ಮೈಸೂರಲ್ಲಿ ಶೂಟ್ ಮಾಡ್ತೀವಿ ಅಂದೋರಿಗೆ ಬಿತ್ತು ಧರ್ಮದೇಟು
ಮೈಸೂರು, ಜನವರಿ 28 : ಮೈಸೂರಿನಲ್ಲಿ ಮಚ್ಚು, ಲಾಂಗುಗಳು ಸುದ್ದಿ ಮಾಡಿರುವುದು ಈಗ ಹಳೆಯ ಸುದ್ದಿ. ಈಗೇನಿದ್ದರೂ ಗನ್ ಶೋ. ಮೈಸೂರಿನ ಗೋಕುಲಂ 2ನೇ ಹಂತದಲ್ಲಿ ವ್ಯಕ್ತಿಯೋರ್ವರಿಗೆ ಗನ್ ತೋರಿಸುವ ಮೂಲಕ ವ್ಯಕ್ತಿಗಳಿಬ್ಬರು ಸಾರ್ವಜನಿಕರಿಂದ ಧರ್ಮದೇಟು ತಿಂದು ಆಸ್ಪತ್ರೆ ಸೇರಿರುವ ಘಟನೆ ನಡೆದಿದೆ.
ಮೈಸೂರಿನ ಗೋಕುಲಂ ನಿವಾಸಿ ರಾಮಕೃಷ್ಣ ಎಂಬವರು ಗೋಕುಲಂ 2ನೇ ಹಂತದಲ್ಲಿ ಬೀಡಾ ಅಂಗಡಿಯಲ್ಲಿ ಬೀಡಾ ಕೊಳ್ಳುತ್ತಿದ್ದಾಗ ಕಾರಿನಲ್ಲಿ ಬಂದಿಳಿದ ಐವರು ಯುವಕರ ಗುಂಪು ಅವರಿಗೆ ಗನ್ ತೋರಿಸಿದೆ ಎನ್ನಲಾಗಿದೆ.
ರಾಮಕೃಷ್ಣ ಎಂಬವರು ಯಾವುದೋ ಕೆಲಸದ ನಿಮಿತ್ತ ಅವರಿಗೆ ಒಂದು ಲಕ್ಷರೂ.ನೀಡಿದ್ದರು. ಆದರೆ ಕೆಲಸ ಮಾಡದ ಹಿನ್ನೆಲೆಯಲ್ಲಿ ಅದನ್ನು ವಾಪಸ್ ಕೇಳಿದ್ದಾರೆ.
ಆಗ ಐವರ ತಂಡದಲ್ಲಿದ್ದ ಉಮೇಶ್ ಮತ್ತು ಸುಮಂತ್, ಕೇಶವ್, ರಾಮಕೃಷ್ಣ ಎಂಬವರಿಗೆ ಗನ್ ತೋರಿಸಿ ಬೆದರಿಸಿದ್ದು, ಇದನ್ನು ನೋಡಿದ ಸಾರ್ವಜನಿಕರು ಸ್ಥಳಕ್ಕೆ ಬಂದ ವೇಳೆ ಅವರು ಅಲ್ಲಿಂದ ಪಲಾಯನಗೈದಿದ್ದಾರೆ. ಗನ್ ತೋರಿಸುವಾಗ ಪೊಲೀಸ್ ಆಯುಕ್ತರು ಏನು ಮಾಡೋದಕ್ಕೆ ಸಾಧ್ಯ ಎಂದು ಅವಾಜ್ ಹಾಕಿದ್ದಾರೆ ಎನ್ನಲಾಗಿದೆ.
ಆಗ ಸ್ಥಳದಲ್ಲಿದ್ದ ಮುರಳೀಕೃಷ್ಣ ಮತ್ತು ದಿವಾಕರ್ ನ್ನು ಹಿಡಿದುಕೊಂಡ ಸಾರ್ವಜನಿಕರು ಅವರನ್ನು ಚೆನ್ನಾಗಿ ಥಳಿಸಿ ಜಯಲಕ್ಷ್ಮಿಪುರಂ ಪೊಲೀಸರಿಗೊಪ್ಪಿಸಿದ್ದು, ಇದೀಗ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಮಕೃಷ್ಣ ಜಯಲಕ್ಷ್ಮಿಪುರಂ ಠಾಣೆಗೆ ದೂರನ್ನು ನೀಡಿದ್ದು, ಇನ್ಸ್ಪೆಕ್ಟರ್ ರವೀಂದ್ರ ದೂರನ್ನು ಸ್ವೀಕರಿಸಿದ್ದಾರೆ.
ಈ ಐವರೂ ಮುಖ್ಯಮಂತ್ರಿಗಳ ದಿವಂಗತ ಪುತ್ರ ರಾಕೇಶ್ ಜೊತೆ ಮೊದಲು ಗುರುತಿಸಿಕೊಂಡವರಾಗಿದ್ದು, ಅವರ ಮರಣದ ಸಂದರ್ಭ ಕೇಶವ್ ಮನೆಗೆ ರಾಮಕೃಷ್ಣ ಮತ್ತವರ ಬೆಂಬಲಿಗರು ಕಲ್ಲು ತೂರಿದ್ದರು ಎನ್ನಲಾಗಿದೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ರಾಮಕೃಷ್ಣ ಅವರಿಗೆ ಗನ್ ತೋರಿಸಿ ಬೆದರಿಸಲಾಗಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಡಿಸಿಪಿ ಶೇಖರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದು, ಮುಂದಿನ ಕ್ರಮ ಕೈಗೊಳ್ಳುವತ್ತ ಗಮನ ಹರಿಸಿದ್ದಾರೆ.