ಮಾನವೀಯತೆ ಮರೆತ ಜನ: ರಸ್ತೆಯಲ್ಲಿ ನರಳಾಡಿ ಪ್ರಾಣ ಬಿಟ್ಟ ಯುವಕರು
ಮೈಸೂರು, ಮಾರ್ಚ್, 25: ರಸ್ತೆಯಲ್ಲೇ ನರಳಾಡಿ ಪ್ರಾಣ ಬಿಟ್ಟ ಹರೀಶ್ ಪ್ರಕರಣ ಇನ್ನು ಮಾಸಿಲ್ಲ. ಇದೀಗ ಅಪಘಾತಕ್ಕೀಡಾದ ಯುವಕರು ಜನರ ಎದುರೇ ನೋವಿನಲ್ಲೇ ಪ್ರಾಣಬಿಟ್ಟಿದ್ದಾರೆ.
ರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದ ಗಾಯಾಳುಗಳನ್ನು ಮೊಬೈಲ್ ಚಿತ್ರೀಕರಣ ಮಾಡುತ್ತ ಅನಗತ್ಯ ಪ್ರಶ್ನೆ ಕೇಳಿ ಜನರು ಕಾಲಹರಣ ಮಾಡಿ ಎರಡು ಅಮೂಲ್ಯ ಜೀವಗಳನ್ನು ಜನರೇ ಬಲಿ ಪಡೆದಿದ್ದಾರೆ. ಘಟನೆ ನಡೆದು ಅರ್ಧ ಗಂಟೆ ಕಳೆದರೂ ಜನ ಗಾಯಾಳುಗಳ ಪೂರ್ವಾಪರ ವಿಚಾರ ಮಾಡುತ್ತ ಕುಳಿತಿದ್ದು ಆಂಬುಲೆನ್ಸ್ ಗೆ ಕರೆ ಮಾಡಿಲ್ಲ.[ದೇಹ ಎರಡು ತುಂಡಾದರೂ ಕಣ್ಣು ದಾನ ಮಾಡಿ ಬೆಳಕಾ ಹರೀಶ್]
ಜನರ ಈ ನಡವಳಿಕೆಗೆ ಇಬ್ಬರು ಯುವಕರ ಜೀವ ಬಲಿಯಾಗಿದೆ. ಮೈಸೂರಿನ ಕೋಳಗಾಳ ಸಮೀಪ ಕೆಎಸ್ ಆರ್ ಟಿಸಿ ಬಸ್ ಮತ್ತು ಬೈಕ್ ನಡುವಿನ ಡಿಕ್ಕಿಯಲ್ಲಿ ಮೂರು ಜನ ಸಾವನ್ನಪ್ಪಿದ್ದಾರೆ.[ಹರೀಶ್ ಯೋಜನೆ ಜಾರಿಗೆ ತಂದ ಸರ್ಕಾರ]
ಬೈಕ್ ನಲ್ಲಿದ್ದ ರಮೇಶ್ ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಂಜುನಾಥ್ ಮತ್ತು ಮಹೇಶ್ ಜನರ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಬದಲು ವಿಡಿಯೋ ಮಾಡಿದ ಜನರ ಬುದ್ಧಿಗೆ ಏನು ಬಂದಿತ್ತು? ಎಂಬುದು ಮಾತ್ರ ಪ್ರಶ್ನೆಯಾಗೇ ಉಳಿದಿದೆ. ಅಪಘಾತ ನಡೆದು ಒಂದು ಘಂಟೆ ನಂತರ ಅವರನ್ನು ಆಸ್ಪತ್ರೆಗೆ ಸೇರಿಸುವ ಯತ್ನ ಮಾಡಲಾಯಿತಾದರೂ ಪ್ರಯೋಜನವಾಗಲಿಲ್ಲ.