ಮಹಾರಾಣಿ ಕಾಲೇಜಿಗೆ ಮೈಸೂರು ಮೇಯರ್ ಭೇಟಿ
ಮೈಸೂರು, ಮೇ 27: ಮೈಸೂರು ನಗರದ ಜೆ.ಎಲ್.ಬಿ ರಸ್ತೆಯಲ್ಲಿರುವ ಸರ್ಕಾರಿ ಮಹಾರಾಣಿ ಕಾಲೇಜಿನ ಹಾಸ್ಟೆಲ್ ಗೆ ಮೇಯರ್ ದಿಢೀರ್ ಭೇಟಿ ನೀಡಿದ್ದಾರೆ.
ಇದೇ ಹಾಸ್ಟೆಲ್ ವಿದ್ಯಾರ್ಥಿನಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆಂಬ ಮಾಹಿತಿ ಮೇರೆಗೆ ಮೇಯರ್ ರವಿಕುಮಾರ್ ಎಂ.ಜೆ ಮಹಾರಾಣಿ ಕಾಲೇಜಿನ ಹಾಸ್ಟೆಲ್ ಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಬಗ್ಗೆ ಮಾಹಿತಿ ಪಡೆದುಕೊಂಡರು. ಇದೇ ವೇಳೆ ವಿದ್ಯಾರ್ಥಿನಿಯರು ಇಲ್ಲಿನ ಶುಚಿತ್ವದ ಬಗ್ಗೆ ಮೇಯರ್ ಬಳಿ ತಮ್ಮ ಅಳಲು ತೋಡಕೊಂಡಿದ್ದಾರೆ. ಅಷ್ಟೇ ಅಲ್ಲದೇ ಅಲ್ಲಿನ ಸಮಸ್ಯೆಗಳಿಗೆ ಶೀಘ್ರ ಪರಿಹಾರೋಪಾಯ ಕಂಡುಹಿಡಿಯುವುದಾಗಿ ಭರವಸೆ ಸಹ ನೀಡಿದ್ದಾರೆ.
ವಾರ್ಡನ್ ನೇಮಕ: ಡೆಂಗ್ಯೂ ಜ್ವರದಿಂದ ಮಹಾರಾಣಿ ಕಾಲೇಜು ವಿದ್ಯಾರ್ಥಿನಿ ಸಾವು ಹಿನ್ನೆಲೆಯಲ್ಲಿ ಮಹಾರಾಣಿ ಕಾಲೇಜು ಹಾಸ್ಟೆಲ್ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿ ವಾರ್ಡನ್ ಬದಲಿಸುವಂತೆ ಆಗ್ರಹಿಸಿದ್ದರು. ಇದೀಗ ಅವರ ಆಗ್ರಹಕ್ಕೆ ಮಣಿದ ಕಾಲೇಜು ಆಡಳಿತ ಮಂಡಳಿ ಇದೀಗ ನೂತನ ವಾರ್ಡನ್ ನೇಮಿಸಿದೆ.
ಬಿಎಸ್ಸಿ ದ್ವಿತೀಯ ವರ್ಷದ ವಿದ್ಯಾರ್ಥಿನಿ ಸಂಚಿತ ಎಸ್. ಆರಾಧ್ಯ ಹಾಸ್ಟೇಲ್ ನಲ್ಲಿ ಕಲುಷಿತ ಕುಡಿಯುವ ನೀರು ಸೇವಿಸಿ ಜ್ವರ ಬಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಇದೀಗ ಇನ್ನೂ ಇಪ್ಪತ್ತು ವಿದ್ಯಾರ್ಥಿನಿಯರಿಗೆ ಜ್ವರ ಬಂದಿದ್ದು, ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದರಿಂದ ಹಾಸ್ಟೆಲ್ ವಾರ್ಡನ್ ಲತಾ ಅವರ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು .ಲತಾ ಅವರನ್ನು ಅಮಾನತ್ತು ಮಾಡುವಂತೆ ಆಗ್ರಹಿಸಿದ್ದರು.