ಮೈಸೂರು ಪಾಲಿಕೆ ಸದಸ್ಯರ ಕರೆ ಕಡಿತಕ್ಕೆ ಮೇಯರ್ ಗರಂ
ಯಾರು ಅನಗತ್ಯ ಕರೆಗಳನ್ನು ಮಾಡಿ ಪಾಲಿಕೆಗೆ ವೆಚ್ಚ ಬರುವಂತೆ ಮಾಡಿದ್ದಾರೋ ಬಿಎಸ್ಎನ್ಎಲ್ ಅಂಥಹವರನ್ನು ತನಿಖೆಗೊಳಪಡಿಸಬೇಕು. ಎಲ್ಲರ ಸಂಖ್ಯೆಗಳನ್ನು ಬಂದ್ ಮಾಡುವುದಲ್ಲ ಎಂದು ಮೇಯರ್ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರು, ಮೇ 2 : ಮೈಸೂರು ಮಹಾನಗರ ಪಾಲಿಕೆಯ 65 ವಾರ್ಡ್ ಗಳ ಸದಸ್ಯರ ಮೊಬೈಲ್ ಸಂಪರ್ಕವನ್ನು ಏಕಾಏಕಿ ಕಡಿತಗೊಳಿಸಿದ ಬಿಎಸ್ಎನ್ಎಲ್ ವಿರುದ್ಧ ಮೈಸೂರು ಮೇಯರ್ ಎಂ.ಜೆ.ರವಿಕುಮಾರ್ ಕಿಡಿಕಾರಿದ್ದಾರೆ.
ಮೈಸೂರು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯಾರು ಯಾರು ಅನಗತ್ಯ ಕರೆಗಳನ್ನು ಮಾಡಿ ಪಾಲಿಕೆಗೆ ಹೆಚ್ಚಿನ ವೆಚ್ಚ ಬರುವಂತೆ ಮಾಡಿದ್ದಾರೋ ಬಿ.ಎಸ್.ಎನ್.ಎಲ್ ಅಂಥಹವರನ್ನು ತನಿಖೆಗೊಳಪಡಿಸಬೇಕೇ ಹೊರತು ಎಲ್ಲರ ಸಂಖ್ಯೆಗಳನ್ನು ಬಂದ್ ಮಾಡುವುದಲ್ಲ. ಇದು ತಪ್ಪು ಎಂದು ಅಭಿಪ್ರಾಯಪಟ್ಟರು.[ಮೈಸೂರು ಪಾಲಿಕೆ ಸದಸ್ಯರ ಮೊಬೈಲ್ ಫೋನ್ ಬಿಲ್ ಲಕ್ಷಗಟ್ಟಲೆ, ಇದೀಗ ಸೇವೆ ಬಂದ್]
ಸೋಮವಾರ ನಗರದೆಲ್ಲೆಡೆ ಭಾರೀ ಬಿರುಗಾಳಿ ಮಳೆಗೆ ಮರ, ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಜನತೆ ನಮಗೆ ಸಮಸ್ಯೆ ಬಗೆಹರಿಸಲು ಕರೆ ಮಾಡಿದರೆ ಯಾವ ಸದಸ್ಯನ ನಂಬರ್ ಗಳೂ ಚಾಲ್ತಿಯಲ್ಲಿರಲಿಲ್ಲ. ಇಂಥಹ ಸಂದರ್ಭದಲ್ಲಿ ಸಾರ್ವಜನಿಕರು ಏನು ಮಾಡಬೇಕು? ಮೊಬೈಲ್ ಸಂಪರ್ಕ ಸ್ಥಗಿತಗೊಳಿಸಿರುವ ಕ್ರಮ ಸರಿಯಾದರೂ ಪರ್ಯಾಯ ವ್ಯವಸ್ಥೆ ಮಾಡಬೇಕಿತ್ತು ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಮೇಯರ್ ರತ್ನ ಲಕ್ಷ್ಮಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪಾಲಿಕೆಯ ಸದಸ್ಯರ ಫೋನ್ ಬಿಲ್ ಗಳು ಲಕ್ಷದ ಗಡಿ ದಾಟಿದ ಹಿನ್ನಲೆಯಲ್ಲಿ ಬಿಎಸ್ಎನ್ಎಲ್ ಎಲ್ಲರ ಮೊಬೈಲ್ ಸಂಖ್ಯೆಯನ್ನೂ ಬ್ಲಾಕ್ ಮಾಡಿತ್ತು. ಪೌರಾಡಳಿತ ಇಲಾಖೆಯ ನಿರ್ದೇಶನದ ಮೇರೆಗೆ ಕಂಪೆನಿ ಈ ಕ್ರಮ ಕೈಗೊಂಡಿತ್ತು.