ಮಳೆ ಸಿಂಚನದ ನಡುವೆ ಸಂಚಲನ ಮೂಡಿಸಿದ ವಿಶ್ವವಿಖ್ಯಾತ ಜಂಬೂ ಸವಾರಿ
ಮೈಸೂರು, ಅಕ್ಟೋಬರ್, 11 : ತುಂತುರು ಮಳೆ ನಡುವೆಯೂ ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆ ಅದ್ದೂರಿಯಾಗಿ ಆರಂಭವಾಯಿತು. ಜಿಟಿಜಿಟಿ ಮಳೆಯನ್ನೂ ಲೆಕ್ಕಿಸದೇ ಜನ ಉತ್ಸಾಹದಿಂದ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿ ಪುಳಕಿತರಾದರು.
ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಂಬೂ ಸವಾರಿ ಮೆರವಣಿಗೆಗೆ ಅಧಿಕೃತ ಚಾಲನೆ ನೀಡಿದರು.
ಜಂಬೂ ಸವಾರಿ ಆರಂಭಕ್ಕೂ ಮುನ್ನ ಅಶ್ವ ದಳದ ಕವಾಯತು ನಡೆದದ್ದು ವಿಶೇಷವಾಗಿತ್ತು. 21 ಬಾರಿ ಕುಶಾಲ ತೋಪು ಸಿಡಿಸಿ ತಾಯಿ ಚಾಮುಂಡೇಶ್ವರಿ ಅಂಬಾರಿ ಉತ್ಸವಕ್ಕೆ ಗೌರವ ವಂದನೆ ಸಲ್ಲಿಸಲಾಯಿತು.
ಇನ್ನೂ ಜಂಬೂಸವಾರಿ ಮೆರವಣಿಗೆಯಲ್ಲಿ ವೀರಗಾಸೆ, ಧ್ವಜಕುಣಿತ, ಪಟಕುಣಿತ, ಹಾಲಕ್ಕಿ ಕುಣಿತ, ನವಿಲು ನೃತ್ಯ ಸೇರಿದಂತೆ 60ಕ್ಕೂ ಹೆಚ್ಚು ವಿವಿಧ ಕಲಾ ಪ್ರಕಾರಗಳು ಹಾಗೂ 30 ಜಿಲ್ಲೆಗಳು, 8 ಇಲಾಖೆಗಳು, 4 ಬ್ಯಾಂಕ್ ಗಳ ವಿವಿಧ ಪ್ರಕರಾದ 42 ಸ್ತಬ್ಧಚಿತ್ರಗಳು ಭಾಗವಹಿಸಿ ಸಾರ್ವಜನಿಕರ ಮನಸೂರೆಗೊಂಡವು.
ಜಂಬೂ ಸವಾರಿ ಮೆರವಣಿಗೆ ಮುಂದೆ ವಿಶೇಷ ಅಶ್ವದಳ ಮತ್ತು ಬ್ಯಾಂಡ್ ಸೆಟ್ ಸಂಗೀತವನ್ನು ಲಕ್ಷಾಂತರ ಜನರಲ್ಲಿ ರೋಮಾಚಂನ ಮೂಡಿಸುವಂತೆ ಇತ್ತು. ಮೈಸೂರಿನ ಕಲಾ ತಂಡಗಳು ಸಾರ್ವಜನಿಕರನ್ನು ವಿಶೇಷವಾಗಿ ರಂಜಿಸಿದವು.
ಸತತ ಐದನೇ ಬಾರಿಗೆ ಅರ್ಜುನ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು ರಾಜ ಗಾಂಭೀರ್ಯದಿಂದ ಸಾಗುವುದನ್ನು ಸಾರ್ವಜನಿಕರು ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಅರಮನೆಯ ಬಲರಾಮ ದ್ವಾರದಿಂದ, ಚಾಮರಾಜೇಂದ್ರ ಸರ್ಕಲ್, ಕೆ.ಆರ್. ಸರ್ಕಲ್, ಸಯ್ಯಜಿರಾವ್ ರಸ್ತೆ, ಆಯಯರ್ವೇದ ಸರ್ಕಲ್, ಆರ್ ಎಂ ಸಿ ವೃತ್ತದ ಮೂಲಕ ಇನ್ನು ಕೆಲವೇ ನಿಮಿಷಗಳಲ್ಲಿ ಬನ್ನಿಮಂಟಪಕ್ಕೆ ಅಂಬಾರಿ ಆಗಮಿಸಲಿದೆ.
ಅರ್ಜುನನ ಕುಮ್ಕಿ ಆನೆಗಳಾದ ಕಾವೇರಿ ಮತ್ತು ವಿಜಯ ಆನೆಗಳು ಸಾಥ್ ನೀಡುತ್ತಿವೆ. ರಸ್ತೆಯ ಇಕ್ಕೆಲಗಳಲ್ಲಿ ಲಕ್ಷಾಂತರ ಜನರು ಅಂಬಾರಿ ಉತ್ಸವವನ್ನು ಕಣ್ಣುಂಬಿಕೊಳ್ಳುತ್ತಿದ್ದಾರೆ. ಬಸ್ ಗಳು, ಮರಗಳು, ಕಟ್ಟಡಗಳನ್ನು ಏರಿ ಅಂಬಾರಿ ಮೆರವಣಿಗೆಯನ್ನು ಸಾರ್ವಜನಿಕರು ವೀಕ್ಷಿಸುತ್ತಿದ್ದಾರೆ.