ಮೈಸೂರು ಮೃಗಾಲಯದಲ್ಲಿ ಅಧಿಕಾರಿಗಳ ಶೀತಲ-ಸಮರ
ಮೈಸೂರು, ಜನವರಿ 6: ಕರ್ನಾಟಕ ಮೃಗಾಲಯದ ಪ್ರಾಧಿಕಾರದ ಅಧ್ಯಕ್ಷೆ ಹಾಗೂ ಮೈಸೂರು ಜಯಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿಯ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ ಎನ್ನಲಾಗುತ್ತಿದೆ. ಇದರ ಪರಿಣಾಮ ಮೃಗಾಲಯದ ಪ್ರಾಣಿ-ಪಕ್ಷಿಗಳ ಮೇಲಾಗುತ್ತಿದೆಯೇ ಎಂಬ ಸಂಶಯವೂ ಈಗ ಎದ್ದಿದೆ.
ಮೃಗಾಲಯದಲ್ಲಿರುವ ಪ್ರಾಣಿ ಪಕ್ಷಿಗಳು ಸರಣಿ ಸಾವಿಗೀಡಾದ ಹಿನ್ನೆಲೆ, ಈ ಅಧಿಕಾರಿಗಳಿಗೆ ಪ್ರಶ್ನಿಸಿದರೆ ಇವರ ವರಸೆಯೇ ಬೇರೆ. ಇದಲ್ಲದೆ ಮೃಗಾಲಯದ ನೌಕರರು ಹಾಗೂ ಅಧಿಕಾರಿ ವರ್ಗದ ನಡುವೆ ಇರುವ ಬಿರುಕು ಇನ್ನೂ ದೊಡ್ಡದಾಗುತ್ತಲೇ ಇದೆ. ಇವೆಲ್ಲವನ್ನು ಗಮನಿಸುವಾಗ ಇದರಿಂದ ಪ್ರಾಣಿಗಳ ಕಡೆಗೆ ನಿರ್ಲಕ್ಷ್ಯ ಹೆಚ್ಚಾಗಿದೆಯೇ ಎನ್ನುವ ಬಗ್ಗೆ ಅನುಮಾನ ಹೊಗೆಯಾಡುತ್ತಿದೆ.[ಮೈಸೂರು ಮೃಗಾಲಯ ಪರಿಶೀಲಿಸಿದ ಅರಣ್ಯ ಸಚಿವ ರಮಾನಾಥ ರೈ]
ಇವರಿಬ್ಬರ ನಡುವಿನ ಗುದ್ದಾಟ ಗೋಚರ ಎಲ್ಲರಿಗೂ ತಿಳಿಯುವಂತಾಗಿದ್ದು ಮಾತ್ರ ಮೃಗಾಲಯವನ್ನು ಒಂದು ತಿಂಗಳ ಕಾಲ ಬಂದ್ ಮಾಡುವ ಹಿನ್ನೆಲೆಯಲ್ಲಿ ಮಲ್ಲಿಗೆ ವೀರೇಶ್ ನೀಡಿದ ಹೇಳಿಕೆ. ಮೃಗಾಲಯಕ್ಕೆ ಒಂದು ತಿಂಗಳ ಕಾಲ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ ಹೇರಿರುವ ವಿಷಯ ಮಾಧ್ಯಮಗಳ ಮುಖಾಂತರವೇ ನನಗೆ ತಿಳಿದಿದ್ದು, ಅಧಿಕೃತವಾಗಿ ಯಾರೂ ನನಗೆ ಈ ವಿಷಯ ಹೇಳಿಲ್ಲ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್ ತಿಳಿಸಿದ್ದು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮೃಗಾಲಯದ ನಿದೇಶಕಿ ಕಮಲಾ ಕರಿಕಾಳನ್, ಜ.3ರಂದು ಬೆಂಗಳೂರಿನ ಅನಿಮಲ್ ಹೆಲ್ತ್ ಅಂಡ್ ವೆಟರ್ನರಿ ಬಯೋಲಾಜಿಕಲ್ ಲ್ಯಾಬ್ ವರದಿ ಬಂದ ಕೂಡಲೇ ಪ್ರಾಧಿಕಾರದ ಅಧ್ಯಕ್ಷರನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಿಷಯ ತಿಳಿಸಿದ್ದೇನೆ. ಅದಲ್ಲದೆ ವಾಟ್ಸ್ ಆಫ್ ಮೂಲಕವೂ ಸಂದೇಶ ಕಳುಹಿಸಿದ್ದೇವೆ. ಅವರು ನನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳಿದರೆ ನಾವೇನು ಮಾಡೋಕಾಗುತ್ತೆ ಎನ್ನುತ್ತಾರೆ.[ಸಾರ್ವಜನಿಕರಿಗೆ ಫೆಬ್ರವರಿ 2ರವರೆಗೆ ಮೈಸೂರು ಮೃಗಾಲಯ ಪ್ರವೇಶವಿಲ್ಲ]
ಇನ್ನು ಹಿಂದೆ ಇದ್ದ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರ ನಡುವೆಯೂ ಹೀಗೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇತ್ತು. ಆಗಲೂ ಕೂಡ ನೌಕರರು ಮತ್ತು ಅಧಿಕಾರಿಗಳ ನಡುವೆ ಉತ್ತಮ ಸಂಬಂಧ ಗಳಿರಲಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಈಗ ಎರಡೂ ಕಡೆಯ ವ್ಯಕ್ತಿಗಳು ಬದಲಾಗಿದ್ದರೂ ಅದ್ಯಾವುದೋ ಕ್ಷುಲ್ಲಕ ಕಾರಣಕ್ಕೆ ಹೊಂದಾಣಿಕೆ ಮಾಡಿಕೊಳ್ಳಲು ಇಬ್ಬರಿಗೂ ಸಾಧ್ಯವಾದಂತೆ ಕಾಣುತ್ತಿಲ್ಲ.