ಬರಡಾಗಿದ್ದ ಶಿಂಷಾ ನದಿಗೆ ಮತ್ತೆ ಜೀವಕಳೆ ತಂದ ಮಳೆ
ಮೈಸೂರು, ನವೆಂಬರ್, 05 : ಕೆಲವು ದಿನಗಳಿಂದ ಧಾರಕಾರವಾಗಿ ಮಳೆ ಸುರಿದ ಪರಿಣಾಮ ಶಿಂಷಾ ನದಿ ನೀರು ಇಗ್ಗಲೂರು ಡ್ಯಾಂ ಮೂಲಕ ತಮಿಳುನಾಡಿಗೆ ಹರಿದು ಹೋಗುತ್ತಿದೆ. ಇದನ್ನು ತಡೆದು ಕೆರೆ ಕಟ್ಟೆಗಳಿಗೆ ತುಂಬಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
ಮಂಡ್ಯ ಸೇರಿದಂತೆ ಮದ್ದೂರು ವ್ಯಾಪ್ತಿಯಲ್ಲಿ ಕೆಲದಿನಗಳಿಂದ ಉತ್ತಮ ಮಳೆಯಾಗಿ ಶಿಂಷಾ ನದಿ ತುಂಬಿ ತುಳುಕುತ್ತಿದ್ದರೂ ಇದರಿಂದ ಹೆಚ್ಚಿನ ಪ್ರಯೋಜನವಾಗುತ್ತಿಲ್ಲ. ಹಾಗಾಗಿ ಪೋಲಾಗುವ ನೀರನ್ನು ಸದುಪಯೋಗ ಆಗುವಂತೆ ಮಾಡಬೇಕೆಂದು ರೈತರು ಮನವಿ ಮಾಡಿಕೊಂಡಿದ್ದಾರೆ.[ಹಿಂಗಾರು ಆರ್ಭಟಕ್ಕೆ ಮಲೆನಾಡು ತತ್ತರ, ಇನ್ನೆರಡು ದಿನ ಮಳೆ]
ಒಟ್ಟಿನಲ್ಲಿ ಈಗಾಗುತ್ತಿರುವ ಮಳೆಯಿಂದ ಶಿಂಷಾ ನದಿಗೆ ಜೀವಕಳೆ ಬಂದಿದ್ದು ಧುಮ್ಮಿಕ್ಕಿ ಹರಿಯುತ್ತಿದೆ. ಇದರಿಂದ ಕೆಲವೆಡೆ ಫಸಲು ಹಾಳಾಗಿದ್ದರೂ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಈ ನಡುವೆ ನದಿಯಲ್ಲಿ ನೀರಿಲ್ಲದೆ ಗಿಡ-ಗಂಟಿಗಳು ಬೆಳೆದು, ಬರಡಾಗಿತ್ತು. ಅಲ್ಲದೆ ಮರಳು ದಂಧೆಕೋರರು ಒಡಲನ್ನು ಬಗಿದು ಮರಳು ಹೊರತೆಗೆದಿದ್ದರು. ನದಿಯಲ್ಲಿ ನೀರು ಹರಿಯದ ಕಾರಣ ಸುತ್ತಮುತ್ತಲಿನ ರೈತರು ಕಂಗಾಲಾಗಿದ್ದರು. ಆದರೆ ಇದೀಗ ನದಿ ತುಂಬಿ ಹರಿದಿರುವುದು ರೈತರಿಗೆ ಖುಷಿ ತಂದಿದೆ.[ಜನವರಿ 2016ರಿಂದ ಲೋಡ್ ಶೆಡ್ಡಿಂಗ್ ಇಲ್ಲ: ಡಿಕೆಶಿ]
ಜೊತೆಗೆ ಮದ್ದೂರು ಸಮೀಪದ ವೈದ್ಯನಾಥಪುರದ ಬಳಿ ಶಿಂಷಾನದಿಯನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಗ್ರಾಮಸ್ಥರೇ ಮಾಡಿದ್ದಾರೆ. ದೇವಾಲಯದ ಮುಂದಿದ್ದ ಗಿಡ-ಗಂಟಿಗಳನ್ನು ವೈದ್ಯನಾಥಪುರ ಹಾಗೂ ಆಲೂರು ಗ್ರಾಮಸ್ಥರು ನದಿಯನ್ನು ಸ್ವಚ್ಛಗೊಳಿಸುವ ಮೂಲಕ ನೀರು ಸರಾಗವಾಗಿ ಹರಿಯುವಂತೆ ಮಾಡಿದರು.