ಕೃಷಿಯನ್ನೇ ಬದುಕಾಗಿಸಿಕೊಂಡ ಮೈಸೂರಿನ ಎಂ.ಕಾಂ ಪದವೀಧರೆ
ಕೊಂಚ ಓದಿದರೆ ಸಾಕು ಪಟ್ಟಣದಲ್ಲಿ ಯಾವುದಾದರೂ ಒಂದು ಉದ್ಯೋಗ ತೆಗೆದುಕೊಂಡು ಕಷ್ಟವೋ ಸುಖವೋ ಕಾಲಕ್ಕೆ ಹೊಂದಿಕೊಂಡು ಬದುಕುವುದು ಇಂದಿನ ಯುವಪೀಳಿಗೆಗೆ ಮಾಮುಲಿ. ಆದರೆ ಮೈಸೂರಿನ ಯುವತಿಯೊಬ್ಬಳು ಎಲ್ಲಾ ವಿದ್ಯಾವಂತರಿಗೆ, ಗಂಡುಮಕ್ಕಳಿಗೆ, ಅದರಲ್ಲೂ ಹಳ್ಳಿ ಬಿಟ್ಟು ಪಟ್ಟಣ ಸೇರಿರುವ ಮಕ್ಕಳಿಗೆ ಮಾದರಿಯಾಗುವ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡು ಯಶಸ್ಸು ಕಂಡಿದ್ದಾಳೆ.
ಮಳೆಯ ಕೊರತೆ, ಸಾಲ ಇನ್ನಿತರ ನೆಪವೊಡ್ಡಿ ಕೃಷಿ ಕೆಲಸ ಬೇಡ ಎಂದು ಕೈ ಚೆಲ್ಲಿ ಕುಳಿತಿರುವ ರೈತರಿಗೆ ಮೈಸೂರು ಜಿಲ್ಲೆಯ ಕೃಷ್ಣರಾಜ ನಗರ ತಾಲೂಕಿನ ಸಾಲಿಗ್ರಾಮ ಹೋಬಳಿಗೆ ಸೇರಿದ ಕೆಡಗ ಗ್ರಾಮದ ಓಂಕಾರ್ ರಂಜನ ಆಶಾಕಿರಣವಾಗಿದ್ದಾಳೆ.
ಓಂಕಾರ್ ರಂಜನ ಓದಿರುವುದು ಎಂ.ಕಾಂ ಎಕನಾಮಿಕ್ಸ್. ಆದರೆ ವೃತ್ತಿ ಬದುಕು ಕಂಡುಕೊಂಡಿದ್ದು ಕೃಷಿಯಲ್ಲಿ. ಹೀಗೆ ಒಮ್ಮೆ ಕರ್ನಾಟಕದ ಕಾಶ್ಮೀರ ಕೊಡಗಿನತ್ತ ತೆರಳಿದ್ದಾಳೆ. ಆಗ ಆಕೆ ಅಲ್ಲಿನ ಮಹಿಳೆಯರು ಕೃಷಿಯಲ್ಲಿ ತೊಡಗಿಕೊಂಡಿರುವುದನ್ನು ಕಂಡಿದ್ದಾಳೆ. ಮಹಿಳೆಯರೂ ಕೃಷಿಯಲ್ಲಿ ಸಾಧನೆ ಮಾಡಬಹುದು ಎಂದು ಅರಿತ ಆಕೆ ತಕ್ಷಣ ಕೃಷಿಯತ್ತ ತನ್ನೆಲ್ಲಾ ಆಲೋಚನೆಗಳನ್ನು ಹರಿಯಬಿಟ್ಟು ತನ್ನ ಪ್ರಯತ್ನ ಶುರುಮಾಡಿದ್ದಾಳೆ.[ಒಣಗುವ ಬೆಳೆಗಳಿಗೆ ಕಾಯಕಲ್ಪ ಕಲ್ಪಿಸಿದ ಕೃಷಿ ಭಾಗ್ಯ]
ಈಕೆಯ ಕೃಷಿಯತ್ತ ಒಲವು ಬೆಳೆಸಿದ್ದು ಕೊಡಗಿನ ಮಹಿಳೆಯರಾದರೆ, ಆಕೆಯ ಕನಸಿಗೆ ನೀರು ಎರೆದು ಚಿಗುರಿಸಿದ್ದು, ಬೆಂಗಳೂರಿನಲ್ಲಿ ನಡೆದ ಕೃಷಿ ಮೇಳ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಈಕೆ ಹಲವು ಮಾಹಿತಿಗಳನ್ನು ಕಲೆಹಾಕಿದ ಈಕೆ ತಡಮಾಡದೇ ಸ್ಥಳೀಯ ಕೃಷಿ ಇಲಾಖಾ ಅಧಿಕಾರಿಗಳನ್ನು ಭೇಟಿ ಮಾಡಿ ಮಾರ್ಗದರ್ಶನ ಪಡೆಯುವ ಮೂಲಕ ಯಶಸ್ವಿ ಕೃಷಿಕರಾಗಿದ್ದಾರೆ. ಬನ್ನಿ ಅವರ ಕೃಷಿಯ ಬದುಕಿನ ಯಶೋಗಾಥೆ ನೋಡೋಣ.
