ಭಾನುವಾರದ ಮೈಸೂರು ಜಿಲ್ಲೆಯ ಕ್ರೈಂ ಸುದ್ದಿಗಳ ರೌಂಡಪ್
ಮೈಸೂರು, ಫೆಬ್ರವರಿ.26 : ಹೈಕಮಾಂಡ್ ಕಪ್ಪ ಡೈರಿ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಡೆಯುತ್ತಿರುವ ಅಗ್ಗ ಜಗ್ಗಾಟದ ನಡುವೆ ಮೈಸೂರೂ ಜಿಲ್ಲೆಯಲ್ಲಿ ಭಾನುವಾರ ನಡೆದ ಅಪರಾಧ ಸುದ್ದಿಗಳ ರೌಂಡಪ್ ಇಲ್ಲಿದೆ.
ಪತ್ನಿಯನ್ನು ಕೊಲೆಗೈದ ಪತಿ ಬಂಧನ: ಇತ್ತೀಚೆಗೆ ತನ್ನ ಪತ್ನಿ ಮಂಗಳಮ್ಮಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಪತಿಯನ್ನು ನಂಜನಗೂಡಿನ ಪೊಲೀಸರು ಬಂಧಿಸಿದ್ದಾರೆ. ಬಸವಶೆಟ್ಟಿ ಬಂಧಿತ ಆರೋಪಿ.
ಬಸವಶೆಟ್ಟಿ ಕಟ್ಟಿದ ತಾಳಿಯನ್ನ, ಮಂಗಳಮ್ಮ ಗಿರವಿ ಇಟ್ಟಿದ್ದಳು. ಬದುಕಿರುವಾಗಲೆ ತಾಳಿಯನ್ನು ಗಿರವಿ ಇಟ್ಟರೆ ನಾನು ಸತ್ತಂತೆ ಎಂದು ಪತ್ನಿ ಜತೆ ಜಗಳ ತೆಗೆದಿದ್ದಾನೆ. ಬಳಿಕ ಮಾತಿಗೆ ಮಾತು ಬೆಳೆದು ಪತಿ ಬಸವಶೆಟ್ಟಿ ಕುಡಿದ ಮತ್ತಿನಲ್ಲಿ ಕೋಪದಿಂದ ಹತ್ಯೆ ಮಾಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಕಾರು ಮರಕ್ಕೆ ಡಿಕ್ಕಿ: ಮರಕ್ಕೆ ಕಾರು ಢಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಭಾನುವಾರ ಪಿರಿಯಾಪಟ್ಟಣ ತಾಲೂಕಿನ ಆನೆಚೌಕೂರು ರಸ್ತೆಯ ಶ್ರೀಮುತ್ತರಾಯಸ್ವಾಮಿ ದೇವಸ್ಥಾನದ ಸಮೀಪ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಮಾಲೂರು ನಿವಾಸಿ ಕಾರು ಚಾಲಕ ಭಾಸ್ಕರ್ (32) ಮೃತ ದುರ್ದೈವಿ. ಈ ಬಗ್ಗೆ ಪಿರಿಯಾಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೈತ ಆತ್ಮಹತ್ಯೆ: ಸಾಲಬಾಧೆ ತಾಳಲಾರದೆ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಿ.ಬಸವನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಪಿ.ಬಸವನಹಳ್ಳಿ ಗ್ರಾಮದ ಯುವ ರೈತ ಲೋಕೇಶ್(23) ಮೃತಪಟ್ಟ ದುರ್ದೈವಿ.
ಬೆಳೆ ಬೆಳೆಯಲು ಬ್ಯಾಂಕು, ಮತ್ತಿತ್ತರೆ ಕಡೆಗಳಲ್ಲಿ ಸಾಲ ಮಾಡಿದ್ದ ಎನ್ನಲಾಗಿದ್ದು ಇಂದು ಬೆಳಗ್ಗೆ ಸಾಲ ಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾನೆ. ಈ ಪ್ರಕರಣ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಟಾಟಾ ಸುಮೋ-ಬೈಕ್ ಮುಖಾಮುಖಿ: ಟಾಟಾ ಸುಮೋ ಹಾಗೂ ದ್ವಿಚಕ್ರ ವಾಹನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಂಜನಗೂಡು-ಗುಂಡ್ಲುಪೇಟೆ ರಸ್ತೆಯಲ್ಲಿರುವ ಎಲಚಗೆರೆ ಗ್ರಾಮದ ಬಳಿ ನಡೆದಿದೆ. ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಾಲಕಿ ಅಪಹರಣ ಆರೋಪಿ ಬಂಧನ: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ವಿವಾಹವಾಗಿದ್ದ ಅರೆಪುರ ಗ್ರಾಮದ ನಿವಾಸಿ ಪ್ರಸನ್ನಕುಮಾರ್ (24) ಎನ್ನುವಾತನನ್ನು ಬಾಲ್ಯವಿವಾಹ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಪ್ರಸನ್ನಕುಮಾರ್ ಕಳೆದ ವಾರ ಅಪ್ರಾಪ್ತ ಹುಡುಗಿಯೋರ್ವಳನ್ನು ಅಪಹರಿಸಿದ್ದು, ತಾಲೂಕಿನ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿತ್ತು,
ಬಿಳಿಗೆರೆ ಠಾಣೆಯ ಪಿ.ಎಸ್.ಐ.ಸತೀಶ್ ಆರೋಪಿಯನ್ನು ವಶಕ್ಕೆ ಪಡೆದು ನಗರದ ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.