ಮೈಸೂರು ಚೆಲುವಾಂಬ ಆಸ್ಪತ್ರೆಯಲಿಲ್ಲ ಬಾಣಂತಿಯರಿಗೆ ಸುರಕ್ಷೆ!
ಮೈಸೂರು, ನವೆಂಬರ್, 25 : ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಸಂಖ್ಯೆ ಹೆಚ್ಚುತ್ತಾ ಸಾಗುತ್ತಿರುವುದು ಆತಂಕವನ್ನು ಸೃಷ್ಟಿ ಮಾಡಿದೆ. ಈ ಆಸ್ಪತ್ರೆಯಲ್ಲಿ ಒಂದೇ ವಾರದಲ್ಲಿ ಏಳು ಬಾಣಂತಿಯರು ಹಾಗೂ ಒಂದು ಮಗು ಸಾವನ್ನಪ್ಪಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.
ಮೈಸೂರು ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿರುವ ಆರೋಗ್ಯ ಕೇಂದ್ರಗಳಿಂದ ಹೆರಿಗೆಗಾಗಿ ಚೆಲುವಾಂಬಕ್ಕೆ ಕಳುಹಿಸಲಾಗುತ್ತಿದೆ. ಇಲ್ಲಿಗೆ ಬರುವ ಗರ್ಭಿಣಿಯರು ಸುಸೂತ್ರ ಹೆರಿಗೆಯಾಗಿ ಮಗುವಿನೊಂದಿಗೆ ಮತ್ತೆ ಮನೆಗೆ ತೆರಳುತ್ತಾರೆ ಎಂಬ ನಂಬಿಕೆ ಇಲ್ಲದಂತಾಗಿದೆ. ಕೆಲ ದಿನಗಳಿಂದ ಇಲ್ಲಿ ಆಕ್ರೋಶ, ರೋಧನವೇ ಕಂಡು ಬರುತ್ತಿದೆ.
ಚೆಲುವಾಂಬ ಆಸ್ಪತ್ರೆಗೆ ಮೈಸೂರು ಮಾತ್ರವಲ್ಲದೆ ಸುತ್ತಮುತ್ತಲಿನ ಕೊಡಗು, ಮಂಡ್ಯ, ಚಾಮರಾಜನಗರ ಮೊದಲಾದ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಿಣಿಯರು ಬಂದು ದಾಖಲಾಗುತ್ತಿದ್ದಾರೆ. ಪ್ರತಿದಿನವೂ ಸುಮಾರು 15ಕ್ಕೂ ಹೆಚ್ಚು ಹೆರಿಗೆಗಳು ನಡೆಯುತ್ತವೆ. ಆದರೆ ಮೇಲಿಂದ ಮೇಲೆ ಬಾಣಂತಿಯರು ಮರಣ ಹೊಂದುತ್ತಿರುವುದಕ್ಕೆ ಸಮಂಜಸವಾದ ಕಾರಣಗಳು ತಿಳಿಯುತ್ತಿಲ್ಲ.[ಯಶಸ್ವಿ ಗರ್ಭಧಾರಣೆಗೆ ಉಪಯುಕ್ತ ಸಲಹೆಗಳು]
ಕಳೆದ ಸೋಮವಾರ ನವೆಂಬರ್ 16ರಿಂದ ಇಲ್ಲಿಯವರೆಗೆ ದಿನಕ್ಕೊಬ್ಬರಂತೆ ಮಹಿಳೆಯರು ಸಾವನ್ನಪ್ಪುತ್ತ್ಪಿದ್ದಾರೆ. ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆಯ ವಸಂತ (22) ಮತ್ತು ಅವರಿಗೆ ಸೇರಿದ ಹೆಣ್ಣು ಮಗು ಸಾವನ್ನಪ್ಪಿದೆ. ಆ ಮೂಲಕ ಬಾಣಂತಿಯರ ಸಾವಿನ ಸಂಖ್ಯೆ ಎಂಟಕ್ಕೆ ಏರಿಕೆ ಆಗಿದೆ.[ಮಂಡ್ಯ : ಪ್ರಿಯಾ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣಾನಾ?]
ವೈದ್ಯರ ನಿರ್ಲಕ್ಷ್ಯ ಹಾಗೂ ಆಸ್ಪತ್ರೆಯ ಅವ್ಯವಸ್ಥೆಯಿಂದಲೇ ಮಹಿಳೆಯರು ಹಾಗೂ ಮಕ್ಕಳು ಸಾವನ್ನಪ್ಪುತ್ತಿದ್ದಾರೆ, ಈ ವಿಚಾರವನ್ನು ಆಸ್ಪತ್ರೆ ಸಿಬ್ಬಂದಿ ಗಂಭೀರವಾಗಿ ಪರಿಗಣಿಸದಿರುವುದರಿಂದಾಗಿ ಸಾವು ಪ್ರಕರಣಗಳು ಮುಂದುವರೆಯುತ್ತಿದೆ ಎಂದು ಮೃತ ಬಾಣಂತಿ ಮಹಿಳೆಯರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಚೆಲುವಾಂಬ ಆಸ್ಪತ್ರೆಯ ಮೇಲ್ಪಿಚಾರಕಿ ಡಾ. ರಾಧಾಮಣಿ ಮಾತನಾಡಿ, ತಿಂಗಳಿಂದ ಬಾಣಂತಿಯರ ಸಾವು ಹೆಚ್ಚಾಗುತ್ತಿರುವ ಬಗ್ಗೆ ತಿಳಿದಿದೆ. ಇದಕ್ಕೆ ಕಾರಣವೇನು ಹಾಗೂ ಮುಂದಿನ ಕ್ರಮಗಳ ಬಗ್ಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ಅಲ್ಲದೆ ಇಲ್ಲಿ ಸಾವನ್ನಪ್ಪುತ್ತಿರುವ ಬಾಣಂತಿಯರೆಲ್ಲ ಬೇರೆ ಆಸ್ಪತ್ರೆಗೆ ದಾಖಲಾಗಿ ಬಳಿಕ ಕೊನೆ ಕ್ಷಣದಲ್ಲಿ ಚೆಲುವಾಂಬಗೆ ದಾಖಲಾಗಿರುವವರೇ ಹೊರತು, ಪ್ರಥಮವಾಗಿ ಇಲ್ಲಿ ದಾಖಲಾದವರಲ್ಲ.[ತಾಯ್ತನದ ಅವಧಿಯಲ್ಲಿ ಆರೋಗ್ಯದ ಆರೈಕೆ ಹೀಗಿರಲಿ]
ಬಾಣಂತಿಯರು ಹೆಚ್ಚಾಗಿ ರಕ್ತಹೀನತೆ, ರಕ್ತ ಸ್ರಾವದಿಂದಲೇ ಸಾವನ್ನಪ್ಪುತ್ತಿದ್ದು, ಆಸ್ಪತ್ರೆಯಲ್ಲೂ ಸಾಕಷ್ಟು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಅದು ಏನೇ ಇರಲಿ ಜಿಲ್ಲಾಡಳಿತ ಇತ್ತ ಗಮನಹರಿಸಿ ಮುಂದಿನ ದಿನಗಳಲ್ಲಾದರೂ ಬಾಣಂತಿ ಮತ್ತು ಮಕ್ಕಳು ಆಸ್ಪತ್ರೆಯಿಂದ ಆರೋಗ್ಯವಾಗಿ ಹಿಂತಿರುಗುವ ವ್ಯವಸ್ಥೆ ಮಾಡಬೇಕಿದೆ.