ಮೈಸೂರು ಜನರಿಗೆ ಬೆಳ್ಳಂಬೆಳಗ್ಗೆ ಶಾಕ್, ಅಕ್ರಮ ನೀರಿನ ಸಂಪರ್ಕ ಕಟ್
ಮೈಸೂರು, ಆಗಸ್ಟ್ 7: ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕೆಜಿ ಕೊಪ್ಪಲಿನ ನಿವಾಸಿಗಳಿಗೆ ಇಂದು ಬೆಳಿಗ್ಗೆ ಪಾಲಿಕೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಇಲ್ಲಿನ ಹಲವು ಮನೆಗಳ ನಿವಾಸಿಗಳು ಪಡೆದಿದ್ದ ಅನಧಿಕೃತ ನೀರಿನ ಸಂಪರ್ಕ ಮತ್ತು ಬಿಲ್ ಪಾವತಿಸದ ಮನೆಗಳ ನೀರಿನ ಸಂಪರ್ಕವನ್ನು ಅಧಿಕಾರಿಗಳು ಕಡಿತಗೊಳಿಸಿದ್ದಾರೆ.
ಪೊಲೀಸ್ ಭದ್ರತೆಯೊಂದಿಗೆ ಬಂದ ಅಧಿಕಾರಿಗಳು ಬಿಲ್ ಬಾಕಿ ಉಳಿಸಿಕೊಂಡಿದ್ದ ಹಾಗೂ ಅಕ್ರಮ ಸಂಪರ್ಕ ಪಡೆದಿದ್ದ ಸುಮಾರು 400ಕ್ಕೂ ಹೆಚ್ಚು ಮನೆಯವರ ನೀರಿನ ಸಂಪರ್ಕ ಕಡಿತಗೊಳಿಸಿದ್ದಾರೆ. ಈ ವೇಳೆ ನಿವಾಸಿಗಳು ಪ್ರತಿರೋಧ ಒಡ್ಡಿದರೂ ಪೊಲೀಸ್ ಭದ್ರತೆಯಲ್ಲಿ ನೀರಿನ ಸಂಪರ್ಕವನ್ನು ಅಧಿಕಾರಿಗಳು ಕಟ್ ಮಾಡಿ ತೆರಳಿದ್ದಾರೆ.
"ಒಟ್ಟಾರೆ ಪಾಲಿಕೆ ವ್ಯಾಪ್ರಿಯಲ್ಲಿ 25,000 ಅಕ್ರಮ ನೀರಿನ ಸಂಪರ್ಕ ಹೊಂದಿರುವುದು ಮತ್ತು ಬಿಲ್ ಬಾಕಿ ಉಳಿಸಿಕೊಂಡಿರುವುದು ಪತ್ತೆಯಾಗಿತ್ತು. ಈ ಸಂದರ್ಭ ದಂಡ ಕಟ್ಟಿ ಸಕ್ರಮಗೊಳಿಸಲು ಅವಕಾಶ ನೀಡಿದ್ದೆವು. ಮತ್ತು ಸಾರ್ವಜನಿಕರಿಗೆ ಈ ಕುರಿತು ಅರಿವು ಮೂಡಿಸಿದ್ದೆವು. ಹೀಗಿದ್ದೂ ಸಕ್ರಮಗೊಳಿಸದ 17,000 ಸಂಪರ್ಕವನ್ನು ಕಡಿತಗೊಳಿಸಲು ತೀರ್ಮಾನಿಸಿದ್ದೇವೆ," ಎಂದು ಪಾಲಿಕೆ ಆಯುಕ್ತ ಜಗದೀಶ್ ಹೇಳಿದ್ದಾರೆ.