ಬನ್ನೂರಿನಲ್ಲಿ ತಾಯಿ– ಮಗು ನೇಣಿಗೆ ಶರಣು
ಮೈಸೂರು, ಜನವರಿ 31 : ಕೌಟುಂಬಿಕ ಕಲಹದಿಂದ ಮನನೊಂದ ಮಹಿಳೆ ತನ್ನ ಮಗುವಿಗೆ ನೇಣು ಬಿಗಿದು ನಂತರ ತಾನೂ ನೇಣಿಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಬನ್ನೂರು ಸಮೀಪದ ಚಾಮನಹಳ್ಳಿ ಗ್ರಾಮದಲ್ಲಿ ಮಂಗಳವಾರ ಜರುಗಿದೆ.
ಭವ್ಯ (32), ಎಂಬುವರು ನೇಣಿಗೆ ಶರಣಾದ ಮಹಿಳೆ. ಈಕೆ ತನ್ನ ಒಂದೂವರೆ ವರ್ಷದ ಹೆಣ್ಣು ಮಗು ಗಗನಳನ್ನು ನೇಣು ಬಿಗಿದು ಕೊಂದು ನಂತರ ತಾನೂ ನೇಣಿಗೆ ಶರಣಾಗಿದ್ದಾಳೆ ಎನ್ನಲಾಗುತ್ತಿದೆ.[ಮಂಗಳೂರು ಆಸ್ಪತ್ರೆಯಲ್ಲಿ ಮಹಿಳೆ ನೇಣಿಗೆ ಶರಣು]
ಭವ್ಯ ಬನ್ನೂರಿನ ಖಾಸಗಿ ಶಾಲೆಯೊಂದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಕಳೆದ 5 ವರ್ಷಗಳ ಹಿಂದೆ ಇದೇ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ದೇವರಾಜೇಗೌಡ ಎಂಬುವರ ಜೊತೆ ಮದುವೆಯಾಗಿತ್ತು.
ಕೌಟುಂಬಿಕ ಕಲಹದಿಂದ ಪ್ರತಿನಿತ್ಯ ಜಗಳ ಸಹ ನಡೆಯುತ್ತಿತ್ತು. ಜೊತೆಗೆ ಗಂಡ ಅನುಮಾನದಿಂದ ನೋಡುತ್ತಿದ್ದ. ಇದರಿಂದ ಮನನೊಂದ ಭವ್ಯ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಸ್ಥಳಕ್ಕೆ ಬನ್ನೂರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.[ಗುಡಿಬಂಡೆ : ಹಣ ಕಳೆದುಕೊಂಡ ನೋವಿನಲ್ಲಿ ಮಹಿಳೆ ನೇಣಿಗೆ ಶರಣು]
ಬ್ಯಾಗ್ ನಲ್ಲಿಟ್ಟ ಚಿನ್ನಾಭರಣ ಕಳವು
ಮೈಸೂರು: ಬೆಂಗಳೂರಿನಿಂದ ಮೈಸೂರಿಗೆ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗ್ ನಲ್ಲಿದ್ದ 115 ಗ್ರಾಂ ಚಿನ್ನಾಭರಣ ಕಳವಾಗಿರುವ ಘಟನೆ ನಡೆದಿದೆ.
ಬೆಂಗಳೂರಿನ ಬಬಿತಾ ಚಿನ್ನಾಭರಣ ಕಳೆದುಕೊಂಡವರು. ಬಬಿತಾ ಅವರು ನಾಲ್ಕು ಬ್ಯಾಗ್ ಹಾಗೂ ಮಕ್ಕಳೊಂದಿಗೆ ಬೆಂಗಳೂರಿನ ಗೊಟ್ಟಿಗೇರಿಯಿಂದ ಮೈಸೂರಿಗೆ ಪ್ರಯಾಣ ಬೆಳೆಸಿದ್ದರು. ನಗರದ ಬಸ್ ನಿಲ್ದಾಣಕ್ಕೆ ಬಂದ ಬಳಿಕ ಬ್ಯಾಗ್ ಪರಿಶೀಲಿಸಿದಾಗ ಚಿನ್ನಾಭರಣ ಕಳವಾಗಿರುವುದು ಗಮನಕ್ಕೆ ಬಂದಿದೆ. ಪ್ರಕರಣ ಲಷ್ಕರ್ ಠಾಣೆಯಲ್ಲಿ ದಾಖಲಾಗಿದೆ.