ಚಿತ್ರಗಳು : ಮೈಸೂರು ದಸರಾಕ್ಕೆ ರಾಜಮನೆತನಕ್ಕೆ ಆಹ್ವಾನ
ಮೈಸೂರು, ಅಕ್ಟೋಬರ್ 05 : ವಿಜಯ ದಶಮಿ ಆಚರಣೆ ಕುರಿತು ಎದ್ದಿದ್ದ ಗೊಂದಲಗಳು ಬಗೆಹರಿದಿವೆ. ರಾಜಮನೆತನದವರ ಒತ್ತಡಕ್ಕೆ ಮಣಿದಿರುವ ಸರ್ಕಾರ ಅಕ್ಟೋಬರ್ 23ರಂದು ಜಂಬೂಸವಾರಿ ನಡೆಸುವುದಾಗಿ ಘೋಷಿಸಿದೆ. ಮೈಸೂರು ದಸರಾಕ್ಕೆ ರಾಜಮನೆತನಕ್ಕೆ ಅಧಿಕೃತ ಆಹ್ವಾನ ನೀಡಲಾಗಿದೆ.
ಭಾನುವಾರ ರಾಣಿ ಪ್ರಮೋದಾ ದೇವಿ, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ರಾಜ ಪುರೋಹಿತರು, ಅರ್ಚಕರು, ಜ್ಯೋತಿಷಿಗಳೊಂದಿಗೆ ಸಭೆ ನಡೆಸಿದ ಬಳಿಕ ಅಕ್ಟೋಬರ್ 23ರಂದು ಜಂಬೂ ಸವಾರಿ ನಡೆಸಲಾಗುತ್ತದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಪ್ರಕಟಿಸಿದರು. [ವಿಜಯದಶಮಿಯಂದು ಜಂಬೂ ಸವಾರಿ]
ಮೈಸೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ್ದ ವಿ.ಶ್ರೀನಿವಾಸ ಪ್ರಸಾದ್ ಅವರು, 'ಅಕ್ಟೋಬರ್ 13ರಂದು ಬೆಳಗ್ಗೆ 11 ಗಂಟೆಗೆ ಚಾಮುಂಡಿಬೆಟ್ಟದಲ್ಲಿ ರೈತ ಪುಟ್ಟಯ್ಯ ಅವರು ದಸರಾ ಉದ್ಘಾಟಿಸಲಿದ್ದಾರೆ. ಅ. 22ರ ಆಯುಧಪೂಜೆ ದಿನದಂದು ಜಂಬೂಸವಾರಿ ನಡೆಯಲಿದೆ' ಎಂದು ಹೇಳಿದ್ದರು. ಇದರಿಂದ ಜಂಬೂಸವಾರಿ ದಿನಾಂಕದ ಬಗ್ಗೆ ಗೊಂದಲ ಉಂಟಾಗಿತ್ತು. [ದಸರಾ ಉದ್ಘಾಟಿಸುವ ರೈತ ಪುಟ್ಟಯ್ಯ ಪರಿಚಯ]
ವಿ.ಶ್ರೀನಿವಾಸ ಪ್ರಸಾದ್ ಅವರು ಪ್ರಮೋದಾದೇವಿ ಒಡೆಯರ್ ಹಾಗೂ ಮಹಾರಾಜ ಯದುವೀರ್ ಕೃಷ್ಣದತ್ತ ಒಡೆಯರ್ ಅವರಿಗೆ ದಸರಾಕ್ಕೆ ಅಧಿಕೃತ ಆಹ್ವಾನ ನೀಡಿದ್ದಾರೆ. ಶಾಲು ಹೊದಿಸಿ, ಗೌರವಧನ ನೀಡಿ ದಸಾಕ್ಕೆ ಆಹ್ವಾನ ನೀಡಿದರು. ದಸರಾಕ್ಕೆ ಆಹ್ವಾನ ನೀಡಿದ ಚಿತ್ರಗಳು ಇಲ್ಲಿವೆ....
ಜಂಬೂ ಸವಾರಿ ದಿನಾಂಕ ಅಂತಿಮ
ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯ ದಿನಾಂಕದ ಬಗ್ಗೆ ಎದ್ದಿದ್ದ ಗೊಂದಲಗಳಿಗೆ ತೆರೆ ಬಿದ್ದಿದ್ದೆ. ಹಿಂದೆ ನಿಗದಿಯಾದಂತೆ ಅಕ್ಟೋಬರ್ 23ರ ಶುಕ್ರವಾರ ವಿಜಯದಶಮಿ ಆಚರಣೆ ಮಾಡಲಾಗುತ್ತದೆ ಮತ್ತು ಜಂಬೂ ಸವಾರಿ ನಡೆಯಲಿದೆ.
