ಅಕ್ರಮ ಔಷಧ ಕೂಡಿಟ್ಟ ಮಾಲೀಕರಿಗೆ ದಂಡ, ಜೈಲು ಶಿಕ್ಷೆ
ಮೈಸೂರು, ಏಪ್ರಿಲ್ 26 : ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬಿ.ಎಂ. ರಸ್ತೆಯ ಸಂತೆಪೇಟೆಯಲ್ಲಿರುವ ಲಕ್ಷ್ಮಿ ಕ್ಲಿನಿಕ್ನಲ್ಲಿ ಔಷಧ ಪರವಾನಗಿ ಹೊಂದದೆ ಔಷಧ ದಾಸ್ತಾನು ಮಾಡಿದಕ್ಕಾಗಿ ಅದರ ಮಾಲೀಕರಾದ ಪ್ರಕಾಶ್ ಅವರಿಗೆ ಸಿವಿಲ್ ಜಡ್ಜ್ ಮತ್ತು ಜೆ.ಎಮ್.ಎಫ್.ಸಿ. ಪಿರಿಯಾಪಟ್ಟಣ ನ್ಯಾಯಾಲಯವು 90 ಸಾವಿರ ರು. ದಂಡ ಹಾಗೂ ಸಾದಾ ಜೈಲು ಶಿಕ್ಷೆಯನ್ನು ವಿಧಿಸಿದೆ.
ಈ ಪರವಾನಗಿ ಹೊಂದದ ಸಂಸ್ಥೆಗೆ ಔಷಧಗಳನ್ನು ಸರಬರಾಜು ಮಾಡಿದ ಸರಬರಾಜುದಾರರಾದ ಚಾಮ್ಲಾಲ್- ಹೀರಾ ಡ್ರಗ್ ಹೌಸ್, ಜೈರೂಪ್ -ರಾಮ್ ದೇವಸಿ, ಬಿ.ಎಲ್. ಶಂಕರ್-ರೇಣುಕಾ ಏಜೆನ್ಸೀ, ಕೆ.ವಿ. ಪ್ರಕಾಶ್- ಗಾಯತ್ರಿ ಎಂಟರ್ಪ್ರೈಸಸ್, ರಾಜೇಶ್ ಕುಮಾರ್ ಆರ್ -ಮಯೂರ್ ಏಜೆನ್ಸೀಸ್. ಕೆ. ರಮೇಶ್-ರಮೇಶ್ ಫಾರ್ಮಾ, ಪಾರ್ಥ ಸಾರಥಿ ಎಸ್-ಪ್ರಿಯಾ ಏಜೆನ್ಸೀಸ್, ಎ. ಸುಬ್ರಮಣ್ಯ- ಶ್ರೀಕಂಠೇಶ್ವರ ಫಾರ್ಮಾ, ಕೆ.ಎಮ್. ರವಿಕುಮಾರ್- ಶ್ರೀ ಶ್ರೀಕಂಠೇಶ್ವರ ಫಾರ್ಮಾ, ರಘುಪತಿ ಹೆಗಡೆ-ಶ್ರೀ ಶ್ರೀಕಂಠೇಶ್ವರ ಫಾರ್ಮಾ ಸಂಸ್ಥೆಗಳಿಗೂ ದಂಡ ಮತ್ತು ಸಾದಾ ಜೈಲು ವಿಧಿಸಲಾಗಿದೆ. [ಪಿರಿಯಾಪಟ್ಟಣದಲ್ಲಿ ಮಿಸ್ಡ್ ಕಾಲ್ ಪ್ರೇಮಾಯಣ]
ಈ ಸಂಸ್ಥೆಗಳಲ್ಲಿ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ತನಿಖೆ ಕೈಗೊಂಡು ಔಷಧ ಮತ್ತು ಕಾಂತಿವರ್ಧಕ ಅಧಿನಿಯಮದ ಉಲ್ಲಂಘನೆಗೆ ಮೊಕದ್ದಮೆಯನ್ನು ಹೂಡಲಾಗಿತ್ತು. ಅವರಿಗೆಲ್ಲಾ ತಲಾ ರು.25 ಸಾವಿರದಂತೆ ಒಟ್ಟು 3,40,000 ರು.ಗಳ ದಂಡಶುಲ್ಕವನ್ನು ಮತ್ತು ನ್ಯಾಯಾಲಯದ ಅವಧಿ ಮುಗಿಯುವವರೆಗೂ ಸಾದಾ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಲಾಗಿದೆ.
ಈ ಪ್ರಕರಣದಲ್ಲಿ ಅಂದಿನ ಸಹಾಯಕ ಔಷಧ ನಿಯಂತ್ರಕರಾದ ವಿ.ಎಲ್. ಹಂಬರ್, ಮೈಸೂರು ವೃತ್ತ - 1 ಇವರ ಮೇಲ್ವಿಚಾರಣೆಯಲ್ಲಿ ಅಂದಿನ ಔಷಧ ಪರಿವೀಕ್ಷಕರಾದ ಎಂ. ಸುರೇಶ್, ಮೈಸೂರು - ವೃತ್ತ -1 ಇವರು ತನಿಖೆ ನಡೆಸಿ ಮೊಕದ್ದಮೆ ದಾಖಲಿಸಿದ್ದರು. [ಪಿರಿಯಾಪಟ್ಟಣದಲ್ಲೊಂದು ಪರಿಸರ ಸ್ನೇಹಿ ಅಂಗನವಾಡಿ!]