ನಮೋ ಸ್ವಾಗತಕ್ಕೆ ಸಿಂಗಾರಗೊಂಡ ಅರಮನೆ ನಗರಿ
ಮೈಸೂರು, ಜನವರಿ 02 : ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆಗಮಿಸುತ್ತಿರುವ ನರೇಂದ್ರ ಮೋದಿ ಅವರನ್ನು, ಸಿಂಗಾರಗೊಂಡಿರುವ ಅರಮನೆ ನಗರಿ ಸ್ವಾಗತಿಸಲು ಸಜ್ಜುಗೊಂಡಿದೆ. 103ನೇ ವಿಜ್ಞಾನ ಸಮಾವೇಶ ಸೇರಿದಂತೆ ಮೋದಿ ಅವರು ಎರಡು ದಿನಗಳಲ್ಲಿ ಮೂರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಶನಿವಾರ ಸಂಜೆ 5ಗಂಟೆಗೆ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿಂದ ರಸ್ತೆ ಮಾರ್ಗವಾಗಿ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಅಲ್ಲಿಂದ ಜೆಎಲ್ಬಿ ರಸ್ತೆ ಮಾರ್ಗವಾಗಿ 6.15ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಜೆಎಸ್ಎಸ್ ಮಹಾವಿದ್ಯಾಪೀಠ ಹಮ್ಮಿಕೊಂಡಿರುವ ಶ್ರೀ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಧಾನಿ ಸಾಗುವ ಮಾರ್ಗವನ್ನು ದುರಸ್ತಿಗೊಳಿಸಿ ಬಿಳಿಬಣ್ಣದ ಪಟ್ಟೆ ಬಳಿಯಲಾಗಿದ್ದು, ಅಲ್ಲಲ್ಲಿ ಬ್ಯಾರಿಕೇಡ್ಗಳನ್ನು ನಿರ್ಮಿಸಲಾಗಿದೆ. ಅಷ್ಟೇ ಅಲ್ಲ ಈ ರಸ್ತೆ ಸೇರಿದಂತೆ ಆಸುಪಾಸು ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. [ಮೈಸೂರು ಪ್ರತಿದಿನ ನೆನೆಯಬೇಕಾದ ವೆಂಕಟಸುಬ್ಬ ಸೆಟ್ಟಿ]
ಭಾರೀ ಬಂದೋಬಸ್ತ್ : ಪ್ರಧಾನಿ ಬಂದಿಳಿಯುವ ಮಂಡಕಳ್ಳಿ ವಿಮಾನ ನಿಲ್ದಾಣದ ಸೇರಿದಂತೆ ಸುತ್ತಮುತ್ತ ಸುಮಾರು 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಆಯಕಟ್ಟಿನಲ್ಲಿ ಸುಮಾರು ಮೂರು ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಎಸ್ಪಿಜಿ ಅಧಿಕಾರಿಗಳು ಕಳೆದ ನಾಲ್ಕು ದಿನಗಳಿಂದಲೇ ನಗರದಲ್ಲಿ ಬೀಡುಬಿಟ್ಟಿದ್ದು, ಭದ್ರತೆಗೆ ಸಂಬಂಧಿಸಿದಂತೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಿದ್ದಾರೆ.
ಪ್ರಧಾನಿ ಸಾಗುವ ರಸ್ತೆಯಲ್ಲಿ ಮತ್ತು ವಾಸ್ತವ್ಯ ಹೂಡುವ ಸ್ಥಳದಲ್ಲಿ ಮೆಟಲ್ ಡೋರ್ ಡಿಟೆಕ್ಟರ್, ಬಾಂಬ್ ಪತ್ತೆ ದಳ, ಬಾಂಬ್ ನಿಷ್ಕ್ರೀಯ ದಳ, ಶ್ವಾನದಳ, ಬೆರಳಚ್ಚುಮುದ್ರೆ ಘಟಕ, ಅಶ್ವಾರೋಹಿ ದಳ, ಕೆಎಸ್ಆರ್ಪಿ, ಸಿಎಆರ್, ಡಿಎಆರ್, ಸಿವಿಲ್ ಸಂಚಾರಿ ವಿಭಾಗದ ಪೊಲೀಸರು ಭದ್ರತೆ ವಹಿಸಲಿದ್ದಾರೆ. [ಮೋದಿ ಕರ್ನಾಟಕ ಭೇಟಿ : ಕಾರ್ಯಕ್ರಮಗಳೇನು?]
ಕಾರ್ಯಕ್ರಮದ ಬಳಿಕ ಲಲಿತ್ ಮಹಲ್ ಪ್ಯಾಲೇಸ್ನ ಕೊಠಡಿ 222ರಲ್ಲಿ ವಾಸ್ತವ್ಯ ಹೂಡಲಿದ್ದಾರೆ ನರೇಂದ್ರ ಮೋದಿ. ಈ ಕೊಠಡಿಯಲ್ಲಿ ಹಿಂದೆ ಮಾಜಿ ರಾಷ್ಟ್ರಾಧ್ಯಕ್ಷ ದಿವಂಗತ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ವಾಸ್ತವ್ಯ ಹೂಡಿದ್ದರು ಎನ್ನಲಾಗಿದೆ.
ಎಲ್ಲೆಡೆ ಸಿಸಿಟಿವಿಯನ್ನು ಅಳವಡಿಸಲಾಗಿದ್ದು ಕಟ್ಟೆಚ್ಚರ ವಹಿಸಲಾಗಿದೆ. ಇಡೀ ನಗರ ಸುಂದರವಾಗಿ ಕಂಗೊಳಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಆಗಮನಕ್ಕಾಗಿ ಕಾಯಲಾಗುತ್ತಿದೆ. [ಪುಷ್ಪಲೋಕದಲ್ಲಿ ಮಿನುಗುತ್ತಿರುವ ಮೈಸೂರು ಅರಮನೆ]