ಜಯಚಾಮರಾಜ ಒಡೆಯರ್ ಪ್ರತಿಮೆ ಮೈಸೂರಿನ ಹೊಸ ಆಕರ್ಷಣೆ
ಮೈಸೂರು, ಜುಲೈ, 18: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿರುವ ಕೃಷ್ಣರಾಜ ಒಡೆಯರ್, ಚಾಮರಾಜ ಒಡೆಯರ್ ಅವರ ಪ್ರತಿಮೆ ಜತೆಯಲ್ಲಿಯೇ ಇದೀಗ ಜಯಚಾಮರಾಜ ಒಡೆಯರ್ ಅವರ ಪ್ರತಿಮೆ ಅನಾವರಣಗೊಂಡಿದ್ದು, ನಗರದ ಶೋಭೆ ಹೆಚ್ಚಿಸಿದೆ.
ಇತರೆ ನಗರಗಳಿಗೆ ಹೋಲಿಸಿದರೆ ಮೈಸೂರು ನಗರ ವಿಭಿನ್ನ ಮತ್ತು ವಿಶಿಷ್ಟವಾಗಿ ಗಮನಸೆಳೆಯುತ್ತಿದೆ. ಅರಮನೆಗಳು, ಬೃಂದಾವನಗಳು, ಪಾರಂಪರಿಕ ಕಟ್ಟಡಗಳು ಜತೆಗೆ ಅಲ್ಲಲ್ಲಿರುವ ಪ್ರತಿಮೆಗಳು ಕೂಡ ನಗರಕ್ಕೊಂದು ಚೆಲುವನ್ನು ತಂದುಕೊಟ್ಟಿದೆ. [ಯದುವೀರ್-ತ್ರಿಷಿಕಾ ಮದುವೆಯ ಚಿತ್ರಗಳು]
ವೃತ್ತಗಳೆಂದಾಗ ಮೈಸೂರಿನಲ್ಲಿ ತಕ್ಷಣಕ್ಕೆ ನೆನಪಿಗೆ ಬರುವುದು ಕೃಷ್ಣರಾಜ ಒಡೆಯರ್ ವೃತ್ತ, ಅದರಿಂದ ಅನತಿ ದೂರದಲ್ಲಿರುವ ಚಾಮರಾಜ ಒಡೆಯರ್ ವೃತ್ತ. ಇದೀಗ ಅದರ ಪಕ್ಕದಲ್ಲೇ ಮತ್ತೊಂದು ಜಯಚಾಮರಾಜ ಒಡೆಯರ್ ಅವರ ಪ್ರತಿಮೆ ನಿರ್ಮಿಸಲಾಗಿದೆ. [ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಯದುವೀರ್-ತ್ರಿಷಿಕಾ]
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಮೆ ಅನಾವರಣ ಮಾಡಿದರು. ನವದಂಪತಿ ಯದುವೀರ್ ಮತ್ತು ತ್ರಿಷಿಕಾ ಸಹ ಕಾರ್ಯಕ್ರಮದಲ್ಲಿ ಹಾಜರಿದ್ದರು. ಇಡೀ ಕಾರ್ಯಕ್ರಮದ ಚಿತ್ರಣ ನೋಡಿಕೊಂಡು ಬನ್ನಿ...
ಪ್ರತಿಮೆ ಎಲ್ಲಿದೆ?
ನಗರದ ಹಾರ್ಡಿಂಗ್ ವೃತ್ತ ಎಂದು ಕರೆಯಲ್ಪಡುತ್ತಿದ್ದ ವೃತ್ತದಲ್ಲೆ ಜಯಚಾಮರಾಜ ಒಡೆಯರ್ ಅವರ ಪ್ರತಿಮೆ ಅನಾವರಣಗೊಳಿಸಲಾಗಿದೆ.
ಅನಾವರಣ ಮಾಡಿದ ಸಿದ್ದರಾಮಯ್ಯ
ಪಾರಂಪರಿಕತೆಯನ್ನು ಸಾರಿ ಹೇಳುವ ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಅನಾವರಣ ಮಾಡಿದರು.
ಸ್ವಚ್ಛ ನಗರ ಹೆಮ್ಮೆ
ಮೈಸೂರು ಎರಡನೇ ಬಾರಿ ದೇಶದ ಅತ್ಯಂತ ಸ್ವಚ್ಛ ನಗರ ಎಂಬ ಖ್ಯಾತಿಗೆ ಒಳಗಾಗಿದೆ. ಹೀಗೆ ಖ್ಯಾತಿ ಬರಲು ಮೈಸೂರು ಒಡೆಯರು ನೀಡಿದ ಕೊಡುಗೆ ಕಾರಣ ಎಂದು ಸಿದ್ದರಾಮಯ್ಯ ಹೇಳಿದರು.
ವ್ಯವಸ್ಥಿತ ನಿರ್ಮಾಣ
ಮೈಸೂರು ನಗರ ಹಾಗೂ ರಸ್ತೆಗಳನ್ನು ನಿರ್ಮಿಸುವಾಗ ವ್ಯವಸ್ಥಿತವಾಗಿ ನಿರ್ಮಿಸಿ ನಮಗೆ ಕೊಡುಗೆ ನೀಡಿದ್ದಾರೆ. ಅವರು ನೀಡಿರುವ ಪಾರಂಪರಿಕ ನಗರಕ್ಕೆ ಯಾವುದೇ ಧಕ್ಕೆ ಬಾರದ ರೀತಿಯಲ್ಲಿ ಅಭಿವೃದ್ಧಿ ಪಡಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಜಯಚಾಮರಾಜ ಒಡೆಯರ್ ಕೊಡುಗೆ
ಜಯಚಾಮರಾಜ ಒಡೆಯರ್ ಅವರ ಸೇವೆಯನ್ನು ನಾವು ಸ್ಮರಿಸಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ಯಾರ್ಯಾರಿದ್ದರು
ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹದೇವಪ್ಪ, ಸಚಿವ ಎಚ್.ಎಸ್.ಮಹದೇವ ಪ್ರಸಾದ್, ಶಾಸಕ ವಾಸು, ಶಾಸಕ ಎಂ.ಕೆ.ಸೋಮಶೇಖರ್, ಮರಿತಿಬ್ಬೇಗೌಡ, ಮೇಯರ್ ಬಿ.ಎಲ್.ಭೈರಪ್ಪ, ಉಪ ಮೇಯರ್ ವನಿತಾ ಪ್ರಸನ್ನ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಿಂಚಿದ ಹೊಸ ಜೋಡಿ
ಈ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ರಾಜಮಾತೆ ಪ್ರಮೋದಾದೇವಿ, ಯದುವೀರ್ ಮತ್ತು ತ್ರಿಷಿಕಾ ಸಹ ಆಗಮಿಸಿದ್ದರು. ಯದುವೀರ್ ಸೂಟ್ನಲ್ಲಿ, ತ್ರಿಷಿಕಾ ಜರಿ ಸೀರೆಯಲ್ಲಿ ಮಿರಿಮಿರಿ ಮಿಂಚುತ್ತಿದ್ದರು.
ಮೈಸೂರು ಸಾಕ್ಷಿ
ಈ ಕಾರ್ಯಕ್ರಮಕ್ಕೆ ಮೈಸೂರಿನ ನಾಗರಿಕರು ಸಾಕ್ಷಿಯಾದರು. ಸ್ವಚ್ಛ ನಗರದ ಸೌಂದರ್ಯ ಪ್ರತಿಮೆ ಸ್ಥಾಪನೆಯಿಂದ ಮತ್ತಷ್ಟು ಹೆಚ್ಚಾಗಿದೆ.