ನನಗೆ ಕೈಹಿಡಿದು ಆಶ್ರಯ ನೀಡಿದ್ದು ಭಾರತ: ದಲೈಲಾಮಾ
ಮೈಸೂರು, ಡಿಸೆಂಬರ್. 13 : ಬಾಲ್ಯದಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದೆ. 16 ವರ್ಷವಿದ್ದಾಗ ಸ್ವಾತಂತ್ರ್ಯ ಕಳೆದುಕೊಂಡು ದೇಶದಿಂದ ಹೊರದೂಡಲ್ಪಟ್ಟೆ. ಆ ವೇಳೆ ಕೈಹಿಡಿದು ಆಶ್ರಯ ನೀಡಿದ್ದು ಭಾರತ ಎಂದು ಟಿಬೆಟಿಯನ್ ಧರ್ಮಗುರು ದಲೈಲಾಮಾ ಹೇಳಿದರು.
ಮಂಗಳವಾರ ನಡೆದ ಮೈಸೂರು ವಿವಿಯ 97ನೇ ಘಟಿಕೋತ್ಸವದ ಅಂಗವಾಗಿ ಟಿಬೆಟಿಯನ್ ಧರ್ಮಗುರು ದಲೈಲಾಮಾ ಗೌರವ ಡಾಕ್ಟರೇಟ್ ಪಡೆದಯಕೊಂಡು ಮಾತನಾಡಿದ ಅವರು, ಪ್ರಧಾನಿ ಜವಾಹರಲಾಲ್ ನೆಹರು ಹಾಗೂ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ನಿಜಲಿಂಗಪ್ಪ ಅವರು ಆಶ್ರಯ ನೀಡಿ ನಮ್ಮ ರಕ್ಷಣೆಗೆ ಮುಂದಾದರು ಎಂದು ಸ್ಮರಿಸಿಕೊಂಡರು.
ನಾನು ಭಾರತದ ಸುದೀರ್ಘವಾದ ಅತಿಥಿ ಎಂದು ನಗೆ ಚಟಾಕಿ ಹಾರಿಸಿದರು. ಶಿಕ್ಷಣ ದೇಶದ ಅಭಿವೃದ್ಧಿಗೆ ಅತಿ ಮುಖ್ಯ. ಯಾವ ದೇಶ ಶಿಕ್ಷಣದಲ್ಲಿ ಮುಂದಿರುತ್ತದೋ ಅದು ಅಭಿವೃದ್ಧಿಯಲ್ಲಿಯೂ ಸಹ ಮುಂಚೂಣಿಯಲ್ಲಿರುತ್ತದೆ.
ಮೈಸೂರು ವಿಶ್ವವಿದ್ಯಾಲಯ ದೇಶದ ಪ್ರಮುಖ ವಿಶ್ವವಿದ್ಯಾಲಯವಾಗಿದ್ದು ದೇಶದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದೆ. ಇಂತಹ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಸ್ವೀಕರಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಇಂದು ಸಮಾಜದಲ್ಲಿ ನೈತಿಕ ಮೌಲ್ಯ ಕುಸಿಯುತ್ತಿದೆ. ಎಲ್ಲರಲ್ಲೂ ನಕಾರಾತ್ಮಕ ಚಿಂತನೆ ಬೇರೂರಿದೆ. ಅಲ್ಲದೆ ನೈತಿಕ ಮೌಲ್ಯದ ಕೊರತೆ ಎದ್ದು ಕಾಣುತ್ತಿದೆ. ವಿಶ್ವವಿದ್ಯಾಲಯಗಳು ಕೇವಲ ಶಿಕ್ಷಣ ನೀಡಿದರೆ ಸಾಲದು ಗುಣಾತ್ಮಕ ಶಿಕ್ಷಣದೊಂದಿಗೆ ಮೌಲ್ಯಯುತ ಶಿಕ್ಷಣವನ್ನು ಪ್ರಾಥಮಿಕ ಹಂತದಿಂದಲೂ ನೀಡಬೇಕು. ಅಲ್ಲದೆ ನಮ್ಮಲ್ಲಿರುವ ಬುದ್ದಿವಂತಿಕೆಯನ್ನು ಹೆಚ್ಚು ಬಳಸಿಕೊಳ್ಳಬೇಕು ಎಂದರು.
ಪ್ರಮೋದಾದೇವಿ ಮತ್ತು ದಲೈಲಾಮಾಗೆ ಡಾಕ್ಟರೇಟ್
ರಾಜಮಾತೆ ಪ್ರಮೋದಾದೇವಿ ಒಡೆಯರ್ ಮತ್ತು ದಲೈಲಾಮಾ ಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಹಾಲ್ ನಲ್ಲಿ ನಡೆದ ಘಟಿಕೋತ್ಸವದಲ್ಲಿ ರಾಜ್ಯಪಾಲ ವಜುಭಾಯ್ ರೂಡಾಭಾಯ್ ವಾಲಾ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
ಮಹಿಳಾ ವಿದ್ಯಾರ್ಥಿಗಳೇ ಮೇಲುಗೈ
ಪ್ರತಿ ವರ್ಷದಂತೆ ಈ ಬಾರಿಯೂ ಮಹಿಳಾ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದು, ಪಿಎಚ್ ಡಿ ಸೇರಿದಂತೆ ವಿವಿಧ ಪದವೀಧರರ ಪೈಕಿ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿದ್ದು ಒಟ್ಟು 24,363 ವಿದ್ಯಾರ್ಥಿಗಳಲ್ಲಿ ಶೇ.61 ಅಂದರೆ 14,825 ಮಂದಿ ಮಹಿಳೆಯರು, 9538(ಶೇ.39) ಪುರುಷರಿಗೆ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.ಪಿಎಚ್.ಡಿ ಪದವೀಧರರಲ್ಲಿ ಒಟ್ಟು 300 ಅಭ್ಯರ್ಥಿಗಳ ಪೈಕಿ ಶೇ.54 ಅಂದರೆ 162 ಮತ್ತು 138(ಶೇ.46) ಪುರುಷರು ಪದವಿ ಪಡೆದಿದ್ದು 312 ಪದಕಗಳು ಮತ್ತು 180 ಬಹುಮಾನಗಳನ್ನು ಪಡೆದುಕೊಂಡರು.
16 ಚಿನ್ನದ ಪದಕಗಳಿಗೆ ಮುತ್ತಿಟ್ಟ ನೇಹಾ ಶರಣ್
ರಸಾಯನಶಾಸ್ತ್ರ ವಿಭಾಗದಲ್ಲಿ ನೇಹಾ ಶರಣ್ 16 ಚಿನ್ನದ ಪದಕ ಹಾಗೂ 4 ಬಹುಮಾನಗಳೊಂದಿಗೆ ಒಟ್ಟು 20 ಬಹುಮಾನಗಳನ್ನು ಪಡೆದು ವಿಶ್ವವಿದ್ಯಾಲಯಕ್ಕೆ ಟಾಪರ್ ಆಗಿ ಹೊರಹೊಮ್ಮಿದರು.
ಯದುವೀರ್ ಹಾಗೂ ತ್ರಿಷಿಕಾ ಹಾಜರ್
ಇದೇ ವೇಳೆ ಯದುವೀರ್ ಕೃಷ್ಣದತ್ತ ಚಾಮರಾಜೇಂದ್ರ ಒಡೆಯರ್ ಹಾಗೂ ತ್ರಿಷಿಕಾ ಸಿಂಗ್ ಹಾಜರಿದ್ದು ತಮ್ಮ ತಾಯಿಗೆ ಡಾಕ್ಟರೇಟ್ ನೀಡಿ ಗೌರವಿಸುವುದನ್ನು ವೀಕ್ಷಿಸಿದರು.