ಮೈಸೂರು ಈಗ ಬಯಲು ಶೌಚಮುಕ್ತ ನಗರಿ
ಮೈಸೂರು, ಸೆಪ್ಟೆಂಬರ್ 25: ಸ್ವಚ್ಛತೆಯಲ್ಲಿ ಎರಡನೇ ಬಾರಿಗೆ ನಂ 1 ಪಟ್ಟ ಗಿಟ್ಟಿಸಿಕೊಂಡಿದ್ದ ಸಾಂಸ್ಕೃತಿಕ ನಗರಿ ಮೈಸೂರಿಗೆ ಮತ್ತೊಂದು ಗರಿ ಮೂಡಿದೆ. ಇದೀಗ ಬಯಲು ಶೌಚಮುಕ್ತ ನಗರಿ ಎಂಬ ಪಟ್ಟವನ್ನು ಗಿಟ್ಟಿಸಿಕೊಂಡಿದೆ.
ಸ್ವಚ್ಛತಾ ಸಪ್ತಾಹದ ಅಂಗವಾಗಿ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾವು ಮೈಸೂರು ನಗರವನ್ನು ಬಯಲು ಶೌಚಮುಕ್ತ ನಗರ ಎಂದು ಘೋಷಿಸಿದೆ. ದೇಶದ 75 ನಗರಗಳನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆಯುವಲ್ಲಿ ಪಾಲಿಕೆಯ ಮೇಯರ್, ಸದಸ್ಯರು, ಅಧಿಕಾರಿಗಳು, ಪೌರಕಾರ್ಮಿಕರ ಪರಿಶ್ರಮ ಇರುವುದನ್ನು ತಳ್ಳಿ ಹಾಕುವಂತಿಲ್ಲ.[ನ.1ರಂದು ಬಯಲು ಶೌಚ ಮುಕ್ತ ರಾಜ್ಯಕ್ಕೆ ಮೋದಿ]
ಸ್ವಚ್ಛತೆ ಮತ್ತು ನೈರ್ಮಲ್ಯ ಮಟ್ಟವನ್ನು ಸುಧಾರಿಸುವ ಸಲುವಾಗಿ ನಗರಾಭಿವೃದ್ಧಿ ಮಂತ್ರಾಲಯವು ಸಮೀಕ್ಷೆ ನಡೆಸಿತ್ತು. ಕೌನ್ಸಿಲ್ ನ ಎಲ್ಲ ಮಾನದಂಡಗಳನ್ನು ಮೈಸೂರು ನಗರ ಪಾಲಿಸಿರುವುದರಿಂದ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ಸಂಸ್ಥೆಯು ಕೇಂದ್ರ ಸರ್ಕಾರದ ಅಧಿಕೃತ ಆದೇಶದೊಂದಿಗೆ ಬಯಲು ಶೌಚಮುಕ್ತ ನಗರ ಎಂದು ಘೋಷಣೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಅಭಿಯಾನವನ್ನು 2014ರ ಅಕ್ಟೋಬರ್ ನಲ್ಲಿ ಪ್ರಾರಂಭಿಸಿದ್ದು, ಇದು 2019ರ ವರೆಗೆ ನಡೆಯುತ್ತದೆ. ಇಷ್ಟಕ್ಕೂ ಮೈಸೂರು ಬಯಲು ಶೌಚ ಮುಕ್ತ ನಗರವಾಗಿ ಘೋಷಣೆ ಆಗಬೇಕಾದರೆ ಪಾಲಿಕೆ ವತಿಯಿಂದ ಹಲವು ಕಾರ್ಯಕ್ರಮಗಳನ್ನು ನಡೆಸಲಾಗಿದೆ.[ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಗೆ ಸಿಂಧು ರಾಯಭಾರಿ?]
ನಗರದಲ್ಲಿ ಶೇ 99 ಶೌಚಾಲಯಗಳಿದ್ದು, 425 ಮನೆಗಳು ವೈಯಕ್ತಿಕ ಶೌಚಾಲಯ ಹೊಂದಿಲ್ಲ. ಈ ಕುಟುಂಬಗಳಿಗೆ ನಗರ ಪಾಲಿಕೆಯು ಪ್ರೋತ್ಸಾಹಧನ ನೀಡಿ, ಶೌಚಾಲಯ ನಿರ್ಮಿಸಿಕೊಡಲು ಮುಂದಾಗಿದೆ.
ಸಂಸ್ಥೆಯ ಅಧಿಕಾರಿಗಳು ಮೊದಲೇ ನಗರಗಳಲ್ಲಿ ಸಮೀಕ್ಷೆ ನಡೆಸಿ, ರೈಲ್ವೆ ಹಳಿ, ಕೊಳಚೆ ಪ್ರದೇಶ ಸೇರಿದಂತೆ ಹಲವು ಸ್ಥಳಗಳ ಛಾಯಾಚಿತ್ರವನ್ನು ತೆಗೆದು ಅಪ್ ಲೋಡ್ ಮಾಡುತ್ತಾರೆ. ಬಳಿಕ ಆಯುಕ್ತರು, ಸ್ವಸಹಾಯ ಸಂಘದ ಸದಸ್ಯರು, ಪಾಲಿಕೆ ಸದಸ್ಯರು, ಅಧಿಕಾರಿಗಳು, ಆಯಾ ವ್ಯಾಪ್ತಿಯ ನಿವಾಸಿಗಳಿಂದ ಮಾಹಿತಿ ಪಡೆದು, ಆ ಮೂಲಕ ಆಯ್ಕೆ ಮಾಡಲಾಗುತ್ತದೆ.