ಓಂಕಾರ್ ರಂಜನ ಯಾರು?
ಈಕೆ ಮೈಸೂರು ಜಿಲ್ಲೆಯ ಕೃಷ್ಣರಾಜ ನಗರ ತಾಲೂಕಿನ ಸಾಲಿಗ್ರಾಮ ಹೋಬಳಿಗೆ ಸೇರಿದ ಕೆಡಗ ಗ್ರಾಮದವಳು. ಈಕೆಯ ತಂದೆ ಕೆ.ಪಿ.ನಟರಾಜ್ ಮೊದಲು ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು. ಮೈಸೂರಿನಲ್ಲೇ ಇದ್ದಾರೆ. ತಾಯಿ ಪಾರ್ವತಮ್ಮ. ಇವರ ದ್ವಿತೀಯ ಪುತ್ರಿಯೇ ಓಂಕಾರ್ ರಂಜನ. ಈಕೆ ಓದಿರುವುದು ಎಂ.ಕಾಂ ಎಕಾನಮಿಕ್ಸ್. ವೃತ್ತಿ ಬದುಕು ಕಂಡುಕೊಂಡಿದ್ದು ಕೃಷಿಯಲ್ಲಿ.
ಓಂಕಾರ್ ರಂಜನ ಏನೆಲ್ಲಾ ಕೆಲಸ ಮಾಡುತ್ತಾಳೆ?
ಈಕೆ ಹೆತ್ತವರ ಪಾಲಿಗೆ ಗಂಡುಮಗನಂತೆ ಕೃಷಿ ಕೆಲಸದಲ್ಲಿ ಪಾಲ್ಗೊಂಡು ಮನೆಗೆ ಆಶ್ರಯದಾತಳಾಗಿದ್ದಾಳೆ. ಈಕೆ ಜಮೀನನ್ನು ಟಿಲ್ಲರ್ ನಿಂದ ಉಳುಮೆ ಮಾಡುವುದು, ಜಮೀನಿಗೆ ನೀರು ಹಾಯಿಸುವುದು, ಬೀಜ ಬಿತ್ತನೆ, ಕಟಾವು, ಇನ್ನಿತರ ಎಲ್ಲಾ ಕೃಷಿ ಚಟುವಟಿಕೆಗಳನ್ನು ಬಹಳ ಖುಷಿಯಿಂದ ಮಾಡುತ್ತಾಳೆ.[ಕೊಡಗಿನ ಕಿತ್ತಳೆ ಬೆಳೆದ ಸುರೇಶ್ ಸುಬ್ಬಯ್ಯ ಸಾಧನೆ ಕಥೆ]
ಜಮೀನಿಗೆ ಏನೆಲ್ಲಾ ವ್ಯವಸ್ಥೆ ಕಲ್ಪಿಸಿಕೊಂಡಿದ್ದಾಳೆ?
ಓಂಕಾರ್ ರಂಜನ ತಮಗಿರುವ ನಾಲ್ಕು ಎಕರೆ ಜಮೀನಿನಲ್ಲಿ ಕೊಳವೆ ಬಾವಿ ಕೊರೆಯಿಸಿದ್ದು, ಹನಿ ನೀರಾವರಿ, ಸಾವಯವ ಕೃಷಿಯ ಮೊರೆಹೋಗಿದ್ದಾಳೆ. ಜೊತೆಗೆ ಸೋಲಾರ್ ವ್ಯವಸ್ಥೆ ಮಾಡಿಕೊಂಡಿದ್ದು, ರಾಸಾಯನಿಕ ಗೊಬ್ಬರದತ್ತ ಮುಖ ಮಾಡದೆ ಎರೆಗೊಬ್ಬರವನ್ನೇ ತಮ್ಮ ಜಮೀನಿಗೆ ಬಳಸಿಕೊಳ್ಳುತ್ತಾಳೆ. ಇದರಿಂದ ಬೆಳೆಯು ಸಮೃದ್ಧವಾಗಿ ಬೆಳೆದಿದೆ.
ಜಮೀನಿನಲ್ಲಿ ಏನೆಲ್ಲಾ ಬೆಳೆ ಬೆಳೆದಿದ್ದಾಳೆ?
ಈಕೆಗಿರುವ ನಾಲ್ಕು ಎಕರೆ ಜಮೀನಿನಲ್ಲಿ, ಒಂದೂವರೆ ಎಕರೆಯಲ್ಲಿ ಕಾಫಿ, ಮತ್ತು ಮೆಣಸು, ಒಂದು ಎಕರೆಯಲ್ಲಿ ಶುಂಠಿ, 600 ತೇಗದ ಮರಗಳು, 1,500 ಸಿಲ್ವರ್ ಮರಗಳನ್ನು ಬೆಳೆಯುವ ಮೂಲಕ ಕೃಷಿಯಲ್ಲೂ ಲಾಭವಿದೆ ಎಂದು ತೋರಿಸಿಕೊಟ್ಟಿದ್ದಾಳೆ.[ಕಷ್ಟದ ಸೂಜಿಯಿಂದ ಸುಂದರ ಬದುಕು ಹೊಲಿಯುತ್ತಿರುವ ಯಲ್ಲಮ್ಮ]