ಸಿಂಹ, ಸಿಂಗಳೀಕ, ಅನಕೊಂಡ ಮೈಸೂರು ಮೃಗಾಲಯದ ಹೊಸ ಅತಿಥಿಗಳು
ಮೈಸೂರಿನ ವಿಶ್ವವಿಖ್ಯಾತ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ನೂತನ ಅತಿಥಿಗಳು ಸದ್ಯದಲ್ಲೇ ಆಗಮಿಸಲಿದ್ದಾರೆ. ಗುಜರಾತಿನಿಂದ ಸಿಂಹ, ಶ್ರೀಲಂಕಾದಿಂದ ಸಿಂಗಳೀಕ, ಅನಕೊಂಡ ಹಾವುಗಳು ಬರಲಿರುವ ಹೊಸ ಅತಿಥಿಗಳ ಪಟ್ಟಿಯಲ್ಲಿವೆ.
ಮೈಸೂರು, ಫೆಬ್ರವರಿ 7: ಮೈಸೂರಿನ ವಿಶ್ವವಿಖ್ಯಾತ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ನೂತನ ಅತಿಥಿಗಳು ಸದ್ಯದಲ್ಲೇ ಆಗಮಿಸಲಿದ್ದಾರೆ. ಗುಜರಾತಿನಿಂದ ಸಿಂಹ, ಶ್ರೀಲಂಕಾದಿಂದ ಸಿಂಗಳೀಕ, ಅನಕೊಂಡ ಹಾವುಗಳು ಬರಲಿರುವ ಹೊಸ ಅತಿಥಿಗಳ ಪಟ್ಟಿಯಲ್ಲಿವೆ.
ಪ್ರಾಣಿಗಳ ವಿನಿಮಯ ಯೋಜನೆಯಡಿ ಹಲವು ಪ್ರಾಣಿಗಳನ್ನು ಮೃಗಾಲಯಕ್ಕೆ ಕರೆತರಲಾಗುತ್ತಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಕಮಲ ಕರಿಕಾಳನ್ ತಿಳಿಸಿದ್ದಾರೆ. ಗುಜರಾತಿನಿಂದ ಒಂದು ಸಿಂಹ, ತಮಿಳುನಾಡಿನಿಂದ ಎರಡು ಸಿಂಗಳೀಕ, ಶ್ರೀಲಂಕಾದಿಂದ 6 ಹಸಿರು ಅನಕೊಂಡ ಹಾವುಗಳನ್ನು ತರಿಸಿಕೊಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.[ಮೈಸೂರು ಮೃಗಾಲಯ ಪ್ರವೇಶ ಮುಕ್ತ: ಹರಿದ ಜನಸಾಗರ]
ಇವುಗಳ ಜತೆಗೆ ಹಿಮಾಲಯನ್ ಕರಡಿ, ತೋಳ, ಕಪ್ಪು ಬಣ್ಣದ ಹಂಸ ಹಾಗೂ ಇತರೆ ಪಕ್ಷಿಗಳನ್ನು ಮೃಗಾಲಯಕ್ಕೆ ತರಲಿದ್ದಾರೆ. ಇದಕ್ಕಾಗಿ ಗುಜರಾತಿನ ಸಕ್ಕರ್ ಬಾಗ್ ಮೃಗಾಲಯದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಚೆನ್ನೈಗೆ ಸಮೀಪದಲ್ಲಿರುವ ಅರಿಗ್ನಾರ್ ಅಣ್ಣಾ ಮೃಗಾಲಯದಿಂದ ಹೆಣ್ಣು ಮತ್ತು ಗಂಡು ಸಿಂಗಳೀಕಗಳನ್ನು, ಶ್ರೀಲಂಕದ ರಾಷ್ಟ್ರೀಯ ಮೃಗಾಲಯದಿಂದ ಅನಕೊಂಡಗಳನ್ನು ತರಿಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.[ಫೆ.3 ರಿಂದ ಮೈಸೂರು ಮೃಗಾಲಯ ಪ್ರವೇಶ ಮುಕ್ತ]
ಇವುಗಳ ಬದಲಿಗೆ ಮೃಗಾಲಯವು ಕೃಷ್ಣ ಮೃಗಗಳನ್ನು ನೀಡಲಿದೆ. ಅಂದುಕೊಂಡಂತೆ ಆಗಿದ್ದರೆ ಹೊಸ ಅತಿಥಿಗಳು ಕಳೆದ ತಿಂಗಳೇ ಬರಬೇಕಾಗಿತ್ತು. ಆದರೆ ಹಕ್ಕಿ ಜ್ವರದ ಭೀತಿಯಿಂದಾಗಿ ಮೃಗಾಲಯ ಒಂದು ತಿಂಗಳ ಅವಧಿ ಮುಚ್ಚಿದ್ದರಿಂದ ಈಗ ಹೊಸ ಸ್ವಲ್ಪ ವಿಳಂಬವಾಗಿ ಪ್ರಾಣಿಗಳನ್ನು ಕರೆಸಿಕೊಳ್ಳಲಾಗುತ್ತಿದೆ. ಈ ಮೂಲಕ ರಾಜ್ಯದಲ್ಲಿ ಅನಕೊಂಡ ಹಾವುಗಳಿರುವ ಮೊದಲ ಮೃಗಾಲಯ ಶ್ರೀಚಾಮರಾಜೇಂದ್ರ ಮೃಗಾಲಯವಾಗಲಿದೆ.