ನಿಗೂಢವಾಗಿಯೇ ಉಳಿದಿತ್ತು.
ಈ ನಡುವೆ ಮಂಡಿಮೊಹಲ್ಲಾ, ಶುನ್ನಿಚೌಕ ವ್ಯಾಪ್ತಿಯಲ್ಲಿ ಕೆಲವರು ಅಕ್ರಮವಾಗಿ ಗಾಂಜಾ ಶೇಖರಣೆ ಮಾಡಿಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಅಬಕಾರಿ ಇಲಾಖೆಗೆ ಬಂದಿತ್ತು.[ಬೀದರ್: ಬಸ್ ನಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ಕು ಮಹಿಳೆಯರ ಬಂಧನ]
ಅಬಕಾರಿ ಡೆಪ್ಯೂಟಿ ಕಮೀಷನರ್ ಜಗದೀಶ್ ನಾಯಕ್ ಅವರ ಮಾರ್ಗದರ್ಶನದಲ್ಲಿ ಮೈಸೂರು ಉಪ ವಿಭಾಗದ ಅಬಕಾರಿ ಅಧೀಕ್ಷಕ ಕೆ.ಎಂ.ತಮ್ಮಣ್ಣ ನೇತೃತ್ವದಲ್ಲಿ ದಾಳಿ ನಡೆಸಿದ ತಂಡ, ಗಾಂಜಾ ಮಾರಾಟ ಮಾಡುತ್ತಿದ್ದ ಅಡ್ಡೆಗಳ ಮೇಲೆ ದಾಳಿ ನಡೆಸಿದ್ದು, ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ಅವರಿಂದ ಅಕ್ರಮವಾಗಿ ಮಾರಾಟ ಮಾಡಲು ಶೇಖರಿಸಿಟ್ಟಿದ್ದ 14.450 ಕಿಲೋ ಗ್ರಾಂ ಒಣಗಿದ ಗಾಂಜಾವನ್ನು ವಶಪಡಿಸಿಕೊಂಡಿದೆ.
ಆರೋಪಿಗಳು ತಮ್ಮ ಅಕ್ರಮ ಗಾಂಜಾ ಶೇಖರಣಾ ಅಡ್ಡೆಗಳಿಂದ ಗಾಂಜಾವನ್ನು ಸಣ್ಣ ಸಣ್ಣ ಪ್ಯಾಕೇಟ್ ಗಳಲ್ಲಿ ತುಂಬಿಕೊಂಡು, ನಗರದ ಎಲ್ಲೆಡೆ ಆಯ್ದ ಜಾಗಗಳಲ್ಲಿ ವಿದಾರ್ಥಿಗಳಿಗೆ, ಯುವಕರಿಗೆ ಮತ್ತು ಪ್ರವಾಸಿಗರಿಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಈ ದಂಧೆ ಹಿಂದೆ ಬೃಹತ್ ಜಾಲವೇ ಇರುವ ಸಂಶಯವಿದ್ದು, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವ ಅಗತ್ಯವಿದೆ.