ಆ.10ರಂದು ಮೈಸೂರು ದಸರಾ ಗಜಪಡೆ ಸ್ವಾಗತಕ್ಕೆ ಸಕಲ ಸಿದ್ಧತೆ
ಮೈಸೂರು, ಜುಲೈ 30 : ಇದುವರೆಗೆ ಯಾವುದೇ ಪ್ರಚಾರವಿಲ್ಲದೆ, ಸದ್ದಿಲ್ಲದೆ ಆಗಮಿಸುತ್ತಿದ್ದ ದಸರಾ ಗಜಪಡೆಗೆ ಈ ಬಾರಿ ಅಭೂತಪೂರ್ವ ಸ್ವಾಗತದೊಂದಿಗೆ ಬರಮಾಡಿಕೊಳ್ಳಲು ಅರಣ್ಯ ಇಲಾಖೆ ನಿರ್ಧರಿಸಿದೆ.
ಪ್ರವಾಸಿಗರು ಹಾಗೂ ವಿವಿಧ ಜಾನಪದ ಕಲಾ ತಂಡಗಳನ್ನು ಬಳಸಿಕೊಂಡು ಆಗಸ್ಟ್ 10ರಂದು ಆರಂಭವಾಗಲಿರುವ ಗಜ ಪಯಣಕ್ಕೆ ಅರಣ್ಯ ಇಲಾಖೆ ಆಲೋಚನೆ ನಡೆಸಿದೆ.
ಸಾಂಪ್ರದಾಯಿಕ ದಸರಾಕ್ಕೆ ಸಿದ್ಧವಾಯ್ತು ಸಾಂಸ್ಕೃತಿಕ ನಗರಿ
ಪ್ರತಿ ವರುಷದಂತೆ ಗಜಪಯಣ ಕಾರ್ಯಕ್ರಮ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ವೀರನಹೊಸಳ್ಳಿ ಹಾಡಿಯ ಬಳಿಯಿಂದ ಆಗಸ್ಟ್ 10 ರಂದು ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿದೆ. ಇದುವರೆಗೆ ಯಾವುದೇ ಪ್ರಚಾರವಿಲ್ಲದೆ, ಸದ್ದಿಲ್ಲದೆ ಆಗಮಿಸುತ್ತಿದ್ದ ಗಜಪಡೆಗೆ ಅಭೂತಪೂರ್ವ ಸ್ವಾಗತದೊಂದಿಗೆ ಬರಮಾಡಿಕೊಳ್ಳಲು ಪ್ರವಾಸಿಗರು ಹಾಗೂ 15ಕ್ಕೂ ಹೆಚ್ಚು ಜಾನಪದ ಕಲಾತಂಡಗಳನ್ನು ಬಳಸಿಕೊಳ್ಳಲಾಗುತ್ತಿದೆ.
ಇದುವರೆಗೂ ಗಜ ಪಯಣವನ್ನು ಕೇವಲ ಅಧಿಕಾರಿಗಳೇ ಸೇರಿ ಮಾಡುತ್ತಿದ್ದರು. ಜಿಲ್ಲಾ ಉಸ್ತುವಾರಿ ಸಚಿವರಿಂದ ಪೂಜೆ ನೆರವೇರಿಸಿ ಮೈಸೂರಿಗೆ ಆನೆಗಳನ್ನು ಕರೆತರಲಾಗುತ್ತಿತ್ತು. ಆದರೆ, ಈ ಸಾಲಿನಿಂದ ಹೊಸ ರೂಪ ನೀಡಲಾಗುತ್ತಿದೆ. ಸುಮಾರು 5 ಸಾವಿರ ಜನರನ್ನು ಸೇರಿಸಿ ಆನೆಗಳಿಗೆ ಸ್ವಾಗತ ಕೋರಿ ಬರಮಾಡಿಕೊಳ್ಳಲಾಗುತ್ತಿದೆ.
ಆನೆಗೆ ಡಯಟ್ ಪ್ಲಾನ್: ಜಂಬುಸವಾರಿಗೆ ತಯಾರಾಗುತ್ತಿವೆ ಮದಗಜ
ಈಗಾಗಲೇ ಪ್ರವಾಸೋದ್ಯಮ ಇಲಾಖೆ, ಶಾಲಾ - ಕಾಲೇಜುಗಳು, ಮಹಿಳಾ ಸಂಘಗಳಿಗೂ ಮಾಹಿತಿ ನೀಡಿ, ಗಜ ಪಯಣ ಕಾರ್ಯಕ್ರಮಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ.
15ಕ್ಕೂ ಹೆಚ್ಚು ಕಲಾ ತಂಡಗಳು ಭಾಗಿ
ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ ಅವರು ಆಗಸ್ಟ್ 10ರಂದು ಗಜಪಡೆಯ ನಾಯಕ ಅರ್ಜುನನಿಗೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಲಿದ್ದಾರೆ. ಬಳಿಕ ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆ ಕುಣಿತ, ಪೂಜಾ ಕುಣಿತ, ಆದಿವಾಸಿಗಳ ನೃತ್ಯ, ಟಿಬೆಟ್ ನೃತ್ಯ, ಗೊರವರ ಕುಣಿತ, ಜೇನ ಕುರುಬರ ಕುಣಿತ ಸೇರಿದಂತೆ ಸುಮಾರು 15ಕ್ಕೂ ಹೆಚ್ಚಿನ ಕಲಾ ತಂಡಗಳು ಗಜಪಡೆಯ ಮುಂದೆ ಪ್ರದರ್ಶನ ನೀಡಲಿದೆ. ಅಲ್ಲದೆ ಆನೆಗಳನ್ನು ಮೆರವಣಿಗೆಯಲ್ಲಿ ಕೆಲ ದೂರ ಕರೆದೊಯ್ಯಲಾಗುತ್ತದೆ.
ಪ್ರಚಾರಕ್ಕೆ ಹೆಚ್ಚು ಒತ್ತು
ಈ ಬಾರಿ ಗಜಪಯಣಕ್ಕೆ ಹೆಚ್ಚು ಪ್ರಚಾರ ನೀಡಲಾಗುತ್ತದೆ. ಆಗಸ್ಟ್ 1ರಿಂದಲೇ ಪತ್ರಿಕೆ ಹಾಗೂ ವಾಹಿನಿಗಳಲ್ಲಿ ಪ್ರಚಾರದ ಬಗ್ಗೆ ಜಾಹೀರಾಥು ನೀಡುವುದರೊಂದಿಗೆ ಮೈಸೂರಿನ ವಿವಿಧೆಡೆ ಹಾಗೂ ಹುಣಸೂರು ಮುಖ್ಯರಸ್ತೆಯಲ್ಲಿ ಸುಮಾರು 20 ಸ್ಥಳಗಳಲ್ಲಿ ದೊಡ್ಡ -ದೊಡ್ಡ ಫಲಕಗಳನ್ನು ಪ್ರದರ್ಶಿಸಿ, ಆಗಸ್ಟ್ 10ರಂದು ನಡೆಯುವ ಗಜಪಯಣಕ್ಕೆ ಸರ್ವರಿಗೂ ಸ್ವಾಗತ ಕೋರಲು ಅರಣ್ಯ ಇಲಾಖೆ ಕಾರ್ಯಕ್ರಮ ರೂಪಿಸಿದೆ.
ಈ ಬಾರಿ ಎಂಟು ಆನೆಗಳು ಭಾಗಿ
ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳು ಮೊದಲ ತಂಡದಲ್ಲಿ ಆರು ಆನೆಗಳು ಆಗಮಿಸುತ್ತಿದ್ದವು. ಈ ಬಾರಿ ಮೊದಲ ಬಾರಿಗೆ ಎರಡು ಹೊಸ ಆನೆಗಳು ಸೇರಿದಂತೆ ಎಂಟು ಆನೆಗಳನ್ನು ಕರೆತರಲಾಗುತ್ತಿದೆ. ಗಜಪಡೆಯ ನಾಯಕ ಅರ್ಜುನ, ಬಲರಾಮ, ಅಭಿಮನ್ಯು, ಗಜೇಂದ್ರ, ವಿಜಯ ಮತ್ತು ಕಾವೇರಿ ಆನೆಗಳನ್ನು ಆಗಮಿಸಲಿದ್ದು, ಇದರೊಂದಿಗೆ ಹೊಸ ಆನೆಗಳಾದ ಭೀಮ ಹಾಗೂ ವರಲಕ್ಷ್ಮಿಯನ್ನು ಹೆಚ್ಚುವರಿಯಾಗಿ ಕರೆತರಲು ನಿರ್ಧರಿಸಲಾಗಿದೆ.
ಆ.14ರಂದು ಅರಮನೆಗೆ ಆಗಮನ
ಕಳೆದ ಬಾರಿಯಂತೆ ಈ ಸಾಳಿನಲ್ಲಿಯೂ ಮೊದಲ ಹಂತದಲ್ಲಿ ಬರುವ ಎಂಟು ಆನೆಗಳನ್ನು ಇಲವಾಲದ ಬಳಿಯಿರುವ ಅಲೋಕದಲ್ಲಿ ಇರಿಸಲಾಗುತ್ತದೆ. ಅ.14ರವರೆಗೂ ಅಲೋಕದಲ್ಲಿಯೇ ಇರುವ ಆನೆಗಳನ್ನು ಆ.14ರಂದು ಬೆಳಿಗ್ಗೆ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನಕ್ಕೆ ಕರೆತರಲಾಗುತ್ತದೆ. ಬಳಿಕ ಅರಣ್ಯ ಇಲಾಖೆಯ ವತಿಯಿಂದ ಆನೆಗಳಿಗೆ ಪೂಜೆ ಸಲ್ಲಿಸಿ ಬಲ್ಲಾಳ್ ವೃತ್ತ, ಜೆ ಎಲ್ ಬಿ ಎಸ್ತೆ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆಯ ಮೂಲಕ ಜಯಮಾರ್ತಾಂಡ ಗೇಟ್ ನಿಂದ ಅರಮನೆಯ ಆವರಣಕ್ಕೆ ಮೆರವಣಿಗೆಯಲ್ಲಿ ಕರೆತರಲಾಗುತ್ತದೆ.