ಕೋರ್ಟ್ ಆದೇಶದ ಮೇರೆಗೆ ಮೂಡಾ ವಿಶೇಷಾಧಿಕಾರಿಗಳ ಕಚೇರಿ ಜಪ್ತಿ
ರೈತರಿಗೆ ಭೂಸ್ವಾಧೀನ ಪರಿಹಾರ ಹಣ ನೀಡದೆ ಸತಾಯಿಸುತ್ತಿದ್ದ ವಿಶೇಷ ಭೂಸ್ವಾಧೀನ ಅಧಿಕಾರಿಗಳ ವಿರುದ್ಧ ನ್ಯಾಯಾಲಯ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ, ಕಚೇರಿಯನ್ನು ಜಪ್ತಿ ಮಾಡಲಾಗಿದೆ.
ಮೈಸೂರು, ಏಪ್ರಿಲ್ 11: ರೈತರ ಭೂಸ್ವಾಧೀನ ಪರಿಹಾರ ಹಣವನ್ನು ನೀಡದ ಹಿನ್ನೆಲೆಯಲ್ಲಿ ಮೈಸೂರು ಎರಡನೇ ಜೆಎಂಎಫ್ ಸಿ ನ್ಯಾಯಾಲಯ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(MUDA)ದ ವಿಶೇಷ ಭೂಸ್ವಾಧೀನ ಕಚೇರಿಯನ್ನು ಜಪ್ತಿ ಮಾಡುವಂತೆ ಆದೇಶ ನೀಡಿದೆ.
ಮೂಡಾದ ವಿಶೇಷ ಭೂ ಸ್ವಾಧೀನ ಕಚೇರಿ ರೈತರ ಭೂ ಸ್ವಾಧೀನಕ್ಕೆ ನೀಡಬೇಕಾಗಿದ್ದ ಪರಿಹಾರವನ್ನ ನೀಡದೆ ಸತಾಯಿಸುತ್ತಿತ್ತು, ಇಲ್ಲಿನ ಉತ್ತನ ಹಳ್ಳಿ ಗ್ರಾಮದ ಕರಿಯಪ್ಪ ಎಂಬ ರೈತನಿಗೆ ನೀಡಬೇಕಿದ್ದ ಬಾಕಿಹಣವನ್ನು 10 ವರ್ಷವಾದರೂ ನೀಡಿರಲಿಲ್ಲ.[ಮೈಸೂರಿನಲ್ಲಿ ವಿಮಾನಯಾನ ಆರಂಭಿಸಲು ಪ್ರತಾಪ್ ಸಿಂಹ ಮನವಿ]
ಕಚೇರಿಗೆ ಅಲೆದು ಅಲೆದು ಸುಸ್ತಾಗಿದ್ದ ಕರಿಯಪ್ಪ ಈಗಿನ ಮಾರ್ಕೆಟ್ ದರದಲ್ಲಿ 1.3 ಲಕ್ಷಕ್ಕೂ ಹೆಚ್ಚು ಹಣ ನೀಡಬೇಕೆಂದು ಮೈಸೂರಿನ ಎರಡನೇ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಈ ಸಂಬಂಧ ದಾವೆ ಹೂಡಿದ್ದರು. ನ್ಯಾಯಾಲಯ ದಾವೆಯನ್ನು ಪರಿಶೀಲಿಸಿ ರೈತನಿಗೆ ತಕ್ಷಣ ಬಾಕಿ ಹಣ ನೀಡುವಂತೆ ಆದೇಶ ನೀಡಿತ್ತು.[ಅಪ್ರಾಪ್ತನನ್ನು ವರಿಸಿದ 24ರ ಯುವತಿ : ಠಾಣೆಯ ಮೆಟ್ಟಿಲೇರಿದ ಪ್ರಕರಣ]
ಮೂಡಾ ವಿಶೇಷ ಭೂ ಸ್ವಾಧಿನ ಕಚೇರಿಗೆ ನಿನ್ನೆ ಆಗಮಿಸಿದ ಕೋರ್ಟ್ ಸಿಬ್ಬಂದಿ ಕಚೇರಿಯ ಪೀಠೋಪಕರಣ ಜಪ್ತಿ ಮಾಡಿದ್ದಾರೆ. ಈ ವೇಳೆ ಭೂಸ್ವಾಧೀನ ಕಚೇರಿಯ ಅಧಿಕಾರಿಗಳು ಮಾಧ್ಯಮದವರನ್ನು ಕಂಡು ಓಟ ಕಿತ್ತಿದ್ದು, ಎಲ್ಲರನ್ನೂ ನಗೆ ಪಾಟಲಿಗೀಡುಮಾಡಿತ್ತು.