ಮೈಸೂರು ಪತ್ರಕರ್ತ ಬಿಳಿಗಿರಿ ರಂಗನಾಥ್ ನಿಧನ
ಮೈಸೂರು,ಮಾರ್ಚ್,08: ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಹಿರಿಯ ಸದಸ್ಯರೂ ಹಾಗೂ ಅಮೋಘ್ ಸುದ್ದಿ ವಾಹಿನಿಯ ಮುಖ್ಯಸ್ಥರಾಗಿದ್ದ ಬಿಳಿಗಿರಿ ರಂಗನಾಥ್ ಅವರು ಸೋಮವಾರ ನಿಧನರಾದರು. ಅವರಿಗೆ 46 ವರ್ಷ ವಯಸ್ಸಾಗಿತ್ತು.
ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಸ್ಥಳೀಯ ವಾಹಿನಿಗಳಲ್ಲಿ ಸುದ್ದಿಗಳ ಪ್ರಸಾರ ಸಿಟಿ ಕೇಬಲ್ ನಲ್ಲಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ ಅವರು ಕೇಬಲ್ ಟಿವಿ ಪ್ರಸಾರ ವ್ಯವಸ್ಥೆಯಲ್ಲಿ 20 ವರ್ಷಗಳ ಅನುಭವ ಹೊಂದಿದ್ದರು. ಸ್ಥಳೀಯ ವಾಹಿನಿಯಲ್ಲೂ ಪ್ರತಿ ಎರಡು ಗಂಟೆಗೊಮ್ಮೆ ಅರ್ಧ ಗಂಟೆ ಸ್ಥಳೀಯ ಸುದ್ದಿ ನೀಡುವ ಮೂಲಕ ಹೊಸದೊಂದು ದಾಖಲೆ ಬರೆದಿದ್ದರು.[ಪತ್ರಿಕೋದ್ಯಮದ ಜಿ ಸಂತಾ ಪ್ರಶಸ್ತಿಗೆ ರೇಖಾ ಸತೀಶ್ ಆಯ್ಕೆ]
ಮಾಧ್ಯಮದ ಸುದ್ದಿ ವಿಭಾಗದಲ್ಲಿ ಹಲವಾರು ಪತ್ರಕರ್ತರಿಗೆ, ಕ್ಯಾಮರಮನ್ ಗಳಿಗೆ, ತಂತ್ರಜ್ಞರಿಗೆ ತರಬೇತಿ, ಹಲವಾರು ಸಾಂಸ್ಕೃತಿಕ ಕಾರ್ಯಕ್ರಮದ ಸಂಘಟಕನಾಗಿ ದಸರಾ ವಸ್ತು ಪ್ರದರ್ಶನದ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾಗಿ ಹಾಗೂ ಕೇಂದ್ರ ಸರ್ಕಾರದ ದೂರವಾಣಿ ಸಲಹಾ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಣೆ ಮಾಡಿದ್ದರು.
ಪ್ರತಿ ಬಡಾವಣೆಗೊಂಡು ಪತ್ರಿಕೆ ನೀಡಬೇಕೆಂಬ ಉದ್ದೇಶದಿಂದ ಎರಡು ದಶಕಗಳ ಹಿಂದೆ 'ಬಡಾವಣೆಗೊಂಡು ಮಿತ್ರ' ಎಂಬ ಪತ್ರಿಕೆ ಆರಂಭಿಸಿದ್ದರು. ಮಾತ್ರವಲ್ಲದೆ, ಕನ್ನಡ ಚಳವಳಿ, ಸಾಹಿತ್ಯ, ಸಂಗೀತ ಕ್ಷೇತ್ರಗಳ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಅವರು, ದಿ.ಡಾ.ರಾಜಕುಮಾರ್ ಅವರ ಕಟ್ಟಾ ಅಭಿಮಾನಿಯಾಗಿದ್ದು, ವರ್ಷಕ್ಕೊಮ್ಮೆ ಅವರ ನೆನಪಿನಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದರು.[ಅಭಿವೃದ್ಧಿ, ಪರಿಸರ ಪತ್ರಿಕೋದ್ಯಮ ಪಶಸ್ತಿ ಪ್ರಕಟ]
ರಂಗನಾಥ್ ಅವರ ತಂದೆ ಗೋ.ಹನುಮಂತಶೆಟ್ಟಿ ಅವರು ಕೂಡ ಕನ್ನಡ ಚಳವಳಿ ಮುಖಂಡರಾಗಿದ್ದಾರೆ. ರಂಗನಾಥ್ ಅವರಿಗೆ ತಾಯಿ ನೀಲಾ, ಪತ್ನಿ ದರ್ಶಿನಿ, ಮಗ ಕುನಾಲ್ ಹಾಗೂ ಮಗಳು ಈಶ್ವರಿ ಇದ್ದಾರೆ. ಅಮೋಘ್ ವಾಹಿನಿ ಮಾತ್ರವಲ್ಲದೆ, ಸಿಟಿ ಟಿವಿ, ಪ್ಯಾಲೇಸ್ ಸಿಟಿ ಪ್ರಾಪರ್ಟಿಸ್, ಪ್ಯಾಲೇಸ್ ಸಿಟಿ ಸೈಬರ್ ನೆಟ್ ಸೇರಿದಂತೆ ಅನೇಕ ಉದ್ಯಮಗಳನ್ನು ಸ್ಥಾಪಿಸುವ ಮೂಲಕ ಹಲವು ಮಂದಿಗೆ ಉದ್ಯೋಗದಾತರಾಗಿದ್ದರು.