ಸೌರಶಕ್ತಿಯಿಂದ ಮನೆ ಬೆಳಗಿಸಿದ ಮೈಸೂರಿನ 'ಭಕ್ತವತ್ಸಲ'
ಆ ಮನೆಯಲ್ಲೀಗ ಪವರ್ ಕಟ್ ಸಮಸ್ಯೆಯಿಲ್ಲ.. ವಿದ್ಯುದ್ದೀಪಗಳು ಸದಾ ಉರಿಯುತ್ತಲೇ ಇರುತ್ತವೆ.. ಚೆಸ್ಕಾಂನಿಂದ ವಿದ್ಯುತ್ ಪಡೆಯುವ ಬದಲು ಅಲ್ಲಿಗೆ ವಿದ್ಯುತ್ ಸರಬರಾಜು ಮಾಡುತ್ತಿದ್ದಾರೆ.. ಇದೇನಪ್ಪಾ ಹೀಗೆ ಎಂದು ಅಚ್ಚರಿಯಾಗಿರಬಹುದಲ್ಲವೆ? ಹೌದು ಇದು ಅಚ್ಚರಿಯಾದರೂ ಸತ್ಯ.
ಮೈಸೂರಿನ ಜೆ.ಪಿ.ನಗರ ನಿವಾಸಿ ಭಕ್ತ ವತ್ಸಲ ಅವರ ಸಾಧನೆ ಫಲ ಎಂದರೆ ತಪ್ಪಾಗಲಾರದು. ರಾಜ್ಯ ವಿದ್ಯುತ್ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಮೈಸೂರಿನ ಭಕ್ತವತ್ಸಲ ಅವರು ಸೌರಶಕ್ತಿಯಿಂದ ತಮ್ಮ ಮನೆಗೆ ವಿದ್ಯುತ್ ಪಡೆಯುತ್ತಿದ್ದು, ಹೆಚ್ಚಾದ ವಿದ್ಯುತ್ ನ್ನು ಚೆಸ್ಕಾಂಗೆ ನೀಡಲು ಮುಂದಾಗಿದ್ದಾರೆ.[ಸ್ವಚ್ಛ ನಗರ ಮೈಸೂರಿಗೆ ಸದ್ಯದಲ್ಲೇ 'ಸೋಲಾರ್ ಸಿಟಿ' ಕಿರೀಟ]
ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ನಿನ್ನೆ ಮೊನ್ನೆಯದಲ್ಲ. ಪ್ರತಿ ಬಾರಿಯೂ ಬೇಸಿಗೆ ಬರುತ್ತಿದ್ದಂತೆಯೇ ಅದರ ತೀವ್ರತೆ ನಮ್ಮ ಅರಿವಿಗೆ ಬರುತ್ತದೆ. ಸದಾ ಪವರ್ ಕಟ್ ಶಿಕ್ಷೆಗೆ ಜನ ಬಲಿಯಾಗಬೇಕಾಗುತ್ತದೆ. ಹೆಚ್ಚಾಗಿ ಜಲ ಮೂಲದ ವಿದ್ಯುತ್ ಗೆ ನಾವು ಮೊರೆ ಹೋಗಿರುವುದರಿಂದಾಗಿ ನಾವು ಬೇಸಿಗೆ ಕಾಲದಲ್ಲಿ ವಿದ್ಯುತ್ ಸಮಸ್ಯೆ ಎದುರಿಸುವುದು ಅನಿವಾರ್ಯವಾಗಿದೆ.
ಇದೆಲ್ಲವನ್ನು ಗಮನಿಸಿದ ಜೆ.ಪಿ.ನಗರದ (ಕೊನೆಯ ಬಸ್ ನಿಲ್ದಾಣದ, ದಕ್ಷಿಣ ರಸ್ತೆಯ ನಂ.47) ನಿವಾಸಿ ಭಕ್ತವತ್ಸಲ ಅವರು ತಮ್ಮ 30 x 40 ವಾಸದ ಮನೆಯ ತಾರಸಿ ಮೇಲೆ ಸೌರ ವಿದ್ಯುತ್ ಘಟಕವನ್ನು ಸ್ಥಾಪಿಸಿದ್ದಾರೆ. ಈ ಘಟಕ ಸ್ಥಾಪನೆಗೆ ಬ್ಯಾಂಕಿನಿಂದ ಒಂದಷ್ಟು ಆರ್ಥಿಕ ನೆರವು ಪಡೆದಿರುವ ಅವರು ಇದೀಗ ಸುಮಾರು 5 ಕೆ.ವಿ. ವಿದ್ಯುತನ್ನು ಉತ್ಪಾದಿಸುತ್ತಿದ್ದಾರೆ.[ಚಿತ್ರಗಳಲ್ಲಿ: ಮೋದಿ ಕ್ಲಿಕ್, ಸೌರ ವಿಮಾನ ದರ್ಶನ]
ಇದೀಗ ಸರ್ಕಾರ ರಾಜ್ಯದೊಳಗೆ ಇತರೆ ಮೂಲಗಳಿಂದ ವಿದ್ಯುತ್ ಉತ್ಪಾದಿಸುವವರಿಗೆ ಪ್ರೋತ್ಸಾಹ ನೀಡಲು ಮುಂದಾಗಿದ್ದು, ಸೌರ ವಿದ್ಯುತ್ ಉತ್ಪಾದನೆ ಸಾಧ್ಯವಿರುವೆಡೆ ಬೃಹತ್ ಅಥವಾ ಲಘು ಘಟಕ ಸ್ಥಾಪಿಸಲು ಉತ್ತೇಜನ ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಂಡ ಭಕ್ತವತ್ಸಲ ಅವರು ಸೌರ ಘಟಕ ಸ್ಥಾಪಿಸಲು ಮುಂದಾಗಿ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.[ಮಂಗಳ ಗ್ರಹದ ವಾತಾವರಣ ನಾಶವಾಗಲು ಏನು ಕಾರಣ?]
ತನ್ನ ಮನೆಯ ಬಳಕೆಗೆ ಈಗಾಗಲೇ ಅಳವಡಿಸಿರುವ ಮಾಪಕದ ಮೂಲಕವೇ ತಾನು ಉತ್ಪಾದಿಸಿದ ವಿದ್ಯುತನ್ನು ಇಲಾಖೆಗೆ ಕಳುಹಿಸುವ ವ್ಯವಸ್ಥೆಯ ಮಾಪಕಗಳನ್ನು ಇಲ್ಲಿ ಅಳವಡಿಸಲಾಗಿದೆ. ವಿದ್ಯುತ್ ಇಲಾಖೆ ಯೂನಿಟ್ ಗೆ ಇಂತಿಷ್ಟು ಎಂಬಂತೆ ಹಣವನ್ನು ಸಂದಾಯ ಮಾಡುತ್ತಿದೆ. ಭಕ್ತವತ್ಸಲ ಅವರ ಈ ಕಾರ್ಯ ಇತರರಿಗೂ ಮಾದರಿಯಾಗಿದೆ. ಈ ಕಾರ್ಯ ಯೋಜನೆ ಯಶಸ್ವಿಯಾದರೆ ನಿಜಕ್ಕೂ ರಾಜ್ಯದಲ್ಲಿ ವಿದ್ಯುತ್ ಕ್ಷಾಮ ತಡೆಗೆ ಸಾಧ್ಯವಾಗಬಹುದೇನೋ?