ರೌಡಿಗಳ ಪಾಲಿಗೆ ಸಿಂಹಸ್ವಪ್ನವಾದ ಮೈಸೂರಿನ ಪೊಲೀಸ್ ಆಯುಕ್ತ
ಮೈಸೂರು, ಜನವರಿ 9: ಮೈಸೂರಿನಲ್ಲಿ ಮತ್ತೆ ರೌಡಿಸಂ ಮರುಕಳಿಸಿದೆ. ಭಾನುವಾರ ರೋಲ್ ಕಾಲ್ ನೀಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೋಬ್ಬರ ಮೇಲೆ ಹಲ್ಲೆ ನಡೆಸಿದ ರೌಡಿ ಶೀಟರ್ ನನ್ನು ಜಯಲಕ್ಮಿಪುರಂ ಠಾಣೆಯ ಪೊಲೀಸರು ಬಂಧಿಸಿದ್ದು, ಇದೀಗ ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರರಾವ್ ರೌಡಿಶೀಟರ್ ಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲು ಮುಂದಾಗಿದ್ದಾರೆ.
ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರರಾವ್ ನಗರದ ಎಲ್ಲ ಠಾಣೆಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಯಾವುದೇ ಏರಿಯಾಗಳಲ್ಲಿ ರೌಡಿಸಂ ನಡೆಯಬಾರದು. ಎಲ್ಲ ಠಾಣೆಗಳ ವ್ಯಾಪ್ತಿಯಲ್ಲಿರುವ ರೌಡಿಶೀಟರ್ ಗಳನ್ನು ಠಾಣೆಗೆ ಕರೆಸಿ ಬುದ್ಧಿ ಹೇಳಿ ಎಚ್ಚರಿಕೆ ನೀಡಿ. ಮತ್ತೆ ಅವರು ರೌಡಿಸಂ ನಡೆಸುತ್ತಿದ್ದರೆ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಿ, ಕ್ರಮಕೈಗೊಳ್ಳದಿದ್ದಲ್ಲಿ ಠಾಣಾಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.[ಮೈಸೂರಿನಲ್ಲಿ ಕಾರು ಪಲ್ಟಿ: ದಂತ ವೈದ್ಯ ಸ್ಥಳದಲ್ಲೇ ಸಾವು]
ಯಾವುದೇ ಕಾಲೇಜಿನ ಎದುರು ಪುಂಡುಪೋಕರಿಗಳು ಹುಡುಗಿಯರನ್ನು ಚುಡಾಯಿಸುವುದು ಅಥವಾ ದಾಂಧಲೆ ನಡೆಸುವುದನ್ನು ಮಾಡಬಾರದು. ಅಂಗಡಿ ಮುಂಗಟ್ಟುಗಳ ಮುಂದೆ ಗುಂಪುಗುಂಪಾಗಿ ನಿಂತು ಗಲಾಟೆ ನಡೆಸುತ್ತಿರುವುದು ಕಂಡು ಬಂದಲ್ಲಿ ತಕ್ಷಣ ಮಾಹಿತಿ ನೀಡಿ, ಅಂಥಹವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.[ಮೈಸೂರಿನಲ್ಲಿ ವಿಷ ಸೇವಿಸಿ ಪೇದೆ ಸಾವಿಗೆ ಶರಣು]
ಕಳೆದ ತಿಂಗಳಿನಲ್ಲಿ ಕುವೆಂಪುನಗರ ಠಾಣಾವ್ಯಾಪ್ತಿಯಲ್ಲಿ ಕೇಟರಿಂಗ್ ನಲ್ಲಿಯೂ ರೌಡಿಶೀಟರ್ ಗಳು ನುಗ್ಗಿ ದಾಂಧಲೆ ನಡೆಸಿದ್ದರು. ಇದೀಗ ಮತ್ತೆ ಅದೇ ಘಟನೆ ಪುನರಾವರ್ತನೆಯಾಗಿದೆ. ಕೆಲವು ವರ್ಷಗಳ ಹಿಂದೆ ಮಹಿಳೆಯ ಕೊಲೆಯೊಂದರಲ್ಲಿ ಭಾಗಿಯಾಗಿ, 6ತಿಂಗಳು ಶಿಕ್ಷೆ ಅನುಭವಿಸಿ ಹೊರಬಂದ ರೌಡಿಶೀಟರ್ ಭಾನುವಾರ ಎಸ್ ಜೆಇಸಿ ರಸ್ತೆಯಲ್ಲಿರುವ ಕಣ್ಣನ್ ಬೇಕರಿಗೆ ಹೋಗಿದ್ದು, ರೋಲ್ ಕಾಲ್ ನೀಡುವಂತೆ ಕೇಳಿದ್ದಾನೆ ಎನ್ನಲಾಗಿದೆ.
ಮಾಮೂಲಿ ಕೊಡದಿರುವುದಕ್ಕೆ ಆತನ ತಲೆಗೆ ಪೆಪ್ಸಿ ಬಾಟಲಿಯಿಂದ ಬಲವಾಗಿ ಹೊಡೆದಿದ್ದಾನೆ. ಇದರಿಂದ ತೀವ್ರ ಗಾಯಗೊಂಡಿರುವ ಬೇಕರಿ ಮಾಲೀಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಕುರಿತಂತೆ ಜಯಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.