ಸರ್ಕಾರದ ನಿರ್ಧಾರಕ್ಕೆ ಕಾರಣವೇನು?
ಮೊದಲು ಅಕ್ಟೋಬರ್ 22ರಂದು ಜಂಬೂ ಸವಾರಿ ನಡೆಸಲಾಗುತ್ತದೆ ಎಂದು ಹೇಳಿದ್ದ ಸರ್ಕಾರ ಕೊನೆಗೆ 23ರಂದೇ ನಡೆಸಲು ಒಪ್ಪಿಕೊಂಡಿದೆ ಇದಕ್ಕೆ ಕಾರಣ ಅರಮನೆಯ ಒತ್ತಡ. ಅಕ್ಟೋಬರ್ 22ರಂದು ಆಯುಧಪೂಜೆ ನಡೆಯಲಿದ್ದು, ಅಂದು ಅರಮನೆಯಲ್ಲಿ ಸಿಂಹಾಸನ, ಉತ್ತರಪೂಜೆ, ಶಮೀಪೂಜೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿರುತ್ತವೆ. ಅಂದು ಚಿನ್ನದ ಅಂಬಾರಿಗೂ ಪೂಜೆ ಮಾಡಲಾಗುತ್ತದೆ. ಅಂದು ಜಂಬೂಸವಾರಿ ನಡೆಸಿದರೆ ಅರಮನೆ ಆವರಣದಲ್ಲಿ ಜನಜಂಗುಳಿಯಾಗಿ ಆಚರಣೆಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಸರ್ಕಾರ ತನ್ನ ನಿರ್ಧಾರವನ್ನು ಬದಲಾವಣೆ ಮಾಡಿದೆ.
ರಾಜಮನೆತನದವರಿಗೆ ಅಧಿಕೃತ ಆಹ್ವಾನ
ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ ಪ್ರಸಾದ್ ಅವರು, ಅರಮನೆಗೆ ತೆರಳಿ ಸರ್ಕಾರದ ವತಿಯಿಂದ ರಾಜಮನೆತನಕ್ಕೆ ದಸರಾಗೆ ಅಧಿಕೃತ ಆಹ್ವಾನ ನೀಡಿದ್ದಾರೆ. ಪ್ರಮೋದಾದೇವಿ ಒಡೆಯರ್ ಹಾಗೂ ಮಹಾರಾಜ ಯದುವೀರ್ ಕೃಷ್ಣದತ್ತ ಒಡೆಯರ್ ಅವರಿಗೆ ಶಾಲು ಹೊದಿಸಿ, ಫಲ, ಗೌರವಧನ ನೀಡಿ ಆಹ್ವಾನಕೊಟ್ಟಿದ್ದಾರೆ.
ಮಾವುತರು ಕಾವಾಡಿಗಳಿಗೆ ಭೋಜನ
ಭಾನುವಾರ ವಿ.ಶ್ರೀನಿವಾಸ ಪ್ರಸಾದ್ ಮತ್ತು ಕಂದಾಯ ಸಚಿವ ಮಹದೇವ ಪ್ರಸಾದ್ ಅವರು, ಅರಮನೆ ಆವರಣದಲ್ಲಿ ಮಾವುತ ಹಾಗೂ ಕಾವಾಡಿಗಳ ಕುಟುಂಬದೊಂದಿಗೆ ಭೋಜನ ಸವಿದರು.
ಅರಮನೆಗೆ ಎಂದು ಪ್ರವೇಶ ನಿರ್ಬಂಧ
ಖಾಸಗಿ ದಸರಾ ಕಾರ್ಯಕ್ರಮಗಳ ಪ್ರಯುಕ್ತ ಅರಮನೆಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ ಆರಮನೆ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಅ.13ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2.30ರವರೆಗೆ ನಿರ್ಬಂಧ ವಿಧಿಸಲಾಗಿದೆ. ಆಯುಧಪೂಜೆ ಹಾಗೂ ಜಂಬೂಸವಾರಿ ನಡೆಯುವ ಅಕ್ಟೋಬರ್ 22 ಮತ್ತು 23ರಂದು ಸಾರ್ವಜನಿಕರು ಪ್ರವೇಶಿಸುವಂತಿಲ್ಲ.