ದಕ್ಷಿಣ ಭಾರತದ ಸೋಮಶೈಲ ಮುಡುಕುತೊರೆಯಲ್ಲಿ ಜಾತ್ರೆ ಸಂಭ್ರಮ!
ಮುಡುಕುತೊರೆ ಜಾತ್ರೆ ಬಹಳ ಹೆಸರುವಾಸಿ. ಜನವರಿ 30ರಿಂದಲೇ ಶುರುವಾಗಿದೆ. ಫೆಬ್ರವರಿ 15ರವರೆಗೆ ನಡೆಯುತ್ತದೆ. ಇದರ ಮಧ್ಯೆ ರಾಸುಗಳ ಜಾತ್ರೆ ಕೂಡ ಬಲೇ ಜೋರು. ನೀವು ಯಾವುದೇ ಜಿಲ್ಲೆ, ಊರಿನವರಾಗಿದ್ದರೂ ಖಂಡಿತಾ ಜಾತ್ರೆ ತಪ್ಪಿಸಿಕೊಳ್ಳಬೇಡಿ
ಮೈಸೂರು, ಫೆಬ್ರವರಿ 2: ಐತಿಹಾಸಿಕ ಪವಿತ್ರ ಕ್ಷೇತ್ರವಾಗಿ, ದಕ್ಷಿಣ ಭಾರತದ ಸೋಮಶೈಲ ಎಂದೇ ಕರೆಯುವ ತಿ.ನರಸೀಪುರ ತಾಲೂಕಿನ ಮುಡುಕುತೊರೆಯಲ್ಲಿ ಈಗಾಗಲೇ ಜಾತ್ರೆ ಸಂಭ್ರಮ ಆರಂಭವಾಗಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.
ಜಾತ್ರೆಯ ಪ್ರಮುಖ ಕ್ಷಣವಾದ ಭ್ರಮರಾಂಬ ಸಮೇತ ಮಲ್ಲಿಕಾರ್ಜುನ ಸ್ವಾಮಿಯ ಬ್ರಹ್ಮರಥೋತ್ಸವವು ದುರ್ಮುಖಿನಾಮ ಸಂವತ್ಸರದ ಮಾಘ ಶುದ್ಧ ದಶಮಿ, ರೋಹಿಣಿ ನಕ್ಷತ್ರ ಇರುವ ಫೆಬ್ರವರಿ 6ರ ಸೋಮವಾರ ಮಧ್ಯಾಹ್ನ ನಡೆಯಲಿದ್ದು, ಫೆಬ್ರವರಿ 9ರ ಗುರುವಾರ ರಾತ್ರಿ ತೆಪ್ಪೋತ್ಸವ ಹಾಗೂ 14ರಂದು ಪರ್ವತ ಪರಿಷೆ (ಬಸವನ ಮಾಲೆ) ಜರುಗಲಿದೆ.[ಚುಂಚನಕಟ್ಟೆ ಜಾತ್ರೇಲಿ ದನಗಳ ಗೋಳು, ರೈತರ ಬಾಳು ಕೇಳೋರಿಲ್ಲ!]
ಜಾತ್ರೆಯ ಅಂಗವಾಗಿ ಜನವರಿ 30ರಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಫೆಬ್ರವರಿ 15ರಂದು ಮಹಾಭಿಷೇಕ ಹಾಗೂ ಶೆಟ್ಟರ ಸೇವೆಯೊಂದಿಗೆ ಜಾತ್ರೋತ್ಸವಕ್ಕೆ ತೆರೆ ಬೀಳಲಿದೆ. ಜಾತ್ರೋತ್ಸವಕ್ಕೆ ಅಗತ್ಯ ಸಿದ್ಧತೆಗಳನ್ನು ತಾಲೂಕು ಆಡಳಿತ ಮಾಡಿಕೊಂಡಿದ್ದು, ಭಾಕ್ತರಿಗಾಗಿ ಮೂಲಸೌಕರ್ಯವನ್ನು ಕಲ್ಪಿಸಲಾಗಿದೆ.
ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ರಾಸುಗಳ ಪರಿಷೆ ಮುಡುಕು ತೊರೆ ಜಾತ್ರೋತ್ಸವಕ್ಕೆ ಮೆರುಗು ನೀಡುತ್ತಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ರೈತರು ಜಾನುವಾರುಗಳೊಂದಿಗೆ ಬಂದು, ವಾರಗಟ್ಟಲೆ ವಾಸ್ತವ್ಯವಿರುತ್ತಾರೆ. ವ್ಯಾಪಾರ, ವಹಿವಾಟನ್ನು ಮುಗಿಸಿಕೊಂಡು ಉತ್ಸವದಲ್ಲಿ ಭಾಗವಹಿಸುವುದು ವಿಶೇಷವಾಗಿದೆ.[ಚಾಮರಾಜನಗರ ದೇಗುಲದಲ್ಲಿ ಎಳನೀರು ದೀಪ, ಗಾಳಿ ಬಂದ್ರೂ ಆರೋದಿಲ್ಲ!]
ಈಗಾಗಲೇ ಮುಡುಕುತೊರೆಗೆ ರಾಸುಗಳು ಆಗಮಿಸಿದ್ದು, ಅವುಗಳಿಗೆ ಮೇವು- ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಬರದ ಹಿನ್ನೆಲೆಯಲ್ಲಿ ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ರಾಸುಗಳ ಸಂಖ್ಯೆ ಕಡಿಮೆಯೇ ಎನ್ನಬೇಕು. ರಾಸುಗಳ ಪರಿಷೆ ಆರಂಭಗೊಂಡಿದ್ದು, ಜನರಿಂದ ಜಾತ್ರೆಯು ಕಳೆಗಟ್ಟಲಾರಂಭಿಸಿದೆ.