500ರೂ. ನೋಟುಗಳನ್ನು ಮಾತ್ರ ಮುದ್ರಿಸಲು ಮೈಸೂರು ಮುದ್ರಣಾಲಯಕ್ಕೆ ಸೂಚನೆ
ಅಧಿಕ ಮುಖಬೆಲೆಯ ನೋಟು ನಿಷೇಧದಿಂದಾಗಿ ವ್ಯಾಪರಸ್ಥರು, ರೈತರಿಗೆ ಚಿಲ್ಲರೆ ಸಮಸ್ಯೆ ವಿಪರೀತವಾಗಿ ಕಾಡುತ್ತಿದ್ದು, 500ರೂ. ಮುಖಬೆಲೆಯ ನೋಟುಗಳನ್ನು ಮುದ್ರಿಸುವತ್ತ ಹೆಚ್ಚು ಗಮನ ಕೊಡಲು ಆರ್ ಬಿ ಐ ನಿರ್ಧರಿಸಿದೆ.
ಮೈಸೂರು, ನವೆಂಬರ್,22: ಅಧಿಕ ಮುಖಬೆಲೆಯ ನೋಟುಗಳ ನಿಷೇಧದಿಂದಾಗಿ ದೇಶದಾದ್ಯಂತ ಚಿಲ್ಲರೆ ಸಮಸ್ಯೆ ಮತ್ತು ನಗದು ಪುರೈಕೆ ಸಮಸ್ಯೆ ತೀವ್ರವಾಗಿದೆ.
ಈ ಕಾರಣದಿಂದಾಗಿ ಮೈಸೂರು ಮುದ್ರಣಾಲಯದಲ್ಲಿ ಇನ್ನು ಮುಂದೆ ಕೇವಲ 500ರೂ. ಮುಖಬೆಲೆಯ ನೋಟುಗಳನ್ನು ಮಾತ್ರ ಮುದ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. [ಸಾಲ ಮರುಪಾವತಿಗೆ 60 ದಿನ ಕಾಲಾವಕಾಶ: ಆರ್ ಬಿ ಐ]
100ರೂ. ಮುಖಬೆಲೆಯ ನೋಟುಗಳು ವಿರಳವಾಗಿರುವುದರಿಂದ ಹಲವು ಬ್ಯಾಂಕ್ ಗಳಲ್ಲಿ ಹೆಚ್ಚಾಗಿ 2 ಸಾವಿರ ರೂ. ಮುಖಬೆಲೆಯ ನೋಟುಗಳ ಮೂಲಕವೇ ವಹಿವಾಟು ನಡೆಸಲಾಗುತ್ತಿದೆ. ಹಲವು ಎಟಿಎಂ ಘಟಕಗಳಲ್ಲೂ ಸಹ 2 ಸಾವಿರ ರೂ. ನೋಟುಗಳೇ ಹೆಚ್ಚಾಗಿ ದೊರೆಯುತ್ತಿವೆ.
2ಸಾವಿರ ರೂ. ಮುಖಬೆಲೆಯ ನೋಟುಗಳಿಂದ ವಹಿವಾಟು ನಡೆಸಲಾಗುತ್ತಿದ್ದರೂ ಚಿಲ್ಲರೆ ಸಮಸ್ಯೆ ಮಾತ್ರ ವಿಪರೀತವಾಗಿ ಕಾಡುತ್ತಿದೆ. ಆದ್ದರಿಂದ ಈ ಸಮಸ್ಯೆ ಪರಿಹಾರಕ್ಕಾಗಿ ಕೂಡಲೇ 500 ರೂ. ನೋಟುಗಳನ್ನೇ ಹೆಚ್ಚಾಗಿ ಮುದ್ರಿಸಲು ಆರ್ ಬಿ ಐ ನಿರ್ಧರಿಸಿದೆ.
ಮೈಸೂರು ಮುದ್ರಣಾಲಯದಲ್ಲಿ ಮುಂದಿನ ಎರಡು ತಿಂಗಳು ಇತರೆ ಕರೆನ್ಸಿ ಮುದ್ರಣವನ್ನು ಸ್ಥಗಿತಗೊಳಿಸಿ ಕೇವಲ 500 ರೂ. ಮುಖಬೆಲೆಯ ನೋಟುಗಳನ್ನೇ ಮುದ್ರಿಸಲು ಮೈಸೂರು ಮುದ್ರಾಣಲಯ ಸಜ್ಜಾಗಿದೆ.
ಅಷ್ಟೇ ಅಲ್ಲದೆ 2000ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನೂ ಸಹ ನಿಲ್ಲಿಸಿ ಕೂಡಲೇ 500ರೂ. ನೋಟುಗಳ ಮುದ್ರಣ ಕಾರ್ಯ ಕೈಗೆತ್ತಿಕೊಳ್ಳುಲು ಮುದ್ರಣಾಲಯ ಮುಂದಾಗಿದೆ.
ಶೀಘ್ರ ದೇಶದ ಎಲ್ಲಾ ಬ್ಯಾಂಕ್ ಗಳು ಮತ್ತು ಎಟಿಎಂ ಘಟಕಗಳಿಗೆ 500ರೂ. ನೋಟುಗಳನ್ನು ತಲುಪಿಸಲು ಆರ್ ಬಿ ಐ ಸಿದ್ಧತೆ ಮಾಡಿಕೊಂಡಿದೆ.
500ರೂ. ಮುಖಬೆಲೆಯ ನೋಟುಗಳು ಹೆಚ್ಚು ಪುರೈಕೆಯಾದರೆ ಚಿಲ್ಲರೆ ಸಮಸ್ಯೆಗೆ ಪರಿಹಾರ ದೊರೆಯುವುದಷ್ಟೇ ಅಲ್ಲದೆ. ವ್ಯಾಪಾರ ವಹಿವಾಟು ಕೂಡ ಸರಾಗವಾಗಿ ನಡೆಯುತ್ತದೆ.