ಬೈಲುಕುಪ್ಪೆ ಸಮೀಪದ ಕೊಪ್ಪದಲ್ಲಿ ಸ್ವಚ್ಛತೆಗಿಲ್ಲ ಕಿಮ್ಮತ್ತು
ಮೈಸೂರು,ಮಾರ್ಚ್,22: ಮೈಸೂರು ಮತ್ತು ಕೊಡಗು ಗಡಿಗೆ ಹೊಂದಿಕೊಂಡಂತಿರುವ ಕೊಪ್ಪ ಗ್ರಾಮದಲ್ಲಿ ಅಶುಚಿತ್ವ ಮನೆ ಮಾಡಿದೆ. ಇಡೀ ಊರಿಗೇ ಊರು ಗಬ್ಬೆದ್ದು ನಾರುತ್ತಿದೆ. ಕೆಟ್ಟ ವಾಸನೆಗೆ ಹೆದರಿದ ಜನರು ಮನೆಯಿಂದ ಹೊರಬರಲು ಅಂಜುತ್ತಿದ್ದಾರೆ.
ದೇಶದಾದ್ಯಂತ ಸ್ವಚ್ಛತಾ ಅಭಿಯಾನ ನಡೆಯುತ್ತಿದ್ದರೆ, ಸ್ಥಳೀಯ ಗ್ರಾಮ ಪಂಚಾಯಿತಿ ನಮಗೂ ಅದಕ್ಕೂ ಸಂಬಂಧವಿಲ್ಲವೇನೋ ಎಂಬಂತೆ ತೆಪ್ಪಗಾಗಿದೆ. ಹೀಗಾಗಿ ರಸ್ತೆಯಲ್ಲಿ ಕಸಗಳು.. ಚರಂಡಿಯಲ್ಲಿ ತ್ಯಾಜ್ಯಗಳು ಕೊಳೆತು ನಾರುತ್ತಿದ್ದು ಮೂಗು ಮುಚ್ಚಿಕೊಂಡು ನಡೆದಾಡುವ ಪರಿಸ್ಥಿತಿ ಇಲ್ಲಿನ ಜನಕ್ಕೆ ಬಂದೊದಗಿದೆ.[ಸ್ವಚ್ಛ ಭಾರತ ಅಭಿಯಾನ, ದೇಶಕ್ಕೆ ಮೈಸೂರು ನಂ 1]
ಇಲ್ಲಿಗೆ ಸಮೀಪದಲ್ಲೇ ಬೈಲುಕುಪ್ಪೆಯ ಗೋಲ್ಡನ್ ಟೆಂಪಲ್ ಇದ್ದು, ಪ್ರವಾಸಿಗರು ತುಂಬಿ ತುಳುಕುತ್ತಿರುತ್ತದೆ. ಈ ಅಶುಚಿತ್ವ ಕಂಡು ಸ್ಥಳೀಯರು ಮಾತ್ರವಲ್ಲದೇ ಪ್ರವಾಸಿಗರು ಇಲ್ಲಿನ ವ್ಯವಸ್ಥೆ ಬಗ್ಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಗ್ರಾಮವು ಸುಮಾರು 2 ರಿಂದ 3 ಸಾವಿರದಷ್ಟು ಜನಸಂಖ್ಯೆ ಹೊಂದಿದ್ದು, ಸ್ವಚ್ಛತೆ ಕಾಪಾಡುವುದೇನು ಕಷ್ಟವಲ್ಲ. ಆದರೆ ಗ್ರಾಪಂನ ನಿರ್ಲಕ್ಷ್ಯ ಮತ್ತು ಶುಚಿತ್ವಕ್ಕೆ ಒತ್ತು ಕೊಡದ ಕಾರಣದಿಂದಾಗಿ ಗಬ್ಬೆದ್ದು ನಾರುತ್ತಿದ್ದು, ಅದರ ನಡುವೆ ಜೀವನ ಸಾಗಿಸಬೇಕಾದ ಅನಿವಾರ್ಯತೆ ಇಲ್ಲಿನ ಜನಕ್ಕೆ ಬಂದೊದಗಿದೆ.[ನಗರ ಸ್ವಚ್ಛವಾಗಿಡಿ.. ಇಲ್ಲದಿದ್ದರೆ ಇವನಿಗಾದಂತೆ ಆದೀತು!]
ಸುಮಾರು 35 ವರ್ಷಗಳ ಹಿಂದೆ ಮಾಡಿದ್ದ ಚರಂಡಿಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಅವು ಹೂಳು ತುಂಬಿ ಮುಚ್ಚಿಹೋಗಿದ್ದರೆ, ಮತ್ತೆ ಕೆಲವು ಚರಂಡಿಗಳಿದ್ದರೂ ಅದರಲ್ಲಿ ಸರಾಗವಾಗಿ ತ್ಯಾಜ್ಯ ನೀರು ಹರಿಯುವುದಿಲ್ಲ. ಇದರಿಂದ ಅಲ್ಲೇ ಕೊಳೆತು ದುರ್ವಾಸನೆ ಬೀರುತ್ತಿದೆ.[ಬೆಟ್ಟ ಸ್ವಚ್ಛಮಾಡಿದ ಯುವಕರ ತಂಡಕ್ಕೆ ಭೇಷ್ ಎನ್ನೋಣ]
ಸಾರ್ವಜನಿಕರು ತಮ್ಮ ಮನೆ ಮುಂದಿನ ಚರಂಡಿಯನ್ನು ಶುಚಿಯಾಗಿಡಲು ಪ್ರಯತ್ನಿಸಿದರೂ ಚರಂಡಿಯಲ್ಲಿ ನೀರು ಹರಿಯಲು ಸಾಧ್ಯವಾಗದ ಕಾರಣದಿಂದಾಗಿ ಸಮಸ್ಯೆ ತಲೆದೋರಿದೆ. ಗ್ರಾಮ ಪಂಚಾಯತಿ ಚರಂಡಿಯಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